ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಹಸ್ರಾರು ವರ್ಷಗಳಿಂದ ಜನರ ಸಂವಹನ ಭಾಷೆಯಾಗಿರುವ ಕನ್ನಡ ಮನಮನಗಳ ಬೆಸೆಯುವ ಕಸ್ತೂರಿ ಭಾಷೆಯಾಗಿದ್ದು, ಇದನ್ನು ಉಳಿಸುವ ಮೂಲಕ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು, ಕನ್ನಡ ಪರಂಪರೆ ಮತ್ತು ಸ್ವಾಭಿಮಾನವನ್ನು ಸಂರಕ್ಷಿಸಿಕೊಂಡು ಮುಂದಿನ ತಲೆಮಾರಿಗೆ ಕಾಪಿಟ್ಟು ಶ್ರೀಮಂತ ಭಾಷೆಯನ್ನು ಹಸ್ತಾಂತರಗೊಳಿಸುವ ಗುರುತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಸೊಲ್ಲಾಪುರ ಹೇಳಿದರು.ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ರಬಕವಿ-ಬನಹಟ್ಟಿಗೆ ಮಂಗಳವಾರ ಹಜಾರೆ ಟೆಕ್ಸಟೈಲ್ಸ್ ಬಳಿಯಲ್ಲಿ ಆಗಮಿಸಿದ ಕನ್ನಡ ಜ್ಯೋತಿ ಹೊತ್ತ ರಥವನ್ನು ತಹಸೀಲ್ದಾರ್ ಗಿರೀಶ ಸ್ವಾದಿ ಪೂಜೆ ಸಲ್ಲಿಸಿ ಸ್ವಾಗತಿಸಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಆಡಳಿತದಲ್ಲೂ ಕನ್ನಡ ಭಾಷೆಯೇ ಅಗ್ರಸ್ಥಾನದಲ್ಲಿದೆ. ಭಾಷೆಯ ಉಳಿಕೆಗೆ ಮತ್ತು ಬೆಳವಣಿಗೆಗೆ ಸರ್ಕಾರಿ ಸೇರಿದಂತೆ ಪ್ರತಿ ನೇಮಕಾತಿಯಲ್ಲೂ ಕನ್ನಡ ಭಾಷೆ ಅಭ್ಯಸಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡುವಂತಾದರೆ ಪರಭಾಷಾ ವ್ಯಾಮೋಹಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಕನ್ನಡ ಭಾಷೆ ಬಲ್ಲವರಿಗೆ ಮಾತ್ರ ಕರ್ನಾಟಕ ಸರ್ಕಾರ ನೇಮಕಾತಿಯಲ್ಲಿ ಪ್ರಾಧಾನ್ಯತೆ ನೀಡುತ್ತಿರುವುದರಿಂದ ಆಂಗ್ಲ ಮಾಧ್ಯಮ ವ್ಯಾಮೋಹ ಕುಸಿತವಾಗಿದ್ದು, ಕನ್ನಡವನ್ನು ಒಂದು ಭಾಷೆಯನ್ನಾಗಿ ಅಭ್ಯಸಿಸುವ ಪದ್ಧತಿ ರೂಪಿತಗೊಂಡಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿ, ಕನ್ನಡ ಈ ನೆಲದ ಆಸ್ಮಿತೆಯಾಗಿದ್ದು, ಭಾವನೆಗಳ ಅಭಿವ್ಯಕ್ತಿ ಸೇರಿದಂತೆ ನವರಸಗಳಿಂದಾವೃತ ಮೇರು ಕೃತಿಗಳು ಈ ನೆಲದ ಕಬ್ಬಿಗರ ಕಾಣಿಕೆಯಾಗಿವೆ. ಭಾಷೆ ಆಯಾ ಪ್ರದೇಶಗಳ ಜನರ ಒತ್ತಾಸೆ ಮತ್ತು ಅಭಿಮಾನದಿಂದ ಅಮರತ್ವ ಹೊಂದುತ್ತದೆಂದರು. ಈ ಸಂದರ್ಭದಲ್ಲಿ ಮಕ್ಕಳು ನಾಡಿನ ವೀರ ಪುರುಷರ, ವನಿತೆಯರ ವೇಷ-ಭೂಷಣಗಳನ್ನು ತೊಟ್ಟು ಪ್ರಹಸನ ನೀಡಿದರು.ಉಪತಹಸೀಲ್ದಾರ್ ಎಸ್.ಎಲ್. ಕಾಗಿಯವರ, ಪ್ರಕಾಶ ಮಠಪತಿ, ಪೌರಾಯುಕ್ತ ಜಗದೀಶ ಈಟಿ, ಸುರೇಶ ಬಾಗೇವಾಡಿ, ಮುತ್ತಣ್ಣಾ ಚೌಡಕಿ, ಸತೀಶ ಅಕ್ಕಿವಾಟ, ಸಂಗೀತಾ ಕೋಳಿ, ಭೀಮು ಬಾಡಗಿ, ಸದಾಶಿವ ಕುಂಬಾರ, ಅರುಣ ಬುದ್ನಿ, ಅಮಿತ ನಾಶಿ, ಮುರಗೇಶ ಮುತ್ತೂರ, ಪ್ರವೀಣ ಹಜಾರೆ, ಮುಖೇಶ ಬನಹಟ್ಟಿ, ಮೃತ್ಯುಂಜಯ ರಾಮದುರ್ಗ, ಬಿ.ಎಂ. ಹಳೇಮನಿ, ಅನೀಲ ಕಡ್ಲಿ, ರೇವಣಸಿದ್ದಪ್ಪ ಗೌಡರ, ಚಿದಾನಂದ ಹೊರಟ್ಟಿ, ಚೇತನ ಭಜಂತ್ರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.