ಸಾರಾಂಶ
ಕಲಬುರಗಿ-ಬೆಂಗಳೂರು (ಬೈಯ್ಯಪ್ಪನಹಳ್ಳಿ) ಮಧ್ಯೆ ಸಂಚರಿಸುವ ಸಾಪ್ತಾಹಿಕ ರೈಲಿಗೆ ಸಂಸದ ಡಾ.ಉಮೇಶ ಜಾಧವ್ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ-ಬೆಂಗಳೂರು (ಬೈಯ್ಯಪ್ಪನಹಳ್ಳಿ) ಮಧ್ಯೆ ಸಂಚರಿಸುವ ಸಾಪ್ತಾಹಿಕ ರೈಲಿಗೆ ಸಂಸದ ಡಾ.ಉಮೇಶ ಜಾಧವ್ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.ಕಲಬುರಗಿಯಿಂದ ಸಂಜೆ 5.10ಕ್ಕೆ ಹೊರಡುವ ಈ ರೈಲು (01111) ಮರುದಿನ ಬೆಳಗ್ಗಿನ ಜಾವ 4.15ಕ್ಕೆ ಬೈಯ್ಯಪ್ಪನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು ಇತರೆಡೆ ನಿಲ್ಲಲಿದೆ. ಪ್ರಸ್ತುತ ಈ ರೈಲು ಏಪ್ರಲ್ 4 ರಿಂದ ವಾರಕ್ಕೆ ಮೂರು ದಿನ ಸಂಚರಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಈ ಭಾಗದ ಜನ ಬೆಂಗಳೂರಿಗೆ ತೆರಳಲು ಅನುಕೂಲಕರವಾಗಿದ್ದು, ಪ್ರಗತಿಗೆ ದೊಡ್ಡ ಉತ್ತೇಜನ ನೀಡಲಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಕಲಬುರಗಿಯಿಂದ ಬೆಂಗಳೂರಿಗೆ ಸಂಚರಿಸಲು ವಂದೇ ಭಾರತ್ ಸೌಲಭ್ಯವನ್ನೂ ನೀಡಿದ್ದು, ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಈ ಭಾಗದ ಬಡ ಜನರಿಗೆ ಹಾಗೂ ಜನಸಾಮಾನ್ಯರಿಗೆ ಕಲಬುರಗಿಯಿಂದ ಬೆಂಗಳೂರಿಗೆ ಹೋಗಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಫಜಲಪೂರ ಶಾಸಕ ಎಂ.ವೈ ಪಾಟೀಲ, ಎಂಎಲ್ಸಿ ಬಿ.ಜಿ.ಪಾಟೀಲ, ಮಹಾನಗರ ಪಾಲಿಕೆಯ ಮೇಯರ್ ವಿಶಾಲ ದರ್ಗಿ ಸುನೀಲ್ ವಲ್ಯಾಪುರೆ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ, ಜಿಲ್ಲಾಧ್ಯಕ್ಷ ಚಂದು ಪಾಟೀಲ,ಸೇರಿದಂತೆ ರೇಲ್ವೆ ಅಧಿಕಾರಿಗಳಾದ ಸೋಲಾಪೂರ ವಿಭಾಗೀಯ ರೇಲ್ವೆ ವ್ಯವಸ್ಥಾಪಕ ನೀರಜ್ ಕುಮಾರ ದೋರೆ, ವಿಭಾಗೀಯ ರೇಲ್ವೆ ವಾಣಿಜ್ಯ ವ್ಯವಸ್ಥಾಪಕ ಯೋಗೇಶ ಪಾಟೀಲ್ ಸೇರಿದಂತೆ ನಗರದ ಗಣ್ಯ ವ್ಯಕ್ತಿಗಳು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.