ಸಾರಾಂಶ
ಗ್ರಾಮಸ್ಥರೊಂದಿಗೆ ಜಿಪಂ ಅಧಿಕಾರಿಗಳ ಪೂರ್ವಭಾವಿ ಸಭೆ । ಅಭಿವೃದ್ಧಿಗೆ ಜೋಡಿಸುವಂತೆ ಮನವಿಕನ್ನಡಪ್ರಭ ವಾರ್ತೆ ಕೊಪ್ಪಳ
ಮದ್ಯಪಾನ ಮುಕ್ತ ಗ್ರಾಮ ಮತ್ತು ಶುಚಿತ್ವ ಹೊಂದಿದ ಗ್ರಾಮ ಎಂದು ಇತ್ತೀಚೆಗೆ ಸುದ್ದಿಯಲ್ಲಿರುವ ಲೇಬಗೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕಾಮನೂರ ಗ್ರಾಮವುನರೇಗಾ ಯೋಜನೆಯ ದತ್ತು ಗ್ರಾಮವೆಂದು ಆಯ್ಕೆಯಾಗಿದೆ.ಹೌದು! ಇತ್ತೀಚೆಗೆ ನಡೆದ ದಿಶಾ ಸಮಿತಿ ಸಭೆಯಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ ನಿರ್ದೇಶನ ನೀಡಿದಂತೆ ಜಿಪಂ ಕಾರ್ಯಪ್ರವೃತ್ತವಾಗಿದ್ದು, ಮಹಾತ್ಮಾ ಗಾಂಧಿ ನರೇಗಾದಡಿ ಕಾಮನೂರು ಗ್ರಾಮವನ್ನು ದತ್ತು ಗ್ರಾಮವೆಂದು ಆಯ್ಕೆ ಮಾಡಿದೆ.
ಅದರಂತೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಅವರ ಮಾರ್ಗದರ್ಶನದಲ್ಲಿ ಜಿಪಂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.ಗಾಂಧಿ ಬಳಗದಿಂದಲೂ ಒತ್ತಾಯ:ಶಿಕ್ಷಕಪ್ರಾಣೇಶ ಪೂಜಾರ, ಪತ್ರಕರ್ತ ಆನಂದತೀರ್ಥ ಪ್ಯಾಟಿ, ಸಂತೋಷ ದೇಶಪಾಂಡೆ, ಪ್ರಮೋದ್ ಕುಲಕರ್ಣಿ, ರಂಗಕರ್ಮಿ ನಾಗರಾಜನಾಯಕ ಡೊಳ್ಳಿನ ಸೇರಿದಂತೆ ಸೃಜನಶೀಲ ವಿಚಾರಧಾರೆಯ ಜಿಲ್ಲೆಯ ಗಾಂಧಿ ಬಳಗದ 127 ಗೆಳೆಯರು ಇತ್ತೀಚೆಗೆ ಕಾಮನೂರಗೆ ಕಾಲ್ನಡಿಗೆ ನಡೆಸಿದ್ದರಿಂದಾಗಿ ಕಾಮನೂರ ಗ್ರಾಮವು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಎಲ್ಲ ಗೆಳೆಯರು ಕಾಮನೂರಗೆ ಭೇಟಿ ನೀಡಿದಾಗ ದತ್ತು ಗ್ರಾಮ ಆಯ್ಕೆಗಾಗಿ ಒತ್ತಾಯ ಮಾಡಿದ್ದು ಇಲ್ಲಿ ಸ್ಮರಣೀಯವಾಗಿದೆ.ಗ್ರಾಮಸ್ಥರಲ್ಲಿ ಮನವಿ:
ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ ಮಾತನಾಡಿ, ಕಾಮನೂರ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದು, ಗ್ರಾಮಸ್ಥರೆಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.ಮೋರನಾಳ ಕೂಡ ಆಯ್ಕೆ:
ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಪಂಯ ಕಾಮನೂರು ಹಾಗೂ ಬೆಟಗೇರಿ ಗ್ರಾಪಂ ಮೋರನಾಳ ಗ್ರಾಮಗಳನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ದತ್ತು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, ಗ್ರಾಪಂ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯಿಂದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅವಕಾಶ ಇರುವ ಕುರಿತು ಮಾಹಿತಿ ನೀಡಿದರು. ಎಲ್ಲ ತಾಂತ್ರಿಕ ಸಹಾಯಕರು ಪ್ರತಿ ಕಾಲನಿಗೆ ಭೇಟಿ ನೀಡಿ ಚರಂಡಿ, ರಸ್ತೆ, ಶಾಲಾಭಿವೃದ್ದಿ ಕಾಮಗಾರಿಗಳು ಅನುಷ್ಠಾನಗೊಳಿಸಲು ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.ಗ್ರಾಮಕ್ಕೆ ಅವಶ್ಯವಿರುವ ಕಾಮಗಾರಿಗಳನ್ನು ನರೇಗಾ ಯೋಜನೆ, ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆ ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಗ್ರಾಮಸ್ಥರಿಗೆ ತಿಳಿಸಿದರು. ಗ್ರಾಮದಲ್ಲಿರುವ ಸಣ್ಣ, ಅತೀ ಸಣ್ಣ ರೈತರಿಗೆ ನರೇಗಾದಡಿ ಸಿಗುವ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು. ಪ್ರತಿಯೊಬ್ಬರು ಯೋಜನೆಯ ಸದುಪಯೋಗ ಪಡೆಯಬೇಕು. ತಮ್ಮ ಆದ್ಯತಾ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಅವಶ್ಯವಿರುವ ಕಾಮಗಾರಿ ಕುರಿತು ಸಭೆಯಲ್ಲಿ ವಿವರಿಸಿದರು.ವಿವಿಧೆಡೆ ಭೇಟಿ:ಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಅಳತೆ ತೂಕ ಮಾಡುತ್ತಿರುವ ಕುರಿತು ಪರಿಶೀಲಿಸಿದರು. ಮಕ್ಕಳಿಗೆ ಆಹಾರ ವಿತರಿಸುವ ಕುರಿತು ಮಾಹಿತಿ ಪಡೆದರು. ನಂತರ ಗ್ರಾಮದ ಊರ ಮುಂದಿನ ಕೆರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಗ್ರಾಮಸ್ಥರಾದ ದ್ಯಾಮಣ್ಣ ಹೊನ್ನತ್ತಿ, ಮಲ್ಲಪ್ಪ ಕೊಡ್ಲಿ, ದೇವಪ್ಪ, ಮಹಾದೇವಪ್ಪ ಕುರಿ, ಪಿಡಿಒ ಸಂಗಮೇಶ ತೇರಿನ, ಜಿಪಂ ನರೇಗಾ ಲೆಕ್ಕ ಶಾಖೆ ವ್ಯವಸ್ಥಾಪಕ ಪಂಪನಗೌಡ, ತಾಂತ್ರಿಕ ಸಂಯೋಜಕ ಯಮನೂರಪ್ಪ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಹಾಯಕರು, ಗ್ರಾಪಂ ಸಿಬ್ಬಂದಿ ಸೇರಿದಂತೆ ಮತ್ತಿತರರು ಇದ್ದರು.