ಬೆಳಗಾವಿಗೆ ನ್ಯಾ.ಮಂಜುನಾಥ ನಾಯಕ್ ವರ್ಗಾವಣೆ

| Published : Nov 03 2025, 01:30 AM IST

ಸಾರಾಂಶ

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿ ಹಾಗೂ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ನಾಯಕ್ ಅವರನ್ನು ಬೆಳಗಾವಿ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿ ಉಚ್ಚ ನ್ಯಾಯಾಲಯವು ವರ್ಗಾವಣೆ ಮಾಡಿ ಅ.30ರಂದು ಅಧಿಕೃತ ಅಧಿಸೂಚನೆ ಹೊರಡಿಸಿ ಸರ್ಕಾರಕ್ಕೆ ಆದೇಶಿಸಿದೆ.

ಶಿವಮೊಗ್ಗ: ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿ ಹಾಗೂ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ನಾಯಕ್ ಅವರನ್ನು ಬೆಳಗಾವಿ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿ ಉಚ್ಚ ನ್ಯಾಯಾಲಯವು ವರ್ಗಾವಣೆ ಮಾಡಿ ಅ.30ರಂದು ಅಧಿಕೃತ ಅಧಿಸೂಚನೆ ಹೊರಡಿಸಿ ಸರ್ಕಾರಕ್ಕೆ ಆದೇಶಿಸಿದೆ.

ಮಂಜುನಾಥ್ ನಾಯಕ್ ಅವರು 2023ರ ಜೂನ್ ತಿಂಗಳಿನಲ್ಲಿ ಬೆಂಗಳೂರಿನ ಉಚ್ಛ ನ್ಯಾಯಾಲಯದಲ್ಲಿ ನೇಮಕಾತಿ ನಿಬಂಧಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡು ಶಿವಮೊಗ್ಗದಲ್ಲಿ ಪದಗ್ರಹಣ ಮಾಡಿಕೊಂಡಿದ್ದರು. ನ.3 ರಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಪದದಿಂದ ಮುಕ್ತಗೊಂಡು, ನ.5 ರಂದು ಬೆಳಗಾವಿಗೆ ತೆರಳಿ ಅಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಪದಗ್ರಹಣವನ್ನು ಮಾಡಲಿದ್ದಾರೆ. ಮಂಜುನಾಥ್ ನಾಯಕ್‌ ಅವರು ತಮ್ಮ ಸೇವಾ ಅವಧಿಯಲ್ಲಿ ಒಟ್ಟು 10 ರಾಷ್ಟ್ರೀಯ ಲೋಕ ಅದಾಲತ್‌ಗಳನ್ನು ಶಿವಮೊಗ್ಗ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಿ ವಿಚಾರಣಾ ಹಂತದಲ್ಲಿ ಬಾಕಿ ಇದ್ದ ಒಟ್ಟು 1,21,499 ಪ್ರಕರಣಗಳು ರಾಜಿ ಸಂಧಾನದ ಮೂಲಕ ಅಂತಿಮವಾಗಿ ವಿಲೇವಾರಿ ಮಾಡಲು ಮಾರ್ಗದರ್ಶನ ನೀಡಿ ಪಾತ್ರವನ್ನು ನಿರ್ವಹಿಸಿದ್ದಾರೆ.

ಇವರ ಸೇವಾ ಅವಧಿಯಲ್ಲಿ ವಿವಿಧ ಹುದ್ದೆಗಳಿಗೆ 50ಕ್ಕೂ ಹೆಚ್ಚು ಸಿಬ್ಬಂದಿ ನೇಮಕಾತಿ ಮಾಡಿಕೊಂಡಿದ್ದು, 54 ಸಿಬ್ಬಂದಿಗಳ ಸೇವೆಯನ್ನು ಪರಿಶೀಲಿಸಿ ಅವರಿಗೆ ಮುಂಬಡ್ತಿಯನ್ನು ನೀಡಿದ್ದಾರೆ. ಅಲ್ಲದೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 69 ಸಿಬ್ಬಂದಿ ತೃಪ್ತಿಕರವಾಗಿ ಪ್ರೊಬೇಷನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಆದೇಶ ಹೊರಡಿಸಿ ಅಂತಹ ಸಿಬ್ಬಂದಿಯನ್ನು ಸಾರ್ವಜನಿಕ ಸೇವೆಯಲ್ಲಿ ಕಾಯಂಗೊಳಿಸಿ ಆದೇಶಿಸಿದ್ದಾರೆ. ಇವರ ಅವಧಿಯಲ್ಲಿ ಹಲವಾರು ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಿ ಉಚ್ಚ ನ್ಯಾಯಾಲಯ ನಿಗದಿಪಡಿಸಿದ ನಿಯಮಕ್ಕಿಂತ ಮೂರು ಪಟ್ಟು ಅಧಿಕ ಪ್ರಕರಣಗಳಲ್ಲಿ ಆದೇಶ ನೀಡುವುದರ ಮೂಲಕ ವಿಲೇಗೊಳಿಸಿದ್ದಾರೆ. ವಿವಿಧ ಕಾನೂನು ಅರಿವು ಕಾರ್ಯಕ್ರಮಗಳು ಹಾಗೂ ಅಭಿಯಾನಗಳಲ್ಲಿ ಅನೇಕ ಸರ್ಕಾರಿ ಇಲಾಖೆಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಹಕಾರ ನೀಡುವ ಮೂಲಕ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಮಾನ್ಯ ಜನರಿಗೆ ಕಾನೂನು ಅರಿವನ್ನು ನೀಡುವಲ್ಲಿ ಹಾಗೂ ಅರ್ಹ ವ್ಯಕ್ತಿಗಳಿಗೆ ಕಾನೂನು ನೆರವನ್ನು ನೀಡುವಲ್ಲಿ ಮತ್ತು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿಚಾರಣಾ ಹಂತದ ವಿವಿಧ ಸ್ವರೂಪದ ಪ್ರಕರಣಗಳು ಅಂತಿಮವಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ್ದಾರೆ.

ಇವರ ಶ್ರೇಷ್ಠ ಸೇವೆ ಅತಿ ಹೆಚ್ಚು ಸಾರ್ವಜನಿಕರಿಗೆ ಲಭಿಸಲಿ, ಅವರು ವರ್ಗಾವಣೆಗೊಂಡು ತೆರಳುತ್ತಿರುವ ಸ್ಥಳದಲ್ಲಿ ಇನ್ನು ಹೆಚ್ಚಿನ ಸೇವಾ ಅವಕಾಶ ಲಭಿಸಲಿ ಎಂದು ಶಿವಮೊಗ್ಗ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ನ್ಯಾಯವಾದಿಗಳು, ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸಿಬ್ಬಂದಿ ವರ್ಗದವರು, ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.