ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಹಿಂದೂ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿದ್ದು ಇಂತಹ ಷಡ್ಯಂತ್ರಗಳಿಗೆ ಬಲಿಯಾಗದೆ ಹಿಂದೂ ಸಮಾಜ ಒಗ್ಗಟ್ಟಾಗಿರಬೇಕು ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.ಖಾಸಗಿ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ತಾಲೂಕಿಗೆ ಆಗಮಿಸಿದ್ದ ಸಂಧರ್ಭದಲ್ಲಿ ಶಾಸಕರ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುತ್ತಿದೆ. ಲಿಂಗಾಯತ-ವೀರಶೈವ ಎಂದು ಒಡೆದು ಆಯಿತು. ಜೈನ ಮುಂತಾದ ಸಮುದಾಯಗಳು ಬೇರೆ ಬೇರೆ ಎನ್ನುವ ನಿಲುವು ತಾಳುವಂತೆ ಮಾಡಲಾಯಿತು. ಮುಸ್ಲಿಂ ಸಮುದಾಯದಲ್ಲಿ ೧೧೧ ಜಾತಿಗಳು ಇದ್ದರೂ ಅವರನ್ನು ಒಡೆಯದೆ ಜಾತಿ ಗಣತಿ ಹೆಸರಿನಲ್ಲಿ ಕೇವಲ ಹಿಂದೂಗಳನ್ನು ಒಡೆಯಲಾಗುತ್ತಿದೆ. ಅಲ್ಪಸಂಖ್ಯಾತರ ತುಷ್ಠೀಕರಣಕ್ಕಾಗಿ ಬಹುಸಂಖ್ಯಾತ ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ, ಇಂದಿನ ಮುಸ್ಲಿಮರೂ ಹಿಂದೂ ಮೂಲದವರೇ, ಅವರ ಡಿಎನ್ಎ ನಮ್ಮದ್ದೇ, ಆದರೆ ದೇಶದ ಪ್ರತಿಯೊಬ್ಬರೂ ರಾಷ್ಟ್ರನಿಷ್ಠೆ ತೋರಿಸಬೇಕು ಎಂದು ಹೇಳಿದರು.
ಕಲ್ಲಡ್ಕದಲ್ಲಿ ಶ್ರೀರಾಮ ವಿದ್ಯಾಸಂಸ್ಥೆಯ ಮೂಲಕ ಹಿಂದುತ್ವ, ರಾಷ್ಟ್ರೀಯ ಚಿಂತನೆ ಹೊಂದಿರುವ ಮಕ್ಕಳನ್ನು ಬೆಳೆಸುವ ಪ್ರಯತ್ನ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಮತ್ತೊಂದು ಹೊಸ ಶಾಲೆ ಆರಂಭಿಸಲು ಉದ್ದೇಶಿಸಿದ್ದೇವೆ. ರಾಷ್ಟ್ರನೀತಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇದು ಹೊಸ ಹೆಜ್ಜೆ ಎಂದರು.ಸಚಿವ ಪ್ರಿಯಾಂಕ್ ಖರ್ಗೆಯವರ ’ಕಾನೂನು ಎಲ್ಲರಿಗೂ ಒಂದೇ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಭಟ್, ನಾವು ಕಾನೂನು ಪ್ರಕಾರವೇ ಪಥಸಂಚಲನ ಮಾಡುತ್ತೇವೆ. ಅದು ನಮ್ಮ ಸಂವಿಧಾನಾತ್ಮಕ ಹಕ್ಕು. ಲಕ್ಷಾಂತರ ಪಥಸಂಚಲನಗಳನ್ನು ನಡೆಸಿದ್ದೇವೆ, ಕಲ್ಲು, ಮುಳ್ಳಿನ ಹಾದಿಯಲ್ಲಾದರೂ ನಾವು ನಡೆದುಕೊಳ್ಳುತ್ತೇವೆ. ಏನಾಗುವುದೆಂಬ ಅರಿವಿನಲ್ಲಿಯೇ ನಾವು ಈ ಕಾರ್ಯದತ್ತ ಬಂದಿದ್ದೇವೆ. ಅದರಲ್ಲಿ ರಾಜಕೀಯ ಕಾಣಬೇಡಿ. ಇತರರ ಕಾರ್ಯಕ್ಕೆ ಅಡ್ಡಿ ಮಾಡುವುದು ಸರಿಯಲ್ಲ. ನಾನು ಒಳ್ಳೆಯ ಮನೆತನದಲ್ಲಿ ಹುಟ್ಟಿದವನು. ಸಚಿವ ಸ್ಥಾನಕ್ಕನುಗುಣವಾಗಿ ಮಾತನಾಡುವುದು ಅಗತ್ಯ. ದ್ವೇಷದ ರಾಜಕೀಯ ಬೇಡ, ಪ್ರೀತಿಯಿಂದ ಎಲ್ಲರನ್ನು ಒಗ್ಗೂಡಿಸಬೇಕು ಎಂದರು. ಹಿಂದೂಗಳು ಮಲಗಿದ್ದಾರೆ, ಅವರನ್ನು ಎಚ್ಚರಿಸಲು ಪ್ರಚೋದನೆ ಅಗತ್ಯವಾಗಿದೆ. ಹಿಂದೂ ಸಂಘಟನೆಗಳನ್ನು ಹತ್ತಿಕ್ಕಲು ಹಿಂದೂ ಮುಖಂಡರುಗಳ ಮೇಲೆ ಪ್ರಕರಣ ದಾಖಲು ಮಾಡಬಹದು ಆದರೆ ಯಾರು ಸಹ ಇಂತಹ ಪ್ರಕರಣಗಳಿಗೆ ಹೆದರುವುದಿಲ್ಲ. ಇಲ್ಲಿನ ಶಾಸಕ ಸಿಮೆಂಟ್ ಮಂಜು ಸರಳ ಜೀವಿಯಾಗಿದ್ದು ಇವರ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ ಎಂದರು.ಈ ಸಂಧರ್ಭದಲ್ಲಿ ಶಾಸಕ ಸಿಮೆಂಟ್ ಮಂಜು, ಹಿಂದೂ ಮುಖಂಡ ರಘು, ಬಿಜೆಪಿ ಮುಖಂಡರಾದ ಪ್ರತಾಪ್, ಜಯಪ್ರಕಾಶ್ ದೊಡ್ಡದೀಣೆ, ಅರೆಕೆರೆ ನರೇಶ್, ಹಲಸುಲಿಗೆ ಮಂಜು, ಪುರಸಭಾ ಸದಸ್ಯ ಪ್ರದೀಪ್ ಮುಂತಾದವರು ಹಾಜರಿದ್ದರು.
;Resize=(128,128))
;Resize=(128,128))