ಕನ್ನಡ ಭಾಷೆಗೂ, ಲಿಂಗಾಯತ ಧರ್ಮಕ್ಕೂ ಅವಿನಾಭಾವ ಸಂಬಂ‍ಧವಿದ್ದು, ಕನ್ನಡ ಭಾಷೆಯೇ ಲಿಂಗಾಯತರ ಅಸ್ಮಿತೆಯಾಗಿದೆ ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಭಾಷೆಗೂ, ಲಿಂಗಾಯತ ಧರ್ಮಕ್ಕೂ ಅವಿನಾಭಾವ ಸಂಬಂ‍ಧವಿದ್ದು, ಕನ್ನಡ ಭಾಷೆಯೇ ಲಿಂಗಾಯತರ ಅಸ್ಮಿತೆಯಾಗಿದೆ ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಚಿನ್ಮಯಿಜ್ಞಾನಿ ಚನ್ನಬಸವಣ್ಣನ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂಗಾಯತ ಧರ್ಮವು ಕನ್ನಡಿಗರ ಏಕೈಕ ಧರ್ಮವಾಗಿದೆ ಎಂದರು.

ಬೌದ್ಧ ಧರ್ಮಕ್ಕೆ ಪಾಳಿ ಮೂಲಭಾಷೆಯಾದರೆ, ಇಸ್ಲಾಂ ಧರ್ಮಕ್ಕೆ ಅರೇಬಿಕ್ ಮೂಲಭಾಷೆಯಾಗಿದೆ. ಅದೇ ರೀತಿ ಜಗತ್ತಿನಲ್ಲಿ ಬೇರೆ ಬೇರೆ ಧರ್ಮಗಳಿಗೆ ಬೇರೆ ಮೂಲಭಾಷೆಗಳಿವೆ. ಆದರೆ ಲಿಂಗಾಯತ ಸ್ವತಂತ್ರ ಧರ್ಮವನ್ನು ಕನ್ನಡ ಮೂಲದ್ದು ಎಂಬುದು ನಾವೆಲ್ಲರೂ ಹೆಮ್ಮಪಡುವ ಸಂಗತಿಯಾಗಿದೆ ಎಂದು ತಿಳಿಸಿದರು.

ಲಿಂಗಾಯತ ಧರ್ಮಕ್ಕೂ, ಕನ್ನಡ ಭಾಷೆಯೂ ತಾಯಿ-ಮಗನ ಸಂಬಂಧವಿದೆ. ಇಂತಹ ಕನ್ನಡವೇ ಧರ್ಮ, ಸಂಸ್ಕೃತಿ ಪರಂಪರೆಯಾಗಿದೆ. ಆದಿ ಕಾಲದಿಂದಲೂ ಆಧುನಿಕ ಕಾಲದವರೆಗೆ ಸಾಕಷ್ಟು ರಾಜ, ಮಹಾರಾಜರು, ಕವಿ, ಸಾಹಿತಿಗಳು ಈ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡುವ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ವಾಗ್ಮಿ ಎಂ.ಬಿ.ನಾಗರಾಜ ಕಾಕನೂರು ಮಾತನಾಡಿ, ಚನ್ನಬಸವಣ್ಣನವರು ಪ್ರಾಯದಲ್ಲಿ ಚಿಕ್ಕವರಿದ್ದರೂ ಅಭಿಪ್ರಾಯದಲ್ಲಿ ದೊಡ್ಡವರಿದ್ದರು. 1763 ವಚನಗಳನ್ನು ರಚಿಸಿದ ಮಹಾನ್ ಚೇತನವಾಗಿದ್ದಾರೆ. 24 ವರ್ಷ ಮಾತ್ರ ಬಾಳಿದ್ದರೂ ಅನುಭ‍ವ ಮಂಟಪದಲ್ಲಿ ಚನ್ನಬಸವಣ್ಣನವರ ನಿರ್ಣಯವೇ ಅಂತಿಮವಾಗಿತ್ತು ಎಂದರು.

ಮತ, ಮೌಢ್ಯ, ಭೇದಭಾವವು ಶರಣರಲ್ಲಿರಲಿಲ್ಲ. ಶರಣರ ಕಾಲದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ತತ್ವ ಚಾಲ್ತಿಯಲ್ಲಿತ್ತು. ಶರಣರಲ್ಲಿ ಅನೇಕರು ಅನಕ್ಷರಸ್ಥರಾಗಿದ್ದರೂ ಅಂತರಂಗದ ಜ್ಯೋತಿ ಬೆಳಗಿಸಿಕೊಂಡಿದ್ದರು. ಆದರೆ, ಈಗ ವಿಶ್ವ ವಿದ್ಯಾನಿಯಗಳಿದ್ದರೂ ಜನರ ಅಂತರಂಗದ ಜ್ಯೋತಿ ಆರಿದೆ. ಮಕ್ಕಳು ಪರೀಕ್ಷೆಯಲ್ಲಿ ಅಂಕ, ಜೀವನದಲ್ಲಿ ಸಂಪತ್ತನ್ನು ಗಳಿಸಬೇಕೆಂದು ಬಯಸುವ ಪಾಲಕರು ಸರಿಯಾದ ಸಂಸ್ಕಾರ, ಆದರ್ಶ ಗುಣಗಳನ್ನೇ ಕಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಪರ ಹಿರಿಯ ಹೋರಾಟಗಾರ ಬಂಕಾಪುರ ಚನ್ನಬಸಪ್ಪ ಮಾತನಾಡಿ, ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಬಹುತೇಕ ಅವಿದ್ಯಾವಂತರೇ ಇದ್ದರು. ಅವಿದ್ಯಾವಂತ ಗ್ರಾಮೀಣರಿಂದ ಇಂದು ಕನ್ನಡ ಉಳಿದಿದೆ. ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇರಿದಂತೆ ಅನೇಕ ಕನ್ನಡೇತರರು ಕೂಡ ಭಾಷೆ ಬೆಳವಣಿಗೆಗೆ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಬಸವ ಬಳಗದ ಅಧ್ಯಕ್ಷ ಎ.ಹೆಚ್.ಹುಚ್ಚಪ್ಪ ಮಾಸ್ತರ್‌, ಎನ್.ಎಸ್.ರಾಜು, ಚಿತ್ತರಗಿ ಶಿವಕುಮಾರ, ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ, ಆವರಗೆರೆ ರುದ್ರಮುನಿ ಇತರರು ಇದ್ದರು.

ಲಿಂಗಾಯತ ಧರ್ಮಕ್ಕೆ ಸಂವಿಧಾನ ರಚಿಸಿದ ಕೀರ್ತಿ ಚನ್ನಬಸಣ್ಣಗೆ ಸಲ್ಲುತ್ತದೆ. ವಯಸ್ಸು ಕಿರಿದಾದರೂ ಪ್ರತಿಭೆ ದೊಡ್ಡದಾಗಿತ್ತು. ಲಿಂಗಾಯಿತ ತತ್ವಕ್ಕೆ ವ್ಯಾಖ್ಯಾನ ಬರೆದವರು. ಚನ್ನಬಸವಣ್ಣನವರ ವಚನಗಳಲ್ಲಿ ಅಪಾರ ಜ್ಞಾನವಿದೆ. ಅದನ್ನು ಮಕ್ಕಳಿಗೆ ತಿಳಿಸಿದರೆ ದಿವ್ಯಜ್ಞಾನಿಯಾಗುತ್ತಾರೆ. ಜಾಗತಿಕ ಲಿಂಗಾಯಿತ ಮಹಾಸಭಾ ಪ್ರತಿ ತಿಂಗಳು ಏರ್ಪಡಿಸಲು ಉದ್ದೇಶಿಸಿರುವ ಇಂತಹ ಮಾಸಿಕ ಜ್ಞಾನದಾಸೋಹ ಕಾರ್ಯಕ್ರಮವು ನಿರಂತರ ನಡೆಯಲಿ.

ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ