ಕನ್ನಡಪ್ರಭ ವಾರ್ತೆ ಮೈಸೂರುಅರಿವು ಮತ್ತು ಜ್ಞಾನ ಸೇರಿ ಕಾವ್ಯದ ಸೃಷ್ಟಿಗೆ ಕಾರಣವಾಗುತ್ತದೆ. ಇದಕ್ಕೆ ನಿರಂತರ ಓದಿನ ಅಗತ್ಯವಿದೆ ಎಂದು ಹಿರಿಯ ರಂಗಕರ್ಮಿ ಪ್ರೊ.ಸಿ.ವಿ. ಶ್ರೀಧರಮೂರ್ತಿ ತಿಳಿಸಿದರು.ನಗರದ ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಬುಧವಾರ ಕಾಲೇಜಿನಲ್ಲಿ ಏರ್ಪಡಿಸಿದ್ದ ಪಯಣ ಕನ್ನಡ ಕಾವ್ಯಾ ಗಾಯನ-ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕವಿತೆ ಬರೆಯುವುದು ಒಂದು ಹಂತವಾದರೆ, ವಾಚಿಸುವುದು ಮತ್ತೊಂದು ಹಂತ. ಹಲವು ವಿಧದ ಭಾವನೆ, ಅರಿವು ಮತ್ತು ಜ್ಞಾನ ಸೇರಿ ಕಾವ್ಯ ಸೃಷ್ಟಿಯಾಗುತ್ತದೆ. ಇದಕ್ಕೆ ನಿರಂತರ ಓದಿನ ಅಗತ್ಯ ವಿದೆ. ಕನ್ನಡ ಸಾಹಿತ್ಯಲೋಕ ಹಳಗನ್ನಡ, ನವ್ಯ, ನವೋದಯ ಪ್ರಕಾರಗಳಲ್ಲೂ ನವನವೀನ ರೂಪ ಪಡೆದು ಜನಮಾನಸದಲ್ಲಿ ಉಳಿದಿದೆ ಎಂದು ಅವರು ಹೇಳಿದರು.ವಿಮರ್ಶೆ, ಸಂಶೋಧನೆ ಸೇರಿದಂತೆ ಎಲ್ಲ ರೀತಿಯ ಬರವಣಿಗೆಯೂ ಸೃಜನಶೀಲ ಸಾಹಿತ್ಯ. ಇತ್ತೀಚೆಗೆ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ವಿಮರ್ಶೆ ಬರೆಯುವ ಹಾಗೂ ಓದುವವರು ಇನ್ನೂ ವಿರಳ. ಪುಸ್ತಕ ಸಂಸ್ಕೃತಿ ಉಳಿಸಿ ಬೆಳೆಸಲು ಇಂತಹ ವೇದಿಕೆಗಳು ಅಗತ್ಯ ಎಂದರು.ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಸಾಹಿತ್ಯವನ್ನು ಪುಸ್ತಕದಲ್ಲೇ ಓದಬೇಕು, ಇದರಿಂದ ಮಾತ್ರ ಅನುಭವದೊಂದಿಗೆ ಸಾಹಿತ್ಯ ಚೆನ್ನಾಗಿ ಅರ್ಥವಾಗುತ್ತದೆ. ಇತ್ತೀಚೆಗೆ ಸಾಹಿತ್ಯದ ಮಜಲು ವಿಸ್ತಾರಗೊಂಡಿರುವುದರಿಂದ ಇಂಟರ್‌ ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಓದುತ್ತಿದ್ದಾರೆ ಎಂದರು.ಸಂತ ಫಿಲೋಮಿನಾ ಕಾಲೇಜಿನ ರೆಕ್ಟರ್ ಡಾ. ಲೂರ್ದ್ ಪ್ರಸಾದ್ ಜೋಸೆಫ್, ಕ್ಯಾಂಪಸ್ ಆಡಳಿತಾಧಿಕಾರಿ ಜ್ಞಾನ ಪ್ರಕಾಶಂ, ಪ್ರಾಂಶುಪಾಲ ಡಾ. ರವಿ ಜೆ.ಡಿ. ಸಲ್ಡಾನ್ಹಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಟಿ. ಸದೆಬೋಸ್, ಸಂಚಾಲಕಿ ಮೇರಿ ನಿವೇದಿತಾ ಇದ್ದರು.