ಸಾರಾಂಶ
ಗದಗ: ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಂಗೀತ ಕ್ಷೇತ್ರದ ಬೀಡಾಗಿದೆ. ಇಷ್ಟೊಂದು ಶ್ರೀಮಂತ ಸಂಸ್ಕೃತಿ ಹೊಂದಿದ ನಾಡು ಮತ್ತೊಂದಿಲ್ಲ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶುಕ್ರವಾರ ಗದಗ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾದ ಕನ್ನಡ ರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಅನೇಕ ಮಹನೀಯರು ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಫಲಶ್ರುತಿಯಾಗಿ ಹರಿದು ಹಂಚಿಹೋಗಿದ್ದ ಈ ರಾಜ್ಯವು 1956 ರಲ್ಲಿ ಮೈಸೂರು ರಾಜ್ಯವಾಗಿ ಉದಯವಾಯಿತು. ಭಾಷಾವಾರು ಪ್ರಾಂತ್ಯ ನಿರ್ಮಾಣವಾಗಬೇಕೆಂದು ಕರ್ನಾಟಕ ಏಕೀಕರಣ ಚಳವಳಿಯ ಉದ್ದೇಶವಾಗಿದ್ದರಿಂದ ಮೈಸೂರು ರಾಜ್ಯವನ್ನು 1973 ನ. 1 ರಂದು ಕರ್ನಾಟಕ ರಾಜ್ಯವೆಂದು ಪುನರ್ ನಾಮಕರಣ ಮಾಡಲಾಯಿತು.
ಏಕೀಕರಣ ಚಳವಳಿಯ ಅಗತ್ಯ ಪ್ರಬಲವಾಗಿ ಪ್ರತಿಪಾದಿಸಿದ್ದ ಕನ್ನಡದ ಕುಲಪುರೋಹಿತರಾದ ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ ಅವರನ್ನು ನಾವೆಲ್ಲ ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸೋಣ. ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ ರನ್ನ, ಸವಡಿಯ ಒಂದನೆಯ ನಾಗವರ್ಮ, ಚಿಕ್ಕಹಂದಿಗೋಳದ ಶಾಸನಕವಿ ಮಲ್ಲ, ದುರ್ಗಸಿಂಹ, ಕುಮಾರವ್ಯಾಸ, ಚಾಮರಸ, ನಯಸೇನ, ಪುಲಿಗೆರೆಯ ಸೋಮನಾಥ, ಮುಕ್ತಾಯಕ್ಕ ಒಂದಡೆಯಾದರೆ ಇನ್ನೊಂದೆಡೆ ನಮ್ಮ ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆಯ ಕಿರೀಟಕ್ಕೆ ಗರಿ ಮೂಡಿಸಿದವರು ಎಂದರು.ಸಂಗೀತ ಕ್ಷೇತ್ರದ ದಿಗ್ಗಜರಾದ ಪಂಚಾಕ್ಷರಿ ಗವಾಯಿಗಳು ಮತ್ತು ವಿಕಲಚೇತನರ ಬಾಳಿನ ಬೆಳಕಾದ ಡಾ. ಪುಟ್ಟರಾಜ ಕವಿಗವಾಯಿಗಳು, ಕನ್ನಡದ ಜಗದ್ಗುರುಗಳೆಂದೇ ಮನೆಮಾತಾದ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು. ಪತ್ರಿಕಾರಂಗದ ದಿಗ್ಗಜ ಪ.ಲೋ. ಬಂಕಾಪುರ, ಎಂ.ಜೀವನ, ಪಂಢರಿನಾಥ ಗಲಗಲಿ, ಹ.ರಾ. ಕಿದಿಯೂರ, ಎಚ್.ಎಸ್. ಹೊಂಬಾಳಿ, ಕೌತಾಳ ವೀರಪ್ಪ, ಆರ್.ಕೆ.ಜಮಾದಾರ ಮೊದಲಾದವರು ಸ್ಮರಣೀಯರು ಎಂದರು.
ಕರ್ನಾಟಕ ಸಂಭ್ರಮ-50: ಗದುಗಿನ ಇತಿಹಾಸದಲ್ಲಿ ಕರ್ನಾಟಕ ಸಂಭ್ರಮ-50 ಐತಿಹಾಸಿಕ ಮೈಲಿಗಲ್ಲು. ಕನ್ನಡ ಭಾಷೆಯನ್ನಾಡುವ ಕನ್ನಡಿಗರು ಒಂದೇ ರಾಜ್ಯದ ಆಳ್ವಿಕೆಯಲ್ಲಿ ಒಂದಾಗಬೇಕು ಎನ್ನುವ ಆಶಯದಂತೆ ನ.1,1956 ರಂದು ಕರ್ನಾಟಕ ಏಕೀಕರಣವಾಯಿತು. ಗದುಗಿನ ಕಾಟನ್ ಸೇಲ್ ಸೊಸೈಟಿಯಲ್ಲಿ 27, 28 ಮತ್ತು 29 ರ ಡಿಸೆಂಬರ್ 1961 ರಲ್ಲಿ ಜರುಗಿದ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಜಿ. ಕುಂದಣಗಾರ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಕೆ.ಎಚ್. ಪಾಟೀಲ ಆಶಯದಂತೆ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣವಾಗಲಿ ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಂತರ ಹೋರಾಟದ ಫಲವಾಗಿ 1973 ನ.1 ರಂದು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಯಿತು.ನಾಮಕರಣದ ಸಂಭ್ರಮಾಚರಣೆಯನ್ನು ಗದುಗಿನಲ್ಲಿ 1973 ರ ನ. 3 ರಂದು ಹಂಪೆಯ ವಿರುಪಾಕ್ಷೇಶ್ವರ ದೇವಾಲಯದಲ್ಲಿ ಪ್ರಜ್ವಲಿಸಿದ ಕನ್ನಡ ಜ್ಯೋತಿಯನ್ನು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಸ್ವೀಕರಿಸಿದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ, ಮೈಸೂರಿನ ಅರಸರಾದ ಜಯಚಾಮರಾಜೇಂದ್ರ ಒಡೆಯರ ಹಾಗೂ ಅರಣ್ಯ ಮತ್ತು ಕೃಷಿ ಸಚಿವ ಕೆ. ಎಚ್. ಪಾಟೀಲ, ಪೌರಾಡಳಿತ ಸಚಿವ ಡಿ.ಕೆ. ನಾಯ್ಕರ, ಕನ್ನಡ ಮತ್ತು ಸಂಸ್ಕೃತಿ ಸಚಿವ ದೇವೇಂದ್ರಪ್ಪ ಗಾಳಪ್ಪ ಹಾಗೂ ಕನ್ನಡಾಭಿಮಾನಿಗಳು ವೀರನಾರಾಯಣ ದೇವಸ್ಥಾನದಿಂದ ಕಾಟನ್ ಸೇಲ್ ಸೊಸೈಟಿಯವರೆಗೆ ಮೆರವಣಿಗೆ ಮೂಲಕ ಬಂದು ಸಾರ್ವಜನಿಕ ಸಭೆ ನಡೆಸಿ ಕರ್ನಾಟಕ ನಾಮಕರಣ ಮಹೋತ್ಸವ ಸಂಭ್ರಮಿಸಿದ್ದು ಇತಿಹಾಸದಲ್ಲಿ ದಾಖಲಾರ್ಹ ಎಂದು ತಿಳಿಸಿದರು.
1973 ನ.1, 2 ಮತ್ತು 3 ರಂದು ಜರುಗಿದ ಕರ್ನಾಟಕ ನಾಮಕರಣ ಮಹೋತ್ಸವವನ್ನು ಮರುಸೃಷ್ಟಿಸಿ, 2023ರ ನ.1, 2 ಮತ್ತು 3 ರಂದು ಮೂರು ದಿನಗಳ ಕಾಲ ಗದಗನಲ್ಲಿ ಗತವೈಭವ ಮರುಕಳಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೆಲ್ಲ ಸಾಕ್ಷಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಸಚಿವ ಸಂಪುಟದ 20 ಕ್ಕೂ ಹೆಚ್ಚು ಸಚಿವರು ಕನ್ನಡಾಭಿಮಾನಿಗಳು ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಮಕರಣ ಮಹೋತ್ಸವದ ಇತಿಹಾಸ ಮೆಲುಕು ಹಾಕಿದ್ದರು ಎಂದು ಸ್ಮರಿಸಿದ ಅವರು, (ಇಂದು) ಕರ್ನಾಟಕ ಸಂಭ್ರಮ- 50 ಒಂದು ವರ್ಷದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭವಾಗಿದ್ದು ಕನ್ನಡ ನಾಡು-ನುಡಿಯ ಅಭಿಮಾನ ಬೆಳೆಸಲು ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭ ಔಚಿತ್ಯಪೂರ್ಣವಾಗಿದೆ ಎಂದರು.ವಿಪ ಸದಸ್ಯ ಎಸ್.ವಿ.ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಓ ಭರತ್ ಎಸ್, ಎಸ್ಪಿ ಬಿ.ಎಸ್. ನೇಮಗೌಡ, ಡಿಎಫ್ ಓ ಲೇಖರಾಜ್ ಮೀನಾ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಶಾಲಾ ವಿಧ್ಯಾರ್ಥಿಗಳು ಹಾಜರಿದ್ದರು.