ಸಾರಾಂಶ
ಇನ್ನೂ ಏಪ್ರೀಲ್ ಎರಡನೇ ವಾರದಲ್ಲಿ ಆನೆಗೊಂದಿ ಉತ್ಸವ ಆಚರಿಸಲಾಗುವುದು.ಇದಕ್ಕೆ ಬೇಕಾದ ಪೂರ್ವ ಸಿದ್ಧತಾ ಕಾರ್ಯ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ.
ಕನಕಗಿರಿ: ಸಾಧಕ ಬಾಧಕ ಚರ್ಚಿಸಿ ಕನಕಗಿರಿ ಉತ್ಸವ ಆಚರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಇತ್ತೀಚೆಗೆ ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಕ್ಷೇತ್ರದ ಉತ್ಸವ ಆಚರಿಸಬೇಕೆಂಬುದು ನನಗೂ ಆಸೆ ಇದೆ. ಕನಕಾಚಲಪತಿ ಜಾತ್ರೆಯಲ್ಲಿಯೇ ಉತ್ಸವ ಆಚರಿಸುವ ಉದ್ದೇಶ ನನ್ನದಾಗಿತ್ತು. ಸ್ಥಳೀಯರು ಜಾತ್ರೆ ಮಾಡಿ ಉತ್ಸವ ಆಚರಿಸೋಣ ಎಂದಾಗ ನಾನು ಸುಮ್ಮನಾಗಿದ್ದೇನೆ. ಉತ್ಸವ ಆಚರಣೆಗೆ ಇನ್ನೂ ಸಮಯವಿದ್ದು, ಸ್ಥಳೀಯರ ಅಭಿಪ್ರಾಯ ಪಡೆದು ಮತ್ತು ಉತ್ಸವ ಆಚರಣೆ ಕುರಿತು ಸಾಧಕ-ಬಾಧಕ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.ಇನ್ನೂ ಏಪ್ರೀಲ್ ಎರಡನೇ ವಾರದಲ್ಲಿ ಆನೆಗೊಂದಿ ಉತ್ಸವ ಆಚರಿಸಲಾಗುವುದು.ಇದಕ್ಕೆ ಬೇಕಾದ ಪೂರ್ವ ಸಿದ್ಧತಾ ಕಾರ್ಯ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ. ಬಾದಾಮಿ ಕ್ಷೇತ್ರದ ಜನತೆ ಒತ್ತಾಸೆ ಮೇರೆಗೆ ನವೆಂಬರ್ ತಿಂಗಳಲ್ಲಿ ಚಾಲುಕ್ಯ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಬಸವ ಜಯಂತಿ ದಿನ ಸರ್ವಧರ್ಮ ಸಮ್ಮೇಳನ: ಮಾನವತವಾದಿ, ಸಮಾನತೆ ಹರಿಕಾರ ಬಸವೇಶ್ವರರಿಗೆ ನಮ್ಮ ಸರ್ಕಾರ ಸಾಂಸ್ಕೃತಿಕ ನಾಯಕ ಎಂಬ ಬಿರುದು ನೀಡಿದ್ದಲ್ಲದೇ ಮುಂಬರುವ ಬಸವ ಜಯಂತಿ ದಿನದಂದು ಕೂಡಲ ಸಂಗಮದಲ್ಲಿ ಸರ್ವಧರ್ಮ ಸಮ್ಮೇಳನ ನಡೆಸಲು ಸರ್ಕಾರ ತಿರ್ಮಾನಿಸಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ನಡೆಯುತ್ತಿವೆ ಎಂದು ಸಚಿವ ತಂಗಡಗಿ ತಿಳಿಸಿದ್ದಾರೆ.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಜಿಪಂ ಮಾಜಿ ಸದಸ್ಯ ವಿರೇಶ ಸಮಗಂಡಿ, ಬಸವಂತಗೌಡ ಪಾಟೀಲ್, ಶರಣೇಗೌಡ, ಪಂಪಾಪತಿ ತರ್ಲಕಟ್ಟಿ, ಶಾಂತಪ್ಪ ಬಸರಿಗಿಡ ಸೇರಿದಂತೆ ಇತರರಿದ್ದರು.