ಕೊನೆಗೂ ಕಮರಿಪೇಟೆ ಪೊಲೀಸ್‌ ಠಾಣೆಗೆ ಸ್ಥ‍ಳಾಂತರ ಭಾಗ್ಯ

| Published : May 25 2025, 01:25 AM IST

ಸಾರಾಂಶ

ಈ ಠಾಣೆಯನ್ನು ಸಂಪೂರ್ಣವಾಗಿ ಮುಖ್ಯ ನಾಲೆಯ ಮೇಲೆಯೇ ನಿರ್ಮಿಸಲಾಗಿದೆ. ನಾಲೆಯಲ್ಲಿ ಹೂಳು ತುಂಬಿದೆ. ಇದನ್ನು ತೆರವು ಮಾಡಲು ಠಾಣೆ ನೆಲಸಮಗೊಳಿಸಬೇಕಿದೆ.

ಹುಬ್ಬಳ್ಳಿ: ಜಿಲ್ಲಾಧಿಕಾರಿ ಪರಿಶೀಲಿಸಿ ಆದೇಶಿಸಿದ ಬರೋಬ್ಬರಿ ಒಂದು ವರ್ಷದ ಬಳಿಕ ಇಲ್ಲಿನ ಕಮರಿಪೇಟೆ ಪೊಲೀಸ್‌ ಠಾಣೆ ಸ್ಥಳಾಂತರಕ್ಕೆ ಸಿದ್ಧತೆ ನಡೆದಿದೆ.

ಕೆಲವೇ ದಿನಗಳಲ್ಲಿ ಠಾಣೆಯ ಹಿಂದಿರುವ ಜಯಭಾರತ ವೃತ್ತದಲ್ಲಿರುವ ಪಾಲಿಕೆ ಸಮುದಾಯ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರವಾಗಲಿದೆ.

ಇಲ್ಲಿನ ವಾರ್ಡ್‌ 66ರಲ್ಲಿ ನಾಲೆಯ ಮೇಲೆ ನಿರ್ಮಿಸಲಾಗಿರುವ,ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕಮರಿಪೇಟೆ ಪೊಲೀಸ್‌ ಠಾಣೆಯ ಸ್ಥಳಾಂತರಕ್ಕೆ ಧಾರವಾಡದಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಈ ಠಾಣೆಯನ್ನು ಸಂಪೂರ್ಣವಾಗಿ ಮುಖ್ಯ ನಾಲೆಯ ಮೇಲೆಯೇ ನಿರ್ಮಿಸಲಾಗಿದೆ. ನಾಲೆಯಲ್ಲಿ ಹೂಳು ತುಂಬಿದೆ. ಇದನ್ನು ತೆರವು ಮಾಡಲು ಠಾಣೆ ನೆಲಸಮಗೊಳಿಸಬೇಕಿದೆ. ಅಲ್ಲದೆ, ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಮುಂದಿನ ರಸ್ತೆಯಲ್ಲಿ ಬೃಹತ್‌ ವಾಹನ ಸಂಚರಿದರೆ ಇಡೀ ಠಾಣೆಯೇ ಅಲುಗಾಡುತ್ತಿದೆ. ಇಲ್ಲಿನ ಸಿಬ್ಬಂದಿ ಭಯದಲ್ಲಿಯೇ ಕಾರ್ಯನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿಗೆ ಪಾಲಿಕೆ ಶಾಸಕರು ಮತ್ತು ಮೇಯರ್‌ ಸೂಚನೆ ನೀಡಿದ್ದರು. ಈಗ ಜಯಭಾರತ ಸರ್ಕಲ್‌ನಲ್ಲಿರುವ ಸಮುದಾಯದಲ್ಲಿ ಠಾಣೆ ಕಾಮಗಾರಿ ನಡೆದಿದೆ. ಹೀಗಾಗಿ, ಜೀವ ಭಯದಲ್ಲಿ ಕೆಲಸ ಮಾಡುತ್ತಿದ್ದ ಇಲ್ಲಿನ ಸಿಬ್ಬಂದಿ ಈಗ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯಕ್ಕೆ ಠಾಣೆ ಸ್ಥಳಾಂತರವಾಗುತ್ತಿರುವದು ಸಂತಸದ ಸಂಗತಿ. ಆದರೆ, ಠಾಣೆಗೆ ಶಾಶ್ವತ ಕಟ್ಟಡ ಒದಗಿಸಿ ಮೂಲಸೌಲಭ್ಯ ಒದಗಿಸಲು ಸರ್ಕಾರ ಮನಸ್ಸು ಮಾಡಬೇಕಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.