ಸಾರಾಂಶ
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಬದನೆಹಾಳು ಗ್ರಾಮದ ವಿದ್ಯಾರ್ಥಿನಿ ರಜಿಯಾ ಬೇಗಂ ಶಿಕ್ಷಣ ಮುಂದುವರಿಸಲು ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಜಿಯಾ ಬೇಗಂ ಮನವಿಯ ವೀಡಿಯೋ ವೈರಲ್
ಕನ್ನಡಪ್ರಭ ವಾರ್ತೆ ಬಳ್ಳಾರಿಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಬದನೆಹಾಳು ಗ್ರಾಮದ ವಿದ್ಯಾರ್ಥಿನಿ ರಜಿಯಾ ಬೇಗಂ ಶಿಕ್ಷಣ ಮುಂದುವರಿಸಲು ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬದನೆಹಾಳುವಿನಲ್ಲಿ ಪೂರ್ಣಗೊಳಿಸಿರುವ ರಜಿಯಾ ಬೇಗಂ, ಪದವಿಪೂರ್ವ ಶಿಕ್ಷಣವನ್ನು ಚಿತ್ರದುರ್ಗದ ವಿಶ್ವಮಾನವ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದು, ಪದವಿ ಶಿಕ್ಷಣಕ್ಕಾಗಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ದಾಖಲಾಗಿದ್ದಾರೆ. ಆದರೆ, ತಾಂತ್ರಿಕ ಕಾರಣಗಳಿಂದ ಹಾಸ್ಟೆಲ್ ಸೌಲಭ್ಯ ಸಿಕ್ಕಿಲ್ಲ. ಇದರಿಂದ ಪದವಿ ಶಿಕ್ಷಣ ಮುಂದುವರಿಸಲು ಕಷ್ಟವಾಗುತ್ತಿದೆ. ತಂದೆ-ತಾಯಿ ಅಲೆಮಾರಿಗಳಾಗಿದ್ದು ದುಡಿಯಲು ಬೆಂಗಳೂರಿಗೆ ತೆರಳಿದ್ದಾರೆ. ಉನ್ನತ ಶಿಕ್ಷಣ ಪಡೆಯಬೇಕು ಎಂಬ ಹಂಬಲವಿದ್ದು ವಸತಿಯ ಸಮಸ್ಯೆಯಾಗಿದೆ. ಮುಖ್ಯಮಂತ್ರಿಗಳು ಹಾಸ್ಟೆಲ್ ಸೌಕರ್ಯ ಕಲ್ಪಿಸಬೇಕು ಎಂದು ವೀಡಿಯೋ ಮಾಡುವ ಮೂಲಕ ವಿನಂತಿಸಿದ್ದಾರೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮುಂದುವರಿಸಬೇಕು ಎಂಬ ಹಂಬಲದ ವಿದ್ಯಾರ್ಥಿನಿಗೆ ಸಿಎಂ ಸಿದ್ಧರಾಮಯ್ಯ ನೆರವಿಗೆ ಬರಲಿ ಎಂದು ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ.ಕರ್ನಾಟಕಾಂಧ್ರ ಗಡಿಯಲ್ಲಿರುವ ಬದನೆಹಾಳು ಗ್ರಾಮ ಭೌಗೋಳಿಕವಾಗಿ ಆಂಧ್ರಪ್ರದೇಶದಲ್ಲಿದ್ದರೂ ಈ ಊರಿನಲ್ಲಿ ನೆಲೆಸಿರುವವರು ಸಂಪೂರ್ಣ ಕನ್ನಡಿಗರೇ ಆಗಿರುವುದು ವಿಶೇಷವಾಗಿದೆ. ಆಂಧ್ರದಲ್ಲಿದ್ದು ಕನ್ನಡದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತಿತರ ಶೈಕ್ಷಣಿಕ ಸವಲತ್ತುಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.