ಕನ್ನಡಪ್ರಭ ವಾರ್ತೆ ಕಾಗವಾಡ

ಕನ್ನಡವನ್ನು ನಾವು ಒಂದು ಭಾಷೆಯನ್ನಾಗಿ ನೋಡದೇ ವಿವಿಧ ಆಯಾಮಗಳಲ್ಲಿ ನೋಡಬೇಕಿದೆ. ಎಲ್ಲ ಸೀಮಿತಗಳನ್ನು ಮೀರಿಯೂ ನಾವು ವಿಶ್ವ ಪ್ರಜ್ಞೆಯನ್ನಾಗಿ ಕನ್ನಡವನ್ನು ಬೆಳೆಸಬೇಕಿದೆ ಎಂದು ಸಾಹಿತಿ ಡಾ.ಅರ್ಚನಾ ಅಥಣಿ ಅಭಿಪ್ರಾಯಪಟ್ಟರು.

ಇತ್ತಿಚಿಗೆ ಭೂತಾನ್ ದೇಶದ ರಾಜಧಾನಿ ಥಿಂಪುನ ಪೆಜೊಮ್ ಸಭಾಂಗಣದಲ್ಲಿ ಪ್ರತಿಷ್ಠಿತ ಇಂಟರ್‌ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಇಂಡಿಯಾ ಹಾಗೂ ಫ್ರೆಂಡ್ಸ್ ಶಿಫ್ ಕ್ಲಬ್ ಭೂತಾನ ಸಂಯುಕ್ತ ಆಶ್ರಯದಲ್ಲಿ ಜರುಗಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೇರು ದಿಗ್ಗಜರು ಸಾಹಿತ್ಯವನ್ನು ಕಟ್ಟಿ ಬೆಳೆಸಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಸಮುದ್ರವಿದ್ದಂತೆ. ಇಲ್ಲಿ ಸಾಹಿತ್ಯವೇ ಸಾಮ್ರಾಟ. ಸಾಹಿತ್ಯ ನಮಗೆ ಅರಿವಿಲ್ಲದೆ ಸಂತೋಷ ನೀಡುತ್ತದೆ. ಒಬ್ಬ ಸಾಹಿತಿಗೆ ಸಾವಿರಾರು ಜನರನ್ನು ಬಡಿದೆಬ್ಬಿಸುವ ಶಕ್ತಿಯಿದೆ. ಜೊತೆಗೆ ಜನರನ್ನು ಶಾಂತಗೊಳಿಸುವ ಶಕ್ತಿಯೂ ಇದೆ. ಅಂತಹ ಸಮೃದ್ಧತೆ ಹೊಂದಿದ ನೆಲದಲ್ಲಿ ಜನಿಸಿದ ನಾವೇ ಪುಣ್ಯವಂತರು ಎಂದರು.ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ, ಇಂದೂ ಅಚ್ಚಳಿಯದೇ ಉಳಿದಿದೆ. ಸಾಹಿತ್ಯ ಜೀವನ ಕಲಿಸಿ ಕೊಟ್ಟಿದೆ. ಅಂಥ ಶಕ್ತಿ ಕನ್ನಡ ಭಾಷೆಗಿದೆ. ನಡೆ, ನುಡಿಯನ್ನು ಕಲಿಸಿ ಕೊಡುವುದೇ ಕನ್ನಡ ಸಾಹಿತ್ಯ. ಇಂದು ಜಗತ್ತಿನಾದ್ಯಂತ ಮಾನವ ಗುಣವನ್ನು ಕಲಿಸಿ ಕೊಡುತ್ತಿದೆ. ಅಂತಹ ಸಾಹಿತ್ಯವನ್ನು ಭಾರತ ದೇಶದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಕನ್ನಡ ಕಂಪನ್ನು ಬೀಸುತ್ತಿದೆ. ಆ ಶಕ್ತಿ ಕನ್ನಡ ಬಾಷೆಗಿದೆ ಎಂದರು.ಭೂತಾನ್ ಲೋಕಸಭಾ ಸದಸ್ಯ ಎಚ್.ಇ.ದಶೋ ಉಗೇನ್ ಲಾಮಾ ಮಾತನನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾರತ, ಭೂತಾನ್ ದೇಶಗಳ ನಡುವಿನ ಬಾಂಧವ್ಯವನ್ನು ಬೆಸೆಯುವ ಕಾರ್ಯ ಸಹಕಾರಿಯಾಗುತ್ತಿವೆ. ಈ ಕಾರ್ಯಕ್ರಮ ಅತ್ಯಂತ ಖುಷಿ ತಂದಿದೆ. ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಸುವಂತೆ ಸಂಘಟಕರಿಗೆ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಭೂತಾನಿನ ಸಂಸತ್ ಸದಸ್ಯ ಎಚ್.ಇ.ದಶೋ ಉಗೇನ್ ಲಾಮಾ ಸೇರಿದಂತೆ ಅನೇಕರು ಪಾಲ್ಗೊಂಡು ಡಾ.ಅರ್ಚನಾ ಅಥಣಿಯವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಈ ನಾಡಿನಲ್ಲಿ ಹಲವು ರಾಜಮನೆತನಗಳು ಆಳ್ವಿಕೆ ಮಾಡಿ ಭಾಷೆ ಶ್ರೀಮಂತಗೊಳಿಸಲು ಶ್ರಮಿಸಿವೆ. ಅಂತೆಯೇ ಈ ಭಾಷೆ ಭಾರತ ದೇಶದಲ್ಲಿ ಅಷ್ಟೇ ಅಲ್ಲಿ ಸಪ್ತ ಸಾಗರದಾಚೆಯೂ ಕನ್ನಡ ಭಾಷೆ ತನ್ನ ಕಂಪನ್ನು ಬೀರುತ್ತಿದೆ.

-ಡಾ.ಅರ್ಚನಾ ಅಥಣಿ, ಸಾಹಿತಿ..