ಇಂದು ಜಿಲ್ಲಾದ್ಯಂತ ಕಾಮದಹನ, ನಾಳೆ ಹೋಳಿ

| Published : Mar 13 2025, 12:47 AM IST

ಸಾರಾಂಶ

ಜಿಲ್ಲಾದ್ಯಂತ ಮಾ.13ರಂದು ಕಾಮದಹನ ಹಾಗೂ ಮಾ.14ರಂದು ಹೋಳಿ ಹಬ್ಬ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜನತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ಇಲಾಖೆ ಕೆಲವೊಂದು ಸೂಚನೆ ಪಾಲಿಸುವಂತೆ ತಿಳಿಸಿದೆ.

- ಬಟ್ಟೆ ಹರಿದಾಟ, ಅನುಚಿತ ವರ್ತನೆ ವಿರುದ್ಧ ಕ್ರಮ ತಪ್ಪಿದ್ದಲ್ಲ: ಎಸ್‌ಪಿ ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾದ್ಯಂತ ಮಾ.13ರಂದು ಕಾಮದಹನ ಹಾಗೂ ಮಾ.14ರಂದು ಹೋಳಿ ಹಬ್ಬ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜನತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ಇಲಾಖೆ ಕೆಲವೊಂದು ಸೂಚನೆ ಪಾಲಿಸುವಂತೆ ತಿಳಿಸಿದೆ.

ಹೋಳಿ ವೇಳೆ ಯಾವುದೇ ವ್ಯಕ್ತಿಗಳ ಮೇಲೆ ಒತ್ತಾಯದಿಂದ ಬಣ್ಣ ಎರಚುವಂತಿಲ್ಲ. ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಬಣ್ಣ ಎರಚಬಾರದು. ಪೇಂಟ್, ವಾರ್ನಿಷ್, ಆಸಿಡ್, ಡಾಂಬರ್, ಗಾಣದ ಎಣ್ಣೆ, ಮೊಟ್ಟೆ ಹಾಗೂ ಯಾವುದೇ ಅಪಾಯಕಾರಿ ರಾಸಾಯನಿಕ ಮಿಶ್ರಣಗಳನ್ನು ಮೈಮೇಲೆ ಎರಚುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಎಚ್ಚರಿಸಿದ್ದಾರೆ.

ಸಾರ್ವಜನಿಕ ನೀರು ಸರಬರಾಜು ಸ್ಥಳಗಳಲ್ಲಿ ಬಣ್ಣ ತೊಳೆದು ನೀರನ್ನು ಮಲಿನ ಮಾಡಬಾರದು. ಹಬ್ಬದ ನೆಪದಲ್ಲಿ ಹಣ ವಸೂಲಿ ಮಾಡುವಂತಿಲ್ಲ. ಹಾಸ್ಟೆಲ್‌ಗಳಿಗೆ ಹೋಗಿ ಬಣ್ಣ ಎರಚುವುದಾಗಲೀ ಅಥವಾ ಮಹಿಳಾ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಬಣ್ಣ ಎರಚುವುದನ್ನು ನಿಷೇಧಿಸಿದೆ. ಧ್ವನಿವರ್ಧಕ ಅಳವಡಿಕೆ ನಿಯಮ ಮತ್ತು ಅನುಮತಿ ಪಡೆದು, ಸಂಬಂಧಿಸಿದ ಆಯೋಜಕರು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮದ್ಯಪಾನ ಮಾಡಿ ಅತಿವೇಗದ ವಾಹನ ಚಾಲನೆ ವಿರುದ್ಧವೂ ಕ್ರಮ ನಿಶ್ಚಿತ ಎಂದಿದ್ದಾರೆ.

ಹೋಳಿ ಸಂಭ್ರಮಾಚರಣೆಯ ಕೊನೆ ಹಂತದಲ್ಲಿ ಕೆಲ ಕಿಡಿಗೇಡಿಗಳು ಮೈಮೇಲಿನ ಬಟ್ಟೆಗಳನ್ನು ಹರಿದು ಸಾರ್ವಜನಿಕವಾಗಿ ಅಸಹ್ಯ ಆಗುವಂತೆ ನೃತ್ಯ ಮಾಡುವಂತಿಲ್ಲ. ಧಾರ್ಮಿಕ ಕಟ್ಟಡಗಳಾದ ಚರ್ಚ್, ಮಸೀದಿ, ದರ್ಗಾ ಮತ್ತು ದೇವಾಲಯಗಳಿಗೆ ಬಣ್ಣ ಎರಚುವಂತಿಲ್ಲ. ಸಂಚಾರಿ ನಿಯಮಗಳನ್ನು ಮೀರುವ ವಾಹನಗಳನ್ನು ಜಪ್ತಿ ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಗದಿತ ಸಮಯಕ್ಕೆ ಸಂಭ್ರಮಾಚರಣೆ ಮುಕ್ತಾಯ ಮಾಡಬೇಕು ಎಂದು ಸೂಚಿಸಿದ್ದಾರೆ.

- - -

-12ಕೆಡಿವಿಜಿ3: ಉಮಾ ಪ್ರಶಾಂತ