ಸಾರಾಂಶ
ಗಂಗಾವತಿ:
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜಾವಾಬ್ದಾರಿಯಿಂದ ಕಾಟಾಚಾರಕ್ಕೆ ನಡೆಯಿತು.ವೇದಿಕೆ ಮುಂಭಾಗದ ಎಡ-ಬಲ ಭಾಗದಲ್ಲಿ 200ಕ್ಕೂ ಹೆಚ್ಚು ಆಸನಗಳನ್ನು ಹಾಕಿದ್ದರೂ ಬೆರಳೆಣಿಕೆಯಷ್ಟು ಜನರು ಮಾತ್ರ ಆಗಮಿಸಿದ್ದರು. ಹೀಗಾಗಿ ಕ್ರೀಡಾಂಗಣ ಜನರಿಲ್ಲದೇ ಬೀಕೋ ಎನ್ನುವಂತಿತ್ತು.ಬೆಳಗ್ಗೆ 9ಕ್ಕೆ ಧ್ವಜಾರೋಹಣ ಸಮಯ ನಿಗದಿಪಡಿಸಿದ್ದರೂ ಜನರು ಆಗಮಿಸದೆ ಇರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇರಿಸುಮುರಿಸು ಆಯಿತು. ಆಮಂತ್ರಣ ಪತ್ರಿಕೆಗಳನ್ನು ಕಾಟಾಚಾರಕ್ಕೆ ಮುದ್ರಿಸಿ ಕಾರ್ಯಕ್ರಮ ಆರಂಭವಾದ ಬಳಿಕ ನೀಡಿದ್ದರಿಂದ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಮುಂಚಿತವಾಗಿಯೇ ಪ್ರಮುಖರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಸಿಲ್ಲ. ಜತೆಗೆ ಜನರಿಗೂ ಮಾಹಿತಿ ನೀಡಿಲ್ಲ. ಹೀಗಾಗಿಯೇ ಯಾರೊಬ್ಬರೊಬ್ಬರು ಕಾರ್ಯಕ್ರಮ ಆಗಮಿಸಿಲ್ಲ ಎಂದು ನೆರೆದಿದ್ದ ಕೆಲವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹೋರಾಟಗಾರರ ಕುಟುಂಬಕ್ಕಿಲ್ಲ ಗೌರವ:ಹೈದರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆ ವೇಳೆ ಮೃತಪಟ್ಟ ಹೋರಾಟಗಾರರ ಕುಟುಂಬದವರನ್ನು ಆಹ್ವಾನಿಸಿ ಗೌರವಿಸಲಾಗುತ್ತಿತ್ತು. ಆದರೆ, ಈ ಬಾರಿ ಅಧಿಕಾರಿಗಳು ಅವರನ್ನು ಆಹ್ವಾನಿಸಿಲ್ಲ. ಅಖಂಡ ಗಂಗಾವತಿ ತಾಲೂಕಿನಲ್ಲಿ 15ಕ್ಕೂ ಹೆಚ್ಚು ಹೋರಾಟಗಾರ ಕುಟುಂಬಗಳಿದ್ದರೂ ಸೌಜನ್ಯಕ್ಕೂ ಕುಟುಂಬದ ಸದಸ್ಯರನ್ನು ಭೇಟಿ ಮಾಡದ ಅಧಿಕಾರಿಗಳು ಉತ್ಸವ ಆಚರಿಸುವ ಉದ್ದೇಶವೆನೆಂಬ ಪ್ರಶ್ನೆ ಕೇಳಿ ಬಂದಿತು. ಕಾಟಾಚಾರಕ್ಕೆ ಕಾರ್ಯಕ್ರಮ ಏಕೆ ಆಯೋಜಿಸಬೇಕಿತ್ತು ಎಂದು ಸರ್ವಾಂಗಿಣ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಗರಂ:
ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕಾಟಾಚಾರದ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುವುದು ಸರಿಯಲ್ಲ. ದಸರಾ ಉತ್ಸವದ ಸಂಭ್ರಮದಂತೆ ಇದನ್ನು ಆಚರಿಸಬೇಕು. ಆದರೆ, ಸರ್ಕಾರ ಈ ಆಚರಣೆಗೆ ಗಮನಹರಿಸದೆ ಇರುವುದು ವಿಷಾದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಹೈದರಾಬಾದ್ ನಿಜಾಮರಿಂದ ಮುಕ್ತಿ ಪಡೆದ ದಿನವನ್ನು ಜನರು ಸಂಭ್ರಮದಿಂದ ಆಚರಿಸಬೇಕಿತ್ತು. ಆದರೆ, ಅಧಿಕಾರಿಗಳು ನಿರ್ಲಕ್ಷ್ಯದಿಂದ ಮಕ್ಕಳು, ಜನರು ಆಗಮಿಸಿಲ್ಲ. ಸಿಎಂ ಸಿದ್ದರಾಮಯ್ಯ ಸಹ ಉತ್ಸವವನ್ನು ನಿರ್ಲಕ್ಷಿಸಿದ್ದಾರೆಂದು ಕಿಡಿಕಾರಿದರು. ತಹಸೀಲ್ದಾರ್ ನಾಗರಾಜ್ ಧ್ವಜಾರೋಹಣ ನೆರವೇರಿಸಿದರು. ನಗರಸಭೆ ಅಧ್ಯಕ್ಷೆ ಹೀರಾಬಾಯಿ, ಪೌರಾಯುಕ್ತ ವಿರೂಪಾಕ್ಷಮೂರ್ತಿ, ಬಿಇಒ ನಟೇಶ್, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ತಾಪಂ ಇಒ ರಾಮರೆಡ್ಡಿ ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಜಯಶ್ರೀ ಹಕ್ಕಂಡಿ ನಿರೂಪಿಸಿದರು, ಬಿಇಒ ನಟೇಶ ಸ್ವಾಗತಿಸಿದರು.