ಕನ್ನಡ ಕೇವಲ ಮಾತೃಭಾಷೆಯಲ್ಲ, ಅದೊಂದು ಸಂಸ್ಕೃತಿ: ಉಷಾ ಪ್ರಭಾ ನಾಯಕ್‌

| Published : Nov 02 2024, 01:26 AM IST

ಕನ್ನಡ ಕೇವಲ ಮಾತೃಭಾಷೆಯಲ್ಲ, ಅದೊಂದು ಸಂಸ್ಕೃತಿ: ಉಷಾ ಪ್ರಭಾ ನಾಯಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜಿನ ಉಪಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ ಮಾತನಾಡಿ, ೮ ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವ ಭಾಷೆ ನಮ್ಮ ಕನ್ನಡ. ಕನ್ನಡ ಲಿಪಿಗಳ ರಾಣಿ ಎಂದು ವಿನೋಭಾ ಭಾವೆ ಹೇಳಿದ್ದಾರೆ. ವಿಶ್ವದ ಭಾಷೆಗಳಲ್ಲಿ ಕನ್ನಡ ಭಾಷೆಗೆ ಅದ್ವಿತೀಯ ಸ್ಥಾನವಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕನ್ನಡ ಎನ್ನುವುದು ಕೇವಲ ಮಾತೃಭಾಷೆಯಲ್ಲ. ಅದೊಂದು ಸಂಸ್ಕೃತಿ ಎಂದು ಎಕ್ಸ್‌ಪರ್ಟ್‌ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಅಭಿಪ್ರಾಯಪಟ್ಟರು.ವಳಚ್ಚಿಳ್ ಎಕ್ಸ್‌ಪರ್ಟ್‌ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಚಿತ್ರರಂಗಕ್ಕೆ ಮಂಗಳೂರಿನವರ ಕೊಡುಗೆ ಹೆಚ್ಚಿದೆ. ಬೇರೆ ಬೇರೆ ಪ್ರದೇಶದ ಕನ್ನಡಕ್ಕೆ ತನ್ನದೇ ಆದ ಸೊಗಡಿದೆ. ನನಗೆ ಮಾತೃಭಾಷೆ ಬೇರೆಯಾದರೂ, ನಾನು ಕನ್ನಡತಿ ಎಂಬ ಹೆಮ್ಮೆ ನನಗಿದೆ. ನಾವು ಎಲ್ಲಿಯೇ ಇದ್ದರೂ, ಹೇಗೇ ಇದ್ದರೂ ತಾಯ್ನಾಡನ್ನು ಮರೆಯಬಾರದು. ವಿದೇಶ ನಮಗೆ ಕರ್ಮಭೂಮಿಯಾದರೂ, ಕನ್ನಡ ನೆಲ ನಮ್ಮ ಜನ್ಮಭೂಮಿ ಎಂಬುದು ನೆನಪಿನಲ್ಲಿರಬೇಕು. ಈ ನಾಡು ನಮಗೆ ವಿದ್ಯೆ ಮತ್ತು ಬದುಕನ್ನು ಕೊಟ್ಟಿದೆ. ತಾಯ್ನಾಡಿನ ಋಣ ತೀರಿಸಲು ಅಸಾಧ್ಯ. ಕನ್ನಡವು ಬರೆದಂತೆ ಓದುವ, ಓದಿದಂತೆ ಬರೆಯುವ ಭಾಷೆ. ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು. ಕೇವಲ ಬಾಯಿಮಾತಿಗಷ್ಟೇ ಕನ್ನಡ ಎಂದಾಗದೆ, ಬದುಕು ಕೂಡ ಕನ್ನಡವಾಗಬೇಕು ಎಂದರು.ಕಾಲೇಜಿನ ಉಪಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ ಮಾತನಾಡಿ, ೮ ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವ ಭಾಷೆ ನಮ್ಮ ಕನ್ನಡ. ಕನ್ನಡ ಲಿಪಿಗಳ ರಾಣಿ ಎಂದು ವಿನೋಭಾ ಭಾವೆ ಹೇಳಿದ್ದಾರೆ. ವಿಶ್ವದ ಭಾಷೆಗಳಲ್ಲಿ ಕನ್ನಡ ಭಾಷೆಗೆ ಅದ್ವಿತೀಯ ಸ್ಥಾನವಿದೆ ಎಂದರು.ಎಕ್ಸ್‌ಪರ್ಟ್‌ ಶಿಕ್ಷಣ ಸಮೂಹ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್ ಇದ್ದರು. ವಿದ್ಯಾರ್ಥಿ ಕುಶಾಲ್ ಆರ್. ಇ. ಸ್ವಾಗತಿಸಿ, ವಂದಿಸಿದರು.