ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಗತ್ತಿನ ಪರಿಪೂರ್ಣ ಮತ್ತು ಅತ್ಯಂತ ಸುಂದರವಾದ ಭಾಷೆ ಎಂದರೆ ಅದು ಕನ್ನಡ ಮಾತ್ರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳ 135ನೇ ಜಯಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಂತ ಲಿಪಿಯನ್ನು ಹೊಂದಿರುವ, ಸ್ವಂತ ವ್ಯಾಕರಣ ಹೊಂದಿರುವ, ಸ್ವಂತ ಅಂಕಿ ಅಂಕಿಗಳನ್ನು ಹೊಂದಿರುವ ಭಾಷೆ ಎಂದರೆ ಅದು ಕನ್ನಡ ಭಾಷೆ. ಬರೆದಂತೆ ಉಚ್ಚಾರಣೆ ಮಾಡುವ ಭಾಷೆ ಇದಾಗಿದೆ. ಈ ಭಾಷೆಯಲ್ಲಿ ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗ ಎಂದು ಗುರುತಿಸಬಹುದಾಗಿದೆ ಎಂದರು.ಜಗತ್ತಿನ ಏಳು ಚಿರಂಜೀವಿಗಳಲ್ಲಿ ಇಬ್ಬರು ಕನ್ನಡದವರು. ಅದು ನಮಗೆ ಹೆಮ್ಮೆಯ ವಿಚಾರ. ಈ ಪೈಕಿ ಒಬ್ಬ ಹನುಮಂತ ಮತ್ತೊಬ್ಬ ಇದೇ ಜಿಲ್ಲೆಯ ಪರಶುರಾಮ. ಅವರು ನಮ್ಮ ಮಾತೃಭಾಷೆ ಕನ್ನಡ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಅನಿಸುತ್ತದೆ ಎಂದ ಅವರು, ಜಗತ್ತಿನ ಎಲ್ಲ ದೇಶಗಳಲ್ಲಿ ಕಂಪ್ಯೂಟರ್ ಜಗತ್ತನ್ನು ಕನ್ನಡಿಗರೇ ಅಳುತ್ತಿದ್ದಾರೆ. ಬಹುಸಂಖ್ಯಾತ ಕನ್ನಡಿಗರು ಇಂದು ತಾಂತ್ರಿಕ ಜಗತ್ತನ್ನೇ ಆಳುತ್ತಿದ್ದಾರೆ ಎಂದು ತಿಳಿಸಿದರು.
ಫಜಲ್ ಅಲಿ ಆಯೋಗದ ಮುಂದೆ ಬಲವಾದ ಸಾಕ್ಷಿಗಳನ್ನು ಮಂಡಿಸುವ ಮೂಲಕ ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿದ ಕೀರ್ತಿ ಲಿಂಗೈಕ್ಯ ಶಿವಬಸವ ಶ್ರೀಗಳಿಗೆ ಸಲ್ಲುತ್ತದೆ. ಕನ್ನಡಕ್ಕಾಗಿ ಶ್ರಮಿಸಿದ ಶ್ರೀಗಳು ಕಟ್ಟಿದ ಈ ಮಠ ಕನ್ನಡದ ಮಠ ಎಂದು ಹೆಸರಾಯಿತು ಎಂದು ಹೇಳಿದರು.ಅರಭಾವಿ- ಕಡೋಲಿಯ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಶ್ರೀ ಗುರುಬಸವಲಿಂಗ ಸ್ವಾಮೀಜಿಯವರಿಂದ ಷಟಸ್ಥಲ ಧ್ವಜಾರೋಹಣ ನೆರವೇರುವುದರೊಂದಿಗೆ ನಾಲ್ಕು ದಿನಗಳ ಮಹೋತ್ಸವ ಆರಂಭಗೊಂಡಿತು. ಕಟಕೋಳ ಚೌಕಿಮಠದ ನಾಗಭೂಷಣ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಪ್ರಭು ಸ್ವಾಮೀಜಿ ಸಮ್ಮುಖದಲ್ಲಿದ್ದರು. ಜಮಖಂಡಿ ಓಲೆಮಠದ ಉತ್ತರಾಧಿಕಾರಿ ಆನಂದ ದೇವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವ ವರ್ಷದಲ್ಲಿರುವ ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳಿಗೆ ಅಮೃತ ಗೌರವ ಅಭಿನಂದನೆ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೈಸೂರಿನ ಎಚ್.ಬಿ. ನಾಗೇಂದ್ರ ಪ್ರಸಾದ್ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಳಾಸಾಹೇಬ ಲೋಕಾಪುರ ಅವರನ್ನು ಸತ್ಕರಿಸಲಾಯಿತು. ಶ್ರೀಮಠದಿಂದ ಕೊಡ ಮಾಡಲಾಗುವ ಕನ್ನಡ ನುಡಿಶ್ರೀ ಪ್ರಶಸ್ತಿಯನ್ನು ಬೆಂಗಳೂರಿನ ಜನಶಕ್ತಿ ಸಂಘದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಬೆಳಗಾವಿಯ ಮಲ್ಲಪ್ಪ ಅಕ್ಷರದ ಮತ್ತು ಪತ್ರಕರ್ತ ಮಹೇಶ ವಿಜಾಪುರ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನಾಗನೂರಿನ ಜಾನಕಿದೇವಿ ಭದ್ರಣ್ಣವರ್ ವಿರಚಿತ ಜೋಳಿಗೆ ಧರಿಸಿದ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಲಾಯಿತು.ಎ.ಎಂ.ಪಾಟೀಲ್ ಸ್ವಾಗತಿಸಿದರು, ರಾಜಶೇಖರ್ ಪಾಟೀಲ್ ನಿರೂಪಿಸಿದರು. ಎ.ಕೆ.ಪಾಟೀಲ್ ವಂದಿಸಿದರು.