ಕನ್ನಡ ಕೇವಲ ಅಭಿಮಾನವಲ್ಲ, ಜೀವನ ವಿಧಾನ: ಪ್ರೊ.ವಿಜಯಕುಮಾರಿ ಎಸ್.ಕರಿಕಲ್

| Published : Nov 02 2025, 02:00 AM IST

ಕನ್ನಡ ಕೇವಲ ಅಭಿಮಾನವಲ್ಲ, ಜೀವನ ವಿಧಾನ: ಪ್ರೊ.ವಿಜಯಕುಮಾರಿ ಎಸ್.ಕರಿಕಲ್
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಪ್ರಾಚೀನ ಕವಿಗಳು ಕನ್ನಡ ನೆಲದ ಅನನ್ಯತೆಯನ್ನು ತಮ್ಮ ಕೃತಿಗಳಲ್ಲಿ ತುಂಬಾ ಸುಂದರವಾಗಿ ದಾಖಲಿಸಿದ್ದಾರೆ. ಅಂತೆಯೇ ಇಲ್ಲಿನ ಜನರ ಗುಣಗಳನ್ನು ಹೊಗಳಿದ್ದಾರೆ. ಅತ್ಯುಗ್ರರ್, ಚೆಲ್ವರ್ಕಳ್ ಎಂದು ಬಣ್ಣಿಸುವಲ್ಲಿ ಕನ್ನಡಿಗರ ಗುಣದ ಜೊತೆಗೆ ಸೌಂದರ್ಯ ಪ್ರಜ್ಞೆಯನ್ನು ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಕೇವಲ ಮಾತು, ಸಾಮಗ್ರಿ ಅಷ್ಟೇ ಅಲ್ಲ. ನೆಲೆ, ಜಲ, ಸಂಸ್ಕೃತಿ, ಸಾಹಿತ್ಯ ಈ ಎಲ್ಲದರಲ್ಲಿಯೂ ಕನ್ನಡತನ ಮಡುಗಟ್ಟಿದೆ. ಅವುಗಳೊಂದಿಗೆ ಈ ನೆಲದ ಗುಣವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಅದುವೇ ನಿಜವಾದ ಕನ್ನಡಾಭಿಮಾನ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕಿ ವಿಜಯಕುಮಾರಿ ಎಸ್. ಕರಿಕಲ್ ಹೇಳಿದರು.

ನಗರದ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಪ್ರಾಚೀನ ಕವಿಗಳು ಕನ್ನಡ ನೆಲದ ಅನನ್ಯತೆಯನ್ನು ತಮ್ಮ ಕೃತಿಗಳಲ್ಲಿ ತುಂಬಾ ಸುಂದರವಾಗಿ ದಾಖಲಿಸಿದ್ದಾರೆ. ಅಂತೆಯೇ ಇಲ್ಲಿನ ಜನರ ಗುಣಗಳನ್ನು ಹೊಗಳಿದ್ದಾರೆ. ಅತ್ಯುಗ್ರರ್, ಚೆಲ್ವರ್ಕಳ್ ಎಂದು ಬಣ್ಣಿಸುವಲ್ಲಿ ಕನ್ನಡಿಗರ ಗುಣದ ಜೊತೆಗೆ ಸೌಂದರ್ಯ ಪ್ರಜ್ಞೆಯನ್ನು ದಾಖಲಿಸಿದ್ದಾರೆ ಎಂದರು.

ಕರ್ನಾಟಕವು ಕಲೆ, ಸಾಹಿತ್ಯ, ಸಂಗೀತ, ನೃತ್ಯ ಈ ಮೊದಲಾದವುಗಳಲ್ಲಿ ತನ್ನದೇ ಆದ ಅನನ್ಯತೆ ಹೊಂದಿದೆ. ದಕ್ಷಿಣಾತ್ಯ ಸಂಗೀತವನ್ನು ಕರ್ನಾಟಕ ಸಂಗೀತವೆಂದು ಕರೆಯುವ ಪರಂಪರೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಇಂತಹ ಸಮೃದ್ಧ ಪರಂಪರೆಯ ಕನ್ನಡಕ್ಕೆ ಅನೇಕ ಏಳುಬೀಳುಗಳು ಉಂಟಾಗಿವೆ. ಪ್ರತಿಯೊಂದು ನಾಡಿಗೂ ಭಾಷೆಗೂ ಇದು ಸಹಜವಾದದ್ದು. ಆದರೆ ಅಂತಹ ಏಳುಬೀಳನ್ನು ಮೀರಿ ಬೆಳೆಯುವುದು ಕನ್ನಡ ಪರಂಪರೆಯ ಗುಣಗಳಲ್ಲಿ ಒಂದು. ಇಂತಹ ಪರಂಪರೆಯನ್ನು ಕಟ್ಟಿಕೊಟ್ಟಿರುವ ಮಹನೀಯರನ್ನು ಇಂತಹ ಸಂದರ್ಭಗಳಲ್ಲಿ ನೆನೆಯುತ್ತಾ ಕನ್ನಡವನ್ನು ಕಟ್ಟುವ ಬೆಳೆಸುವ ಕಾರ್ಯಗಳನ್ನು ಸದಾ ಮಾಡೋಣ ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಅವರು, ಇಂದು ಪ್ರಪಂಚವು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಹೊಸ ದಿಕ್ಕಿನೆಡೆಗೆ ಸಾಗುತ್ತಿದೆ. ಇಂತಹ ಹೊಸ ಜಗತ್ತಿನಲ್ಲಿ ಪ್ರತಿಯೊಂದು ಭಾಷೆಯು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ಅದರ ನಡೆಯಲ್ಲಿ ಬದಲಾವಣೆಗಳಾಗಲೇ ಬೇಕಿದೆ. ಕನ್ನಡವನ್ನು ಅಧ್ಯಯನ ಮಾಡುವವರು ಹೊಸ ಅಗತ್ಯತೆಗಳಿಗೆ ತಕ್ಕಂತೆ ಪಠ್ಯಪುಸ್ತಕ ರಚಿಸುವ ಸಂಶೋಧನೆ ಕೈಗೊಳ್ಳುವ ದಿಕ್ಕಿನತ್ತ ಸಾಗಬೇಕು ಎಂದು ಅವರು ತಿಳಿಸಿದರು.

ಆಗ ಮಾತ್ರ ಕನ್ನಡವು ಅನ್ನದ ಭಾಷೆಯಾಗುವುದಕ್ಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ವಿದ್ವಾಂಸರು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ತುರ್ತು ಆಲೋಚನೆ ನಡೆಸಬೇಕು. ಪಠ್ಯಗಳಲ್ಲಿ ಕೌಶಲ್ಯಾಧಾರಿತ ಅಧ್ಯಯನಗಳು ಸಾಗಿದಾಗ ಕನ್ನಡ ಉದ್ಯೋಗಮುಖಿ ಆಗಲು ಸಾಧ್ಯವಾಗುತ್ತದೆ. ಈಗ ಇನ್ನೂ ಮುಂದುವರೆದು ಕೃತಕ ಬುದ್ದಿಮತ್ತೆಯ ಕಾಲ. ಇದಕ್ಕೆ ತಕ್ಕಂತೆ ಕನ್ನಡವನ್ನು ಕೃತಕಬುದ್ಧಿ ಮತ್ತೆಯ ಅಗತ್ಯತೆಗಳಿಗೆ ತಕ್ಕಂತೆ ವೈಜ್ಞಾನಿಕವಾಗಿ ಹೊಂದಿಸಬೇಕು. ಆಗ ಕನ್ನಡದ ಬೆಳವಣಿಗೆ ಇನ್ನೂ ಉನ್ನತಮಟ್ಟದಲ್ಲಿ ವಿಶ್ವವ್ಯಾಪಿಯಾಗಿ ಬೆಳೆಯುತ್ತದೆ ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್. ನಂಜುಂಡಸ್ವಾಮಿ ವಂದಿಸಿದರು. ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್. ಸುದೀಪ್ ನಿರೂಪಿಸಿದರು. ಹಿರಿಯ ಪ್ರಾಧ್ಯಾಪಕ ಎಚ್.ಪಿ.ದೇವಣ್ಣ ಇದ್ದರು.