ಕಾಳಿಕಾಂಬದೇವಿ ಅಂಬಾರಿ ಉತ್ಸವ

| Published : Oct 04 2025, 01:00 AM IST

ಸಾರಾಂಶ

ನ್ಯಾಮತಿ ಪಟ್ಟಣದ ಶ್ರೀ ಕಾಳಿಕಾಂಬ ದೇವಿಯ ದೇಗುಲದಲ್ಲಿ ದಸರಾ ಮಹೋತ್ಸವ, ಸನಾತನ ಧರ್ಮೋತ್ಸವ, ಅಂಬಾರಿ ಉತ್ಸವವು ವೈಭದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ನ್ಯಾಮತಿ

ಪಟ್ಟಣದ ಶ್ರೀ ಕಾಳಿಕಾಂಬ ದೇವಿಯ ದೇಗುಲದಲ್ಲಿ ದಸರಾ ಮಹೋತ್ಸವ, ಸನಾತನ ಧರ್ಮೋತ್ಸವ, ಅಂಬಾರಿ ಉತ್ಸವವು ವೈಭದಿಂದ ಜರುಗಿತು.

ಶುಕ್ರವಾರ ಬೆಳಗ್ಗೆಯಿಂದಲೇ ಶ್ರೀ ಕಾಳಿಕಾಂಬ ದೇವಿ ಉತ್ಸವ ಮೂರ್ತಿಗೆ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಸಿಂಗರಿಸಿ, ಅಂಬಾರಿ ಮೇಲೆ ಪ್ರತಿಷ್ಠಾಪಿಸಲಾಯಿತು. ಅನಂತರ ಸಿಂಗಾರಗೊಂಡ ಗಜರಾಜನನ್ನು ಅಂಬಾರಿ ಮೇಲಿರುವ ಶ್ರೀ ಕಾಳಿಕಾಂಬ ಉತ್ಸವ ಮೂರ್ತಿಯನ್ನು ಪುರೋಹಿತರು, ಅರ್ಚಕರ ವೃಂದದವರು ಪೂಜೆ ಸಲ್ಲಿಸಿ, ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀ ಕಾಳಿಕಾಂಬ ದೇವಿ ಮೂರ್ತಿ ಹೊತ್ತ ಗಜರಾಜನು ರಾಜಗಾಂಭೀರ್ಯದಿಂದ ಪಟ್ಟಣದ ಕಾಳಿಕಾಂಬ ರಸ್ತೆಯಿಂದ ಆಂಜನೇಯ ರಸ್ತೆ ಮೂಲಕ ಸಾಗಿತು. ಗಾಂಧಿ ರಸ್ತೆ, ಕುಂಬಾರ ರಸ್ತೆ, ಮಹಾಂತೇಶ್ವರ ರಸ್ತೆ ಮೂಲಕ ನೆಹರೂ ರಸ್ತೆಯಲ್ಲಿ ಸಾಗಿ ಪುನಃ ಪಟ್ಟಣದ ಕಾಳಿಕಾಂಬ ದೇಗುಲಕ್ಕೆ ಮೆರವಣಿಗೆ ಬಂದು ತಲುಪಿತು.

ಅಂಬಾರಿ ಉತ್ಸವದಲ್ಲಿ ಅಲಂಕೃತ ಟ್ರ್ಯಾಕ್ಟರ್‌ಗಳಲ್ಲಿ ಜಗದ್ಗುರು ರೇಣುಕಾಚಾರ್ಯ, ಭಕ್ತಿ ಭಂಡಾರಿ ಬಸವಣ್ಣ, ವಾಲ್ಮೀಕಿ ಮಹರ್ಷಿ, ಮಡಿವಾಳ ಮಾಚಿದೇವ, ಅಕ್ಕಮಹಾದೇವಿ ಹೀಗೆ ಹಲವು ದಾರ್ಶನಿಕರು, ಶರಣರು, ಮಹಾತ್ಮರ ಭಾವಚಿತ್ರಗಳಿಂದಿಗೆ ಭಕ್ತರು ಸಾಗಿದರು.

ಕಾಳಿಕಾಂಬ ದೇಗುಲದಲ್ಲಿ ದಸರಾ ಅಂಗವಾಗಿ ಶ್ರೀ ವಿಘ್ನೇಶ್ವರ, ಕಾಳಿಕಾಂಬ ದೇವಿಯ ಉತ್ಸವ ಮೂರ್ತಿ, ಮೌನೇಶ್ವರ ಸ್ವಾಮಿ, ನವಗ್ರಹಗಳ ಶಿಲಾ ಮೂರ್ತಿಗೆ ಕಳೆದ 11 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು ನಿತ್ಯವು ಸಾವಿರಾರು ಜನ ದೇವಿಯ ದರ್ಶನ ಪಡೆದರು.

ಶ್ರೀ ಕಾಳಿಕಾಂಬ ದೇವಿಯ ಅಂಬಾರಿ ಉತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಭಾಗವಹಿಸಿ ದೇವಿಯ ದರ್ಶನ ಆಶೀರ್ವಾದ ಪಡೆದರು. ಅಂಬಾರಿ ಉತ್ಸವದಲ್ಲಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ದೇಗುಲದ ಪದಾಧಿಕಾರಿಗಳು, ದಸಾರ ಉತ್ಸವ ಸೇವಾ ಸಮಿತಿ, ಮಹಿಳಾ ಸೇವಾ ಸಮಿತಿ, ಭಕ್ತರು ಪಾಲ್ಗೊಂಡಿದ್ದರು.

- - -

-ಚಿತ್ರ:

ನ್ಯಾಮತಿ ಪಟ್ಟಣದಲ್ಲಿ ಕಾಳಿಕಾಂಬ ದೇವಿ ಉತ್ಸವ ಮೂರ್ತಿಯ ಅಂಬಾರಿ ಮೆರವಣಿಗೆ ನಡೆಯಿತು.