ಸಾರಾಂಶ
ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹಾಗೂ ಎಎಸ್ಐ ಸೌತ್ ಕೆನರಾ ಸಿಟಿ ಬ್ರಾಂಚ್ ಇದರ ಆಶ್ರಯದಲ್ಲಿ ರಾಜ್ಯಮಟ್ಟದ 8ನೇ ಕೆಎಸ್ ಸಿಎಎಸ್ಐ- ಮಿಡ್ ಕಾನ್-2025 ಸಮ್ಮೇಳನ ನಡೆಯಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಉತ್ತಮ ಹವ್ಯಾಸ ಜೀವನಕ್ಕೆ ಒಳ್ಳೆಯದು. ಓದುವುದು ಉತ್ತಮ ಹವ್ಯಾಸವಾಗಿದ್ದು, ಉತ್ತಮ ಓದುಗರು ಮುಂದೆ ನಾಯಕರಾಗಬಹುದು. ಪುಸ್ತಕಗಳು ಸದಾ ನಿಮ್ಮ ಸಂಗಾತಿಗಳು ಎಂದು ಧಾರಾವಾಡದ ಎಸ್ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್ ಕುಮಾರ್ ಹೇಳಿದರು.ಅವರು ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹಾಗೂ ಎಎಸ್ಐ ಸೌತ್ ಕೆನರಾ ಸಿಟಿ ಬ್ರಾಂಚ್ ಇದರ ಆಶ್ರಯದಲ್ಲಿ ಶನಿವಾರ ಆಯೋಜಿಸಲಾದ ರಾಜ್ಯಮಟ್ಟದ 8ನೇ ಕೆಎಸ್ ಸಿಎಎಸ್ಐ- ಮಿಡ್ ಕಾನ್-2025 ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಎಸ್ಎಸ್ಐ ಕರ್ನಾಟಕದ ಅಧ್ಯಕ್ಷ ಡಾ.ರಾಜ್ ಗೋಪಾಲ್ ಶೆಣೈ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಈ ಸಮ್ಮೇಳನವು ಪದವೀಧರರಿಗೆ, ಯುವ ವೈದ್ಯರಿಗೆ ಅನೇಕ ಮೌಲ್ಯಯುತ ವಿಷಯಗಳ ಅರಿವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಮುಖ್ಯ ಅತಿಥಿ ಚಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಯು.ಕೆ.ಮೋನು ಮಾತನಾಡಿ, ಯುವ ವೈದ್ಯರು ಸಮ್ಮೇಳನದ ಪ್ರಯೋಜನವನ್ನು ಪಡೆದು ಮುನ್ನಡೆಯಿರಿ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕೆಎಸ್ಸಿ ಎಎಸ್ಐನ ಡಾ.ನಾಝ್ ಜಹನಾ ಶೇಖ್, ಕೆಎಸ್ಸಿ ಎಎಸ್ಐ ಕಾರ್ಯದರ್ಶಿ ಡಾ.ಸರ್ವೇಶ ರಾಜೆ ಯುಆರ್ಎಸ್, ಕಣಚೂರು ಮೆಡಿಕಲ್ ಅಕಾಡೆಮಿಯ ಡೀನ್ ಶಹನವಾಝ್ ಮನ್ನಿಪ್ಪಾಡಿ, ಕಣಚೂರು ಹೆಲ್ತ್ ಸೈನ್ಸ್ ಅಧ್ಯಕ್ಷ ಡಾ.ಮಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕಣಚೂರು ಹೆಲ್ತ್ ಸೈನ್ಸ್ ಸಲಹಾ ಸಮಿತಿ ಸದಸ್ಯ ಡಾ. ಎಂ.ವೆಂಕಟ್ರಾಯ ಪ್ರಭು, ಕೆಎಸ್ಸಿ ಎಎಸ್ಐ ಕೋಶಾಧಿಕಾರಿ ಡಾ.ಗುರುಬಸವನ ಗೌಡ ಮೊದಲಾದವರು ಉಪಸ್ಥಿತರಿದ್ದರು.ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕ ಅಬ್ದುಲ್ ರಹಿಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮ್ಮೇಳನದ ಸಂಘಟಕ ಡಾ.ಸತ್ಯಮೂರ್ತಿ ಐತಾಳ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಲಿಖಿತ್ ರೈ ವಂದಿಸಿದರು. ಅಬ್ದುಲ್ ಕರೀಂ ಫಾರೂಕಿ, ಅರುಂಧತಿ ಕಾರ್ಯಕ್ರಮ ನಿರೂಪಿಸಿದರು.