ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧ: ಬಿ ಜಿ ಗೋವಿಂದಪ್ಪ

| Published : Feb 19 2024, 01:32 AM IST

ಸಾರಾಂಶ

ಬೆಲಗೂರು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಬಿಜೆ ಗೋವಿಂದಪ್ಪ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು

ಕನ್ನಡಪ್ರಭ ವಾರ್ತೆ ಹೊಸದುರ್ಗ

ಹೊಸದುರ್ಗ ಪಟ್ಟಣ ಸೇರಿ ಗ್ರಾಮಾಂತರ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದು, ಅದರಂತೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಗ್ರಾಮಾಂತರ ಪ್ರದೇಶಗಳ ರಸ್ತೆ ಸೇರಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ₹25 ಕೋಟಿ ಅನುದಾನ ತರುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಬಿ ಜಿ ಗೋವಿಂದಪ್ಪ ಹೇಳಿದರು.

ಶ್ರೀರಾಂಪುರ ಹೋಬಳಿ ಶ್ರೀರಾಂಪುರ, ಬೆಲಗೂರು, ತಂಡಗ, ಕುರುಬರಹಳ್ಳಿ ಗ್ರಾಪಂ ವ್ಯಾಪ್ತಿ ಹಳ್ಳಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷವಾಗಿದ್ದು, ನಮಗೆ ಮತ ಹಾಕಿದ ಮತದಾರರ ಋಣ ತೀರಿಸುವ ಜವಾಬ್ಧಾರಿ ನನ್ನ ಮೇಲಿದೆ. ಮತದಾರರ ನಿರೀಕ್ಷೆಯಂತೆ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.

ಬೇಸಿಗೆ ಕಾಲವಾಗಿರುವ ಕಾರಣ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸಭೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಬೆಲಗೂರು ಗ್ರಾಮ ಹಾಗೂ ಗಾಂಧಿನಗರ ಮತ್ತು ಶಿಂಗೇನಹಳ್ಳಿ ಗ್ರಾಮಗಳಲ್ಲಿ ₹115 ಲಕ್ಷಗಳ ವೆಚ್ಚದ ಸಿ.ಸಿ.ರಸ್ತೆ, ತಂಡಗ ಗ್ರಾಪಂ ವ್ಯಾಪ್ತಿ ಕೆರೆಹೊಸಹಳ್ಳಿ, ಕೋಡಿಹಳ್ಳಿ, ಯಾದಘಟ್ಟ ಭೋವಿಹಟ್ಟಿ, ಗರಗ ಮತ್ತು ತಂಡಗ ಗ್ರಾಮಗಳಲ್ಲಿ ₹105 ಲಕ್ಷ ವೆಚ್ಚದ ಸಿಸಿ ರಸ್ತೆ, ಶ್ರೀರಾಂಪುರ ಗ್ರಾಪಂ ವ್ಯಾಪ್ತಿಯಲ್ಲಿ ₹85 ಲಕ್ಷ ವೆಚ್ಚದಲ್ಲಿ ಶ್ರೀರಾಂಪುರ, ಗೂಳಿಹಳ್ಳಿ, ಕಾಚಾಪುರ, ತೋಟದ ಮನೆ ಮತ್ತು ಭರಮಯ್ಯನಪಾಳ್ಯ ಗ್ರಾಮಗಳಲ್ಲಿ ಸಿ.ಸಿ. ರಸ್ತೆ, ಹಾಗೂ ಹೆಗ್ಗೆರೆ ಗ್ರಾಪಂ ವ್ಯಾಪ್ತಿಯ ಹೆಗ್ಗೆರೆ, ದಳವಾಯಕಟ್ಟೆ, ಓಬಳಾಪುರ, ಸೊಪ್ಪಿನಗುಡ್ಲು ಗ್ರಾಮಗಳಲ್ಲಿ ₹120ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಲಾಗಿದ್ದು ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರುಗಳು, ಅಧಿಕಾರಿಗಳು, ಮುಖಂಡರು, ಭಾಗವಹಿಸಿದ್ದರು.