ಕನ್ನಡ ಸಾಹಿತ್ಯಕ್ಕೆ ಕಂಬಾರರ ಕೊಡುಗೆ ಅಪಾರ: ಎಚ್.ಎನ್. ಕಾಳೆ

| Published : Oct 14 2025, 01:01 AM IST

ಸಾರಾಂಶ

ಬೇಂದ್ರೆ ಅವರ ನಂತರ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ತಮ್ಮ ಕೃತಿಗಳಲ್ಲಿ ದುಡಿಸಿಕೊಂಡುವರು ಕಂಬಾರರು. ಕನ್ನಡ ನಾಟಕಕ್ಕೆ ತಮ್ಮ ಕೃತಿಗಳ ಮೂಲಕ ಹೊಸ ಪ್ರವಾಹವನ್ನು ತಂದರು. ಕಾವ್ಯ, ಕಾದಂಬರಿ ಕ್ಷೇತ್ರದಲ್ಲೂ ಅಮೋಘ ಕೊಡುಗೆ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಗದಗ: ಗ್ರಾಮೀಣ ಪರಿಸರದ ಸಮಗ್ರ ಚಿತ್ರಣವನ್ನು ಚಂದ್ರಶೇಖರ ಕಂಬಾರ ಅವರ ಕಾವ್ಯ ಮತ್ತು ನಾಟಕಗಳಲ್ಲಿ ಕಾಣಬಹುದು. ಕನ್ನಡ ಜಾನಪದ ಪರಂಪರೆಯನ್ನು ಸಮರ್ಥವಾಗಿ ಬಳಸಿಕೊಂಡು ಪ್ರಸ್ತುತ ದಿನಮಾನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ರೀತಿಯಲ್ಲಿ ತಮ್ಮ ಕೃತಿಗಳನ್ನು ರಚಿಸಿದ್ದಾರೆ ಎಂದು ಎಚ್.ಎನ್. ಕಾಳೆ ತಿಳಿಸಿದರು.ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದಿ. ಗಿರೋಸಾ ಬದಿ ಹಾಗೂ ದಿ. ಎಲ್ಲೂಬಾಯಿ ಬದಿ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸದಲ್ಲಿ ಚಂದ್ರಶೇಖರ ಕಂಬಾರ ಅವರ ಕೊಡುಗೆ ಕುರಿತು ಮಾತನಾಡಿದರು.

ಬೇಂದ್ರೆ ಅವರ ನಂತರ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ತಮ್ಮ ಕೃತಿಗಳಲ್ಲಿ ದುಡಿಸಿಕೊಂಡುವರು ಕಂಬಾರರು. ಕನ್ನಡ ನಾಟಕಕ್ಕೆ ತಮ್ಮ ಕೃತಿಗಳ ಮೂಲಕ ಹೊಸ ಪ್ರವಾಹವನ್ನು ತಂದರು. ಕಾವ್ಯ, ಕಾದಂಬರಿ ಕ್ಷೇತ್ರದಲ್ಲೂ ಅಮೋಘ ಕೊಡುಗೆ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕಂಬಾರರು ವಸಾಹತುಶಾಹಿ ವಿರೋಧಿ ನೆಲೆಯ ತಮ್ಮ ನಾಟಕಗಳಿಗೆ ಜನಪದದ ಎಲ್ಲ ಸತ್ವವನ್ನು ತುಂಬಿ ರಂಗಭೂಮಿಗೆ ಹೊಸ ಚೈತನ್ಯವನ್ನು ತಂದರು. ಚಲನಚಿತ್ರ ನಿರ್ದೇಶಕರಾಗಿ, ಹಾಡುಗಾರರಾಗಿ, ಸಂಸ್ಥೆಗಳ ಮುಖ್ಯಸ್ಥರಾಗಿ, ರಾಜಕೀಯ, ಸಾಮಾಜಿಕ ರಂಗದಲ್ಲೂ ವಿಶಿಷ್ಟ ಕೊಡುಗೆಯನ್ನು ನೀಡಿ ಕನ್ನಡ ನೆಲದ ಶ್ರೀಮಂತಿಗೆ ಕಾರಣರಾಗಿದ್ದಾರೆ ಎಂದರು.ದತ್ತಿದಾನಿಗಳು, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರತ್ನಾ ಬದಿ ಮಾತನಾಡಿ, ವ್ಯಕ್ತಿಯ ಜೀವನದ ಉನ್ನತಿಗೆ ತಂದೆ- ತಾಯಿಗಳ ಕೊಡುಗೆ ಅಪಾರವಾದುದು. ಅವರ ತ್ಯಾಗ, ಪ್ರೀತಿಯ ಫಲವಾಗಿ ಉತ್ತಮ ಬದುಕು ನಿರ್ವಹಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗಿರೋಸಾ ಹಾಗೂ ಯಲ್ಲಮ್ಮ ಬದಿ ಅವರು ಜೀವನ ಮಾದರಿಯಾಗಿದೆ ಎಂದರು.ಈ ವೇಳೆ ಶಿರಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ನವೀನ ಅಳವಂಡಿ, ಎಲ್ಲೋಸಾ ಬದಿ, ಚಂದ್ರಶೇಖರ ವಸ್ತ್ರದ, ಅನ್ನದಾನಿ ಹಿರೇಮಠ, ರಾಹುಲ ಗಿಡ್ನಂದಿ, ಶೇಖರಪ್ಪ ಕಳಸಾಪೂರಶೆಟ್ಟರ, ಬಿ.ಎಸ್. ಹಿಂಡಿ, ಬಿ.ಬಿ. ಹೊಳಗುಂದಿ, ಎಂ.ಎಫ್. ದೋಣಿ, ಶೈಲಾ ಗಿಡ್ನಂದಿ, ರಾಜಶೇಖರ ಕರಡಿ, ರತ್ನಕ್ಕ ಪಾಟೀಲ, ಎಸ್.ಎಂ. ಕಾತರಕಿ, ಶಶಿಕಾಂತ ಕೊರ್ಲಹಳ್ಳಿ, ರಾಮಚಂದ್ರ ಮೋನೆ, ಎಸ್.ಎಲ್. ಕುಲಕರ್ಣಿ, ಸಿ.ಎಂ. ಮಾರನಬಸರಿ, ರತ್ನಾಬಾಯಿ ಪುರಂತರ, ಗಿರೀಶ ಪಂತರ, ಗಂಗಮ್ಮ ಮುದಗಲ್ ಜೆ.ಎ. ಮೊದಲಾದವರು ಭಾಗವಹಿಸಿದ್ದರು. ಕಾರ್ಯದರ್ಶಿ ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.