ಸಾರಾಂಶ
ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ದಲಿತ ಸಮುದಾಯಕ್ಕೂ ಬಿಜೆಪಿ ನ್ಯಾಯ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಹೇಳಿಕೆ
ಕನ್ನಡಪ್ರಭ ವಾರ್ತೆ ಕೊಪ್ಪಳಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ದಲಿತ ಸಮುದಾಯಕ್ಕೂ ಬಿಜೆಪಿ ನ್ಯಾಯ ನೀಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಹೇಳಿದರು.
ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ನಲ್ಲಿ ನಾರಾಯಣಸ್ವಾಮಿ ಅವರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ನಮ್ಮ ಸಮುದಾಯದಲ್ಲಿ ಖುಷಿ ತರಿಸಿದೆ. ಇದು ೧.೦೭ ಕೋಟಿ ಪರಿಶಿಷ್ಟ ಸಮುದಾಯಕ್ಕೆ ಖುಷಿ ಕೊಟ್ಟಿರುವ ವಿಷಯವಾಗಿದೆ. ಬಿಜೆಪಿ ಬಗ್ಗೆ ಕೋಮುವಾದಿ ಪಕ್ಷ ಎಂದು ಟೀಕೆ ಮಾಡುತ್ತಿದ್ದವರು ಈಗ ಇದನ್ನು ನೋಡಿ ಬಾಯಿ ಬಡಿದುಕೊಳ್ಳುವಂತಾಗಿದೆ. ಬಿಜೆಪಿ ಕೋಮವಾದಿ ಅಲ್ಲ ಎನ್ನುವುದಕ್ಕೆ ಈ ನೇಮಕವೇ ಸಾಕ್ಷಿಯಾಗಿದೆ ಎಂದರು.ಕಾಂಗ್ರೆಸ್ ಸರ್ಕಾರ ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನ್ನು ಕೊಳ್ಳೆ ಹೊಡೆಯುವ ಕೆಲಸದಲ್ಲಿ ತಲ್ಲೀನವಾಗಿದೆ. ಅವರಿಗೆ ಜನರ ರಕ್ಷಣೆಯ ಬಗ್ಗೆ ಕಾಳಜಿಯಿಲ್ಲ. ಪರಿಶಿಷ್ಟರ ಬಗ್ಗೆ ಕಾಳಜಿ ಇಲ್ಲ. ಪರಿಶಿಷ್ಟರ ಮೇಲೆ ಸುಳ್ಳು ದೂರು ದಾಖಲಿಸುವ ಕೆಲಸ ಈ ಸರ್ಕಾರದಿಂದ ನಡೆದಿದೆ. ಇವರು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದರು.
ಇಡಿ ವಿರುದ್ಧ ಸರ್ಕಾರಿ ಅಧಿಕಾರಿ ದೂರು ನೀಡಿದ್ದು, ಆ ಪ್ರಕರಣ ತನಿಖೆಯಾಗಲಿ. ಎಲ್ಲವೂ ಬೆಳಕಿಗೆ ಬರಲಿದೆ. ಸಿಎಂ, ಡಿಸಿಎಂ ಅವರೇ ಅಧಿಕಾರಿಗೆ ಒತ್ತಡ ಹೇರಿ ದೂರು ಕೊಡಿಸಿರಬಹುದು. ನಮ್ಮ ಸರ್ಕಾರದಲ್ಲಿ ಹಗರಣ ನಡೆದಿವೆ ಎಂದಿರುವ ಸಿಎಂ ಸಿದ್ದರಾಮಯ್ಯ ಅವರು ಆಗ ಇವರೇ ವಿರೋಧ ಪಕ್ಷದ ಸ್ಥಾನದಲ್ಲಿದ್ದರಲ್ಲ ಆಗ ಏಕೆ ಅವುಗಳ ಬಗ್ಗೆ ಮಾತನಾಡಲಿಲ್ಲ ಎಂದು ತಿರುಗೇಟು ನೀಡಿದರು.ಮುಖಂಡರಾದ ಸುಂಕಪ್ಪ ಮಾಲಗಿತ್ತಿ, ಸಣ್ಣ ಕನಕಪ್ಪ ಛಲವಾದಿ, ಲಿಂಗರಾಜ ಕಟ್ಟಿಮನಿ, ಲಕ್ಷ್ಮಣ ಪೂಜಾರ ಉಪಸ್ಥಿತರಿದ್ದರು.