ಸಾರಾಂಶ
ಕನಕಗಿರಿ: ಮಾ.೨, ೩ರಂದು ನಡೆಯುವ ಕನಕಗಿರಿ ಉತ್ಸವ ನಿಮಿತ್ತ ವಿವಿಧ ಕಾರ್ಯಕ್ರಮ, ಕ್ರೀಡಾಕೂಟ ನಡೆಸಲು ಸಚಿವ ಶಿವರಾಜ ತಂಗಡಗಿ ಶನಿವಾರ ಪಟ್ಟಣಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.ನಂತರ ಪತ್ರಕರ್ತರ ಜತೆ ಮಾತನಾಡಿದ ಸಚಿವರು, ಜೂನಿಯರ್ ಕಾಲೇಜು ರಸ್ತೆಗೆ ಹೊಂದಿಕೊಂಡಿರುವ ಪಾತ್ರದವರ ಜಮೀನಿನಲ್ಲಿ ರಾಜಾ ಉಡಚಪ್ಪ ನಾಯಕ ಭವ್ಯ ವೇದಿಕೆ ನಿರ್ಮಾಣವಾಗಲಿದೆ. ಬೈಲಕ್ಕಂಪುರ ರಸ್ತೆಯ ವಿರೇಶ ಪತ್ತಾರ ಅವರ ಜಮೀನಿನಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗುವುದು. ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಫೆ.೨೭, ೨೮, ೨೯ ಮೂರು ದಿನಗಳ ಕಾಲ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಮೊದಲನೇ ದಿನ ಜನಪ್ರತಿನಿಧಿಗಳ ಹಾಗೂ ಪತ್ರಕರ್ತರ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಫೆ.೨೮, ೨೯ಕ್ಕೆ ಮಲ್ಲಗಂಬ, ಕಬ್ಬಡ್ಡಿ, ವಾಲಿಬಾಲ್, ಕುಸ್ತಿ ಸೇರಿದಂತೆ ವಿವಿಧ ಕ್ರೀಡೆಗಳು ನಡೆಯಲಿವೆ. ಕ್ರೀಡೆಯಲ್ಲಿಯೂ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು ಎಂದರು.ಇನ್ನು ಉತ್ಸವ ನಡೆಯುವ ಎರಡು ದಿನವೂ ಬರುವ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಬಸ್ ನಿಲ್ದಾಣದ ಪಕ್ಕದ ಎಪಿಎಂಸಿ ಸಮುದಾಯ ಭವನದ ಹೊರಾಂಗಣದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸ್ವಚ್ಛತೆ, ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ವಾಗತ ಕಮಾನುಗಳ ನಿರ್ಮಾಣ:ನಗರದ ನಾಲ್ಕು ಕಡೆಗಳಲ್ಲಿನ ಮುಖ್ಯರಸ್ತೆಗಳಲ್ಲಿ ಬೃಹತ್ ಸ್ವಾಗತ ಕಮಾನುಗಳ ನಿರ್ಮಾಣ, ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣ, ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ, ಗ್ರಾಮೀಣ ಭಾಗದ ಜನರಿಗಾಗಿ ೨೫ ಬಸ್ಸಿನ ವ್ಯವಸ್ಥೆ ಹಾಗೂ ವಿವಿಧ ತಾಲೂಕು ಕೇಂದ್ರಗಳಿಂದಲೂ ಪ್ರತ್ಯೇಕ ಬಸ್ ಸಂಪರ್ಕ ಮಾಡಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದೆ. ಈಗಾಗಲೇ ೧೮ ಸಮಿತಿಗಳನ್ನು ರಚಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ. ಉತ್ಸವ ಆಚರಣೆಗೆ ಪ್ರವಾಸೋದ್ಯಮ ಇಲಾಖೆಗೆ ಅನುದಾನ ನೀಡಲು ಪತ್ರ ಬರೆಯಲಾಗುವುದು ಎಂದರು.ಬಂಡಿ ಉತ್ಸವ:ಫೆ.೨ರಂದು ಅದ್ಧೂರಿ ಬಂಡಿ ಉತ್ಸವದ ಮೂಲಕ ಕನಕಗಿರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುವುದು. ರೈತರು ತಮ್ಮ ಎತ್ತುಗಳ ಜತೆ ನೂರಾರು ಬಂಡಿಗಳನ್ನು ಕಟ್ಟಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಬಂಡಿ ಉತ್ಸವ ಇದೇ ಮೊದಲ ಬಾರಿಗೆ ಉತ್ಸವ ಸಂದರ್ಭದಲ್ಲಿ ಹಮ್ಮಿಕೊಂಡಿದೆ ಎಂದರು.ಉತ್ಸವಕ್ಕೆ ಸಿಎಂ, ಡಿಸಿಎಂ ಹಲವು ಸಚಿವರು ಭಾಗಿ:ಮಾ.೨, ೩ರಂದು ನಡೆಯುವ ಕನಕಗಿರಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ಸಚಿವರು ಆಗಮಿಸಲಿದ್ದಾರೆ.ಮೂರು ಹೆಲಿಪ್ಯಾಡ್:ಹಂಪಿ ಮಾದರಿಯಲ್ಲಿ ಹೆಲಿಪ್ಯಾಡ್ನಲ್ಲಿ ಓಡಾಡುವ ವ್ಯವಸ್ಥೆಯನ್ನು ಕನಕಗಿರಿ ಉತ್ಸವದಲ್ಲೂ ಮಾಡಲಾಗಿದೆ. ಒಟ್ಟು ಮೂರು ಹೆಲಿಕಾಪ್ಟರ್ಗಳು ಬರಲಿವೆ. ಅದರಲ್ಲಿ ಎರಡು ಹೆಲಿಪ್ಯಾಡ್ ಗಳು ಜನಸಾಮಾನ್ಯರಿಗೆ ಮೀಸಲಿರಿಸಲಾಗಿದೆ. ಹೆಲಿಪ್ಯಾಡ್ನಲ್ಲಿ ಓಡಾಡಲು ಜಿಲ್ಲಾಡಳಿತ ಇನ್ನೂ ಶುಲ್ಕ ನಿಗದಿಗೊಳಿಸಿಲ್ಲ. ಶುಲ್ಕವನ್ನು ಜಿಲ್ಲಾಧಿಕಾರಿ ನೇತೃತ್ವದ ತಂಡ ಫೈನಲ್ ಮಾಡಲಿದೆ ಎಂದು ಅವರು ತಿಳಿಸಿದರು.ಜಿಲ್ಲಾಧಿಕಾರಿ ನಳಿನ್ ಅತುಲ್, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಿಗೋಡಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ತಹಶೀಲ್ದಾರ ವಿಶ್ವನಾಥ ಮುರುಡಿ, ತಾಪಂ ಇಒ ಚಂದ್ರಶೇಖರ ಕಂದಕೂರು, ಪಿಐ ಎಂ.ಡಿ ಪೈಜುಲ್ಲಾ, ಜೆಸ್ಕಾಂ ಎಇಇ ವಿರೇಶ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಇದ್ದರು.