ಪಾಲಿಕೆಯ ಬಜೆಟ್ ವಿಶೇಷ ಸಭೆಗೂ ಮುನ್ನ ಸದಸ್ಯರು ಅಮೆರಿಕ, ಇಸ್ರೇಲ್ ಜಂಟಿ ದಾಳಿಯಲ್ಲಿ ನಿಧನರಾದ ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ನಿಧನಕ್ಕೆ ಸಂತಾಪ ಸೂಚಿಸಿ, 1 ನಿಮಿಷ ಮೌನಾಚರಣೆ ಮಾಡಿದರು. ಇದು ವಿವಾದಕ್ಕೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಪಾಲಿಕೆಯ ಬಜೆಟ್ ವಿಶೇಷ ಸಭೆಗೂ ಮುನ್ನ ಸದಸ್ಯರು ಅಮೆರಿಕ, ಇಸ್ರೇಲ್ ಜಂಟಿ ದಾಳಿಯಲ್ಲಿ ನಿಧನರಾದ ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ನಿಧನಕ್ಕೆ ಸಂತಾಪ ಸೂಚಿಸಿ, 1 ನಿಮಿಷ ಮೌನಾಚರಣೆ ಮಾಡಿದರು. ಇದು ವಿವಾದಕ್ಕೆ ಕಾರಣವಾಗಿದೆ.ವಿಷಯ ಪ್ರಸ್ತಾಪಿಸಿದ ವಾರ್ಡ್ 24ರ ಪಾಲಿಕೆ ಸದಸ್ಯೆ ಸಯೀದಾ ನೂರ್ ಫಾತೀಮಾ, ಖಮೇನಿ ಸಾವಿಗೆ ಕಂಬನಿ ಮಿಡಿಯಲು 1 ನಿಮಷ ಸಭೆಯಲ್ಲಿ ಮೌನಾಚರಣೆಗೆ ಮನವಿ ಮಾಡಿದರು. ಇದಕ್ಕೆ ಮೇಯರ್ ಸೇರಿದಂತೆ ಸದಸ್ಯರು, ಸಿಬ್ಬಂದಿ ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡಿದರು.
ಪಾಲಿಕೆಯ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಶಿವಸೇನೆ ಪಕ್ಷದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಲಬುರಗಿ ಪಾಲಿಕೆಗೂ, ಖಮೇನಿಗೂ ಅದೇನು ಸಂಬಂಧ? ಇಲ್ಯಾಕೆ ಇಂತಹ ಮೌನಾಚರಣೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.ಪಹಲ್ಗಾಮ್ ದಾಳಿಯನ್ನು ಪಾಲಿಕೆ ಸದಸ್ಯರು ಖಂಡಿಸಲಿಲ್ಲ. ತಮ್ಮ ಸಮುದಾಯದ ಯುವತಿಯ ಹತ್ಯೆಗೂ ಮರುಗಲಿಲ್ಲ. ಆದರೆ, ದೂರದ ಇರಾನ್ ನಾಯಕ ಸತ್ತರೆ ಇವರಿಲ್ಲಿ ಕಂಬನಿ ಸುರಿಸುತ್ತಾರೆ ಎಂದು ಕಿಡಿ ಕಾರಿದರು.
ವಾರ್ಡ್ 24ರ ಸದಸ್ಯೆ ಸಯೀದಾ ನೂರ್ ಫಾತೀಮಾಗೂ, ಖಮೇನಿಗೂ ಅದೇನು ಸಂಬಂಧ?. ಇವರೊಂದಿಗೆ ಬಿಜೆಪಿಯವರೂ ಕೂಡ ಸೇರಿಕೊಂಡು ಕಂಬನಿ ಮಿಡಿದು ಸಂತಾಪ ಸೂಚಿಸಿರೋದನ್ನು ನೋಡಿದರೆ, ಪಾಲಿಕೆಯಲ್ಲಿ ವಿರೋಧ ಪಕ್ಷ ಅದೆಷ್ಟು ದುರ್ಬಲವಾಗಿದೆ ಅನ್ನೋದು ಗೊತ್ತಾಗುತ್ತದೆ. ಸರ್ಕಾರಿ ಕಚೇರಿಯಲ್ಲಿ ಖಮೇನಿಗೆ ಕಂಬನಿ ಮಿಡಿದವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಕಿಡಿ ಕಾರಿದ್ದಾರೆ.