ಸಾರಾಂಶ
ಕನ್ನಡಪ್ರಭ ವಾರ್ತೆ ಅಜ್ಜಂಪುರ
ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಮತ್ತು ಅಜ್ಜಂಪುರ ತಾಲೂಕು ಘಟಕಗಳಿಂದ ಮುದಿಗೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಾನಪದ ಕವಿಗಳ ಬದುಕು ಬರಹ ವಿಚಾರ ಸಂಕಿರಣ ಮತ್ತು ಜಾನಪದ ಸಾಂಸ್ಕೃತಿಕ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮವನ್ನು ಸೊಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ, ಡಾ.ನಯನ ಉದ್ಘಾಟಿಸಿ ಮಾತನಾಡಿ, ಜಾನಪದ ಕವಿಗಳು ಕನ್ನಡ ಭಾಷೆ ನಾಡು ನುಡಿಯನ್ನು ಶ್ರೀಮಂತಗೊಳಿಸಿ ಜೀವ ತುಂಬಿದರು. ಭಾರತದ ಗ್ರಾಮೀಣ ಸಂಸ್ಕೃತಿ ಆಚಾರ ವಿಚಾರ, ಆಡಂಬರವಿಲ್ಲದ ಬದುಕು, ಧಾರ್ಮಿಕ ಸಹಿಷ್ಣತೆ, ವಿಚಾರಶೀಲ ಬದುಕು, ಸತ್ವಯುತ ಆಹಾರ ಪದ್ಧತಿ, ಅರ್ಥಪೂರ್ಣ ಸಹಕಾರ ಮನೋಭಾವನೆಗಳನ್ನು ಆಧುನಿಕ ಯುವ ಪೀಳಿಗೆಗೆ ಅರಿವು ಮೂಡಿಸಿದವರಲ್ಲಿ ಮೊದಲಿಗರು ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಜನಪದರು ಭಾರತದ ಗುಡ್ಡಗಾಡು, ನದಿ ಕಣಿವೆಗಳು, ಬುಡಕಟ್ಟು ಮತ್ತು ಮೂಲ ನಿವಾಸಿಗಳ ವಿಶೇಷ ಸಂಸ್ಕೃತಿ, ಉಡುಪು, ಧಾರ್ಮಿಕ ಸಂಪ್ರದಾಯ ಜಾನಪದ ಸಂಸ್ಕೃತಿ, ಕಲೆ ಮುಂತಾದವುಗಳನ್ನು ಸಮಾಜಕ್ಕೆ ಪರಿಚಯಿಸಿ ಅವರ ಬದುಕನ್ನು ಹಸನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದಿನ ಯುವಕರು, ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಸ್ಕೃತಿ, ಸಾಹಿತ್ಯಕ್ಕೆ ಮರುಳಾಗದೆ, ಜಾನಪದ ಮತ್ತು ಕನ್ನಡ ನಾಡಿನ ಕವಿಪುಂಗವರ ಗ್ರಂಥಗಳನ್ನು, ಓದಿ,ದೇಶ ಕುರಿತ ಹಿತ ಚಿಂತನೆಗಳನ್ನು ಸತ್ವಯುತ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.ಪ್ರಧಾನ ಭಾಷಣ ಮಾಡಿದ ಜಾನಪದ ಸಾಹಿತಿ ಡಾ. ಮಮತೇಶ್, ಗ್ರಾಮೀಣ ಸೊಗಡಾದ, ಜಾನಪದ ಕಲೆ, ಸಂಗೀತ, ಸಾಹಿತ್ಯ, ಆಹಾರ, ಉಡುಗೆ ತೊಡುಗೆ ಮುಂತಾದ ಮೌಲ್ಯಾಧಾರಿತ ಸಂಸ್ಕೃತಿಗಳನ್ನು ಜನಸಾಮಾನ್ಯರಿಗೆ ಪರಿಚಯಿಸಲು ಅವರ ಜನಪದರ ಕೊಡುಗೆ ಅಪಾರವೆಂದರು. ಜಾನಪದ ಕವಿಗಳಾದ ಡಾ. ಎಚ್ ಎಲ್ ನಾಗೇಗೌಡ ಹಾಗು ಮುಂತಾದ ಹೆಸರಾಂತ ನೂರಾರು ಕವಿಗಳು ಕನ್ನಡ ಭಾಷೆ ನಾಡು ನುಡಿಯನ್ನು ಶ್ರೀಮಂತಗೊಳಿಸಿ ಇತಿಹಾಸದ ಪುಟಕ್ಕೆ ಸೇರಿಸಿದ್ದಾರೆ. ಇವರ ಕೊಡುಗೆ ಸಂಗೀತ ಸಾರಸ್ವತ ಲೋಕಕ್ಕೆ ಸ್ಮರಣೀಯ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಜ್ಜಂಪುರ ತಾಲೂಕು ಕಜಾಪ ಅಧ್ಯಕ್ಷ ಡಾ. ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಜಾನಪದ ಕಲೆಗಳಾದ, ಡೊಳ್ಳು, ವೀರಗಾಸೆ, ಪಟ ಕುಣಿತ, ಜಾನಪದ ನೃತ್ಯ ಮುಂತಾದ ಕಲೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಚಯಿಸಬೇಕೆಂದು ವಿನಂತಿಸಿದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಗೊಂಡೆದಹಳ್ಳಿ ತಿಪ್ಪೇಶ್, ಚಿಕ್ಕನಲ್ಲೂರು ಜಯಣ್ಣ, ಸಾಹಿತಿ ಮುದಿಗೆರೆ ಲೋಹಿತ್, ಆಂಜನೇಯ ಭಜನಾ ಮಂಡಳಿ ಅಧ್ಯಕ್ಷ ಹನುಮಂತಪ್ಪ, ಗ್ರಾಪಂ ಸದಸ್ಯರಾದ ಶ್ರೀಮತಿ ರೇಣುಕಮ್ಮ, ನಾರಾಯಣಪುರ ರಾಜಣ್ಣ, ಗ್ರಾಮದ ಮುಖಂಡರಾದ, ತಿಪ್ಪೇಶ, ಕುಮಾರಪ್ಪ, ಸುನಿಲ್, ಮಂಜಪ್ಪ ಗೌಡ್ರು ಮುಂತಾದವರು ಉಪಸ್ಥಿತರಿದ್ದರು.