ಕಲಬುರಗಿ: ತೆರಿಗೆ ಕಟ್ಟಿದೋರಿಗೆ ಆಡಳಿತ ಕೊಟ್ಟ ಕೊಡುಗೆ ಧೂಳು, ದುರ್ವಾಸನೆ

| Published : Jan 09 2024, 02:00 AM IST

ಕಲಬುರಗಿ: ತೆರಿಗೆ ಕಟ್ಟಿದೋರಿಗೆ ಆಡಳಿತ ಕೊಟ್ಟ ಕೊಡುಗೆ ಧೂಳು, ದುರ್ವಾಸನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ತಾಪುರ ಪುರಸಭೆ ಆಡಳಿತ ಇರುವ ವಾಡಿ ಪಟ್ಟಣದಲ್ಲಿ ಸಾರ್ವಜನಿಕರಿಗಾಗಿ ಕನಿಷ್ಟ ಮೂತ್ರಾಲಯಗಳ ವ್ಯವಸ್ಥೆಯಿಲ್ಲ. ಇದು ಚಿತ್ತಾಪುರ ಮತಕ್ಷೇತ್ರದ ಪ್ರಗತಿಯ ದುರ್ಗತಿ ಎಂದು ಜನಧ್ವನಿ ಜಾಗೃತ ಸಮಿತಿ ಗೌರವಾಧ್ಯಕ್ಷ ವಿ.ಕೆ. ಕೇದಿಲಾಯ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಪುರಸಭೆ ಆಡಳಿತ ಇರುವ ವಾಡಿ ಪಟ್ಟಣದಲ್ಲಿ ಸಾರ್ವಜನಿಕರಿಗಾಗಿ ಕನಿಷ್ಟ ಮೂತ್ರಾಲಯಗಳ ವ್ಯವಸ್ಥೆಯಿಲ್ಲ. ಇದು ಚಿತ್ತಾಪುರ ಮತಕ್ಷೇತ್ರದ ಪ್ರಗತಿಯ ದುರ್ಗತಿ ಎಂದು ಜನಧ್ವನಿ ಜಾಗೃತ ಸಮಿತಿ ಗೌರವಾಧ್ಯಕ್ಷ ವಿ.ಕೆ. ಕೇದಿಲಾಯ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನೂತನವಾಗಿ ಜಾರಿಗೆ ಬಂದ ‘ಜನಧ್ವನಿ ಜಾಗೃತಿ ಸಮಿತಿ’ಯ ಪದಾಧಿಕಾರಿಗಳ ಆಯ್ಕೆ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಕಲ್ಲು ಗಣಿಗಾರಿಕೆ, ಸಿಮೆಂಟ್ ಕಾರ್ಖಾನೆ ಮತ್ತು ಜಂಕ್ಷನ್ ರೈಲ್ವೆ ಹೊಂದಿರುವ ನಗರದಲ್ಲಿ ನಾಗರಿಕ ಸೌಲಭ್ಯಗಳಿಲ್ಲ ಎಂಬುದು ನಾಚಿಗೇಡಿನ ಸಂಗತಿ. ಬಸ್ ಎಲ್ಲಿ ನಿಲ್ಲುತ್ತೋ ಅದೇ ಬಸ್ ನಿಲ್ದಾಣ. ವಯಸ್ಸಾದವರಿಗೆ ಉತ್ತಮ ಉದ್ಯಾನವನವಿಲ್ಲ. ಯುವಕರಿಗಾಗಿ ಕ್ರೀಡಾಂಗಣ, ವಿದ್ಯಾರ್ಥಿಗಳಿಗೆ ಮತ್ತು ಸಾಹಿತ್ಯಾಸಕ್ತರಿಗಾಗಿ ಗ್ರಂಥಾಲಯ ಸೌಕರ್ಯವಿಲ್ಲ. ರಸ್ತೆಯ ಧೂಳು, ಚರಂಡಿಯ ಗಬ್ಬು ವಾಸನೆಯೊಂದೇ ಅಧಿಕಾರಿಗಳು ತೆರಿಗೆ ಕಟ್ಟುವ ಇಲ್ಲಿನ ಜನರಿಗೆ ಕೊಟ್ಟ ದೊಡ್ಡ ಸೌಲಭ್ಯಗಳು ಎಂದು ಆಕ್ರೋಶ ವ್ಯಕ್ತಪಡಿಸಿದ ಕೇದಿಲಾಯ, ನಮಗೆ ಸಿಗಬೇಕಾದ ಕನಿಷ್ಟ ಮೂಲ ಸೌಕರ್ಯಗಳಿಗಾಗಿ ಜನತೆ ಒಗ್ಗಟ್ಟಿಂದ ದನಿ ಎತ್ತುವ ಕಾಲ ಬಂದಿದೆ ಎಂದರು.

ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ. ಮಾತನಾಡಿ, ಸಮಾಜವು ನಮ್ಮ ಜೀವನಕ್ಕೆ ಬೇಕಾದ ಅತ್ಯವಶ್ಯಕವಾದ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವು ಸಮಾಜಕ್ಕೆ ಮರಳಿ ಏನನ್ನು ಕೊಟ್ಟಿದ್ದೇವೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ಉತ್ತರ ಶೂನ್ಯವಾಗಿದೆ. ಪ್ರತಿದಿನ ನಮ್ಮ ಬದುಕಿಗಾಗಿ ಹೋರಾಟ ನಡೆಸುವ ನಾವುಗಳು ಸ್ವಲ್ಪ ಸಮಯ ಸಾಮಾಜಿಕ ಕೆಲಸಗಳಿಗೆ ನೀಡಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ. ಜನರ ಗೋಳು ಯಾರೂ ಕೇಳುತ್ತಿಲ್ಲ. ಜನರ ನೈಜ ಸಮಸ್ಯೆಗಳಿಗೆ ಧ್ವನಿ ಇಲ್ಲದಂತಾಗಿದೆ. ಇದಕ್ಕೆ ಸಂಘಟನೆ ಮಾತ್ರ ಪರಿಹಾರವಾಗಿದ್ದು, ಜಾತಿ, ಧರ್ಮ, ಭಾಷೆಗಳ ಜಂಜಾಟದಿಂದ ಹೊರಬಂದು ಜನಪರವಾಗಿ ಧ್ವನಿಯಾಗೋಣ. ಅನ್ಯಾಯಗಳ ವಿರುದ್ಧ ಪ್ರಶ್ನೆ ಮಾಡೋಣ. ಆಡಳಿತದಿಂದ ಆಗುತ್ತಿರುವ ಮೋಸವನ್ನು ಬಯಲಿಗೆಳೆಯೋಣ. ಸಮಾಜದ ಸೇವೆ ಮಾಡ ಬಯಸುವ ಜಾಗೃತ ಮನಸ್ಸಿನವರು ನಮ್ಮ ಸಮಿತಿಯನ್ನು ಸೇರಬಹುದು ಎಂದು ಕರೆ ನೀಡಿದರು.

ಪದಾಧಿಕಾರಿಗಳ ವಿವರ: ಇದೇವೇಳೆ ಜನಧ್ವನಿ ಜಾಗೃತ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜಯದೇವ ಜೋಗಿಕಲ್‌ಮಠ, ರಮೇಶ ಮಾಶಾಳ (ಸಲಹೆಗಾರರು). ವಿ.ಕೆ.ಕೇದಿಲಾಯ (ಗೌರವಾಧ್ಯಕ್ಷ). ವೀರಭದ್ರಪ್ಪ ಆರ್.ಕೆ (ಅಧ್ಯಕ್ಷ). ಸಿದ್ದಯ್ಯ ಶಾಸ್ತ್ರೀ ನಂದೂರಮಠ ಮತ್ತು ಜಾನ್ ವೆಲ್ಲೆಸ್ಲಿ (ಉಪಾಧ್ಯಕ್ಷರು). ಶಿವಲಿಂಗಪ್ಪ ಹಳ್ಳಿಕರ್ (ಪ್ರಧಾನ ಕಾರ್ಯದರ್ಶಿ). ಶೇಖ್ ಅಲ್ಲಾಭಕ್ಷ (ಸಹ ಕಾರ್ಯದರ್ಶಿ). ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶರಣು ದೋಶೆಟ್ಟಿ, ಶಿವಪ್ಪ ಮುಂಡರಗಿ, ಚಂದ್ರು ಕರ್ಣಿಕ, ಯುಸ್ಯೂಫ್ ಮುಲ್ಲಾ, ದೇವೇಂದ್ರ ದೊಡ್ಡಮನಿ, ಮಹಾಂತೇಶ ಪಾಟೀಲ, ಕಾಶಿನಾಥ ಶಟಗಾರ, ಮೌನೇಶ ಯಕ್ಚಿಂತಿ ಆಯ್ಕೆಯಾದರು.