ಸಾರಾಂಶ
ಗದಗ: ಟಿವಿ ಸಂದರ್ಶನದಲ್ಲಿ ಮಹಾರಾಷ್ಟ್ರದ ಕನ್ಹೇರಿ ಕಾಡಸಿದ್ದೇಶ್ವರ ಮಠದ ಶ್ರೀಗಳು ನಮ್ಮ ಪೂರ್ವಾಶ್ರಮದ ಸಂಬಂಧಿಗಳಿಗೆ ನಾವು 20 ತೊಲ ಬಂಗಾರ ಕೊಟ್ಟಿರುವುದಾಗಿ ಮಾಡಿರು ಆರೋ ಆರೋಪ ನಿರಾಧಾರ ಮತ್ತು ಶುದ್ಧ ಸುಳ್ಳು ಎಂದು ಡಂಬಳ- ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ರೀತಿಯ ಆರೋಪ ಮಾಡುವ ಮೂಲಕ ಬಸವ ಸಂಸ್ಕೃತಿ ಅಭಿಯಾನದ ಮುಂಚೂಣಿಯಲ್ಲಿರುವ ನಮ್ಮನ್ನು ಹೆದರಿಸಿ ಹಿಂದೆ ಸರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.ಈ ಮೊದಲು ನಾವು ನಮ್ಮ ಪೂರ್ವಾಶ್ರಮ ಸಂಬಂಧಿಗಳ ಯಾವುದೇ ಮದುವೆಗೆ ಹೋದ ಉದಾಹರಣೆ ಇಲ್ಲ. ಮದುವೆಯಾಗುವ ಹುಡುಗ ನಮ್ಮ ಪ್ರಸಾದನಿಲಯದ ವಿದ್ಯಾರ್ಥಿಯಾಗಿದ್ದವ. ಅವನ ದಯನೀಯ ಪ್ರಾರ್ಥನೆಗೆ ಹೋಗಲೇಬೇಕಾದ ಅನಿವಾರ್ಯತೆ. ಆದಾಗ್ಯೂ ಮದುವೆಯ ದಿನ ಹೋಗದೇ ಹಿಂದಿನ ದಿನ ನಾವು ಎಲ್ಲ ಮದುವೆಗಳಿಗೆ ಹೋದಂತೆ ಹೋಗಿ ಅವನಿಗೊಂದು ಶಾಲು ಹೊದಿಸಿ ಆಶೀರ್ವದಿಸಿ ಬರಲಾಗಿದೆ ಎಂದಿದ್ದಾರೆ.ನಾವು ಈ ಮದುವೆಯಲ್ಲಿ ಯಾವುದೇ ಬಂಗಾರ ಕೊಟ್ಟಿಲ್ಲ. 20 ತೊಲ ಬಂಗಾರ ಹಾಕಿದರು ಎಂದು ಹೇಳಿರುವುದು ನಮ್ಮ ಚಾರಿತ್ರ್ಯ ಹನನದ ಕಾರ್ಯವಾಗಿದೆ. ಅಭಿಯಾನದಲ್ಲಿ ಭಾಗವಹಿಸಿದ ಸ್ವಾಮಿಗಳು ದಾರು ಕುಡಿಯುತ್ತಾರೆ. ಮಾಂಸ ಭಂಜಕರಾಗಿದ್ದಾರೆ. ಕ್ರಾಪು ಬಿಟ್ಟು ಮೇಲೆ ಪೇಟಾ ಸುತ್ತುತ್ತಾರೆ ಎಂಬಂತಹ ಅವರ ಚಾರಿತ್ರ್ಯ ಹನನ ಮಾಡುವ ಮಾತುಗಳು ಯಾವ ಉದ್ದೇಶ ಹೊಂದಿವೆ ಎಂಬುದು ಸಾರ್ವಜನಿಕರಿಗೆ ತಿಳಿದ ವಿಷಯವಾಗಿದೆ. ಲಿಂಗಾಯತ ಸ್ವತಂತ್ರ ಧರ್ಮವಾದರೆ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರಾಗುವ ಮೂಲಕ ಸಂವಿಧಾನದತ್ತವಾದ ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ. ಇದು ಲಿಂಗಾಯತರ ಭವಿಷ್ಯದ ಹಿತದೃಷ್ಟಿಯಿಂದ ನಡೆದ ಹೋರಾಟ. ಇದರಿಂದ ದೇಶ ಹಾಳಾಗುತ್ತದೆ ಎಂದು ಶ್ರೀಗಳು ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಈ ಮೊದಲು ಭಾರತೀಯರೇ ಆಗಿರುವ ಬೌದ್ಧ ಧರ್ಮೀಯರಿಗೆ, ಸಿಖ್ ಧರ್ಮದವರಿಗೆ ಮತ್ತು ಇತ್ತೀಚೆಗೆ ಜೈನ ಧರ್ಮದವರಿಗೆ ಸ್ವತಂತ್ರ ಧರ್ಮದ ಸ್ಥಾನ ನೀಡಲಾಗಿದೆ. ಇದರಿಂದ ದೇಶದ ಭದ್ರತೆಗೆ ಯಾವ ಹಾನಿಯಾಗಿದೆ? ಅದೇ ಮಾದರಿಯಲ್ಲಿ ದೇಶಪ್ರೇಮಿಗಳಾಗಿರುವ ಲಿಂಗಾಯತರ ಸಾಂವಿಧಾನಿಕ ಹಕ್ಕುಗಳನ್ನು ಪಡೆಯುವುದು ನಮ್ಮ ಲಿಂಗಾಯತ ಹೋರಾಟದ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನು ತಾತ್ವಿಕ ನೆಲೆಯಲ್ಲಿ ಅವರು ಖಂಡಿಸುವುದನ್ನು ಬಿಟ್ಟು, ಹೋರಾಟದ ಮುಂಚೂಣಿಯಲ್ಲಿರುವ ನಮ್ಮನ್ನು ಮಾತ್ರ ಗುರಿ ಮಾಡಿಕೊಂಡು ಸುಳ್ಳು ಆರೋಪ ಹೊರಿಸುವುದು ಎಷ್ಟು ಸರಿ? ನಾವು ಅಂಥ ಕೆಲಸ ಮಾಡಿದ್ದರೆ ನಮ್ಮ ಭಕ್ತರು ಪ್ರಶ್ನಿಸುತ್ತಾರೆ. ನಿಮ್ಮ ಮಠದ ಹಾಗೆಯೇ ನಮ್ಮ ಮಠದ ಆಡಳಿತವೂ ಪಾರದರ್ಶಕವೇ ಆಗಿದೆ ಎಂದಿದ್ದಾರೆ.
ಮಠದ ಎಲ್ಲ ವ್ಯವಹಾರಗಳನ್ನು ವ್ಯವಸ್ಥಾಪಕರು, ವಿದ್ಯಾಸಂಸ್ಥೆಗಳ ವ್ಯವಹಾರಗಳನ್ನು ಆಡಳಿತಾಧಿಕಾರಿಗಳು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ನಾವು ನಮಗೆ ಬೇಕಾದವರನ್ನು ನೇಮಿಸಿಕೊಂಡು ಯಾವುದೇ ಭ್ರಷ್ಟ ವ್ಯವಹಾರ ಮಾಡಿಲ್ಲ. ಧರ್ಮಕ್ಕೆ, ಧರ್ಮಾಧಿಕಾರಿಗಳಿಗೆ ಸಂಬಂಧಿಸಿದ ವಿಷಯವನ್ನು ತಾತ್ವಿಕ ನೆಲೆಯಲ್ಲಿ ಖಂಡಿಸಲಿ. ಅದಕ್ಕೆ ಸ್ವಾಗತವಿದೆ. ಆದರೆ ಸುಳ್ಳು ಆರೋಪಗಳ ಮೂಲಕ ಚಾರಿತ್ರ್ಯಹನನ ಮಾಡುವ ಕೆಲಸ ಯಾರೂ ಮಾಡಬಾರದು. ಇದು ಮಠಾಧಿಪತಿಗಳಾದವರಿಗೆ ಶೋಭೆ ತರುವಂತಹದ್ದಲ್ಲ ಎಂದು ತೋಂಟದ ಶ್ರೀಗಳು ವಿಷಾದಿಸಿದ್ದಾರೆ.