ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಂದೇ ಮಾತರಂಗೆ 150 ವರ್ಷ ತುಂಬಿದ ಹಿನ್ನಲೆಯಲ್ಲಿ ನಗರದ ಅನವರತ ಫೌಂಡೇಷನ್ ಮತ್ತು ಸಂಸ್ಕಾರ ಭಾರತಿ ಸಹಯೋಗದೊಂದಿಗೆ ಏ.18 ರಂದು ಬೆಳಗ್ಗೆ 9 ರಿಂದ ರಾತ್ರಿ 8 ರವರೆಗೆ ‘ನಾನೇ ಭಾರತ’-ತಾಯಿ ಭಾರತಿಗೆ ಕನ್ನಡದಾರತಿ ಎಂಬ ಐತಿಹಾಸಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅನವರತ ಫೌಂಡೇಷನ್ ಅಧ್ಯಕ್ಷ, ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ದೇಶದ ಇತಿಹಾಸದ ಸತ್ಯ ಸಂಗತಿಗಳನ್ನು ಸಾರ್ವಜನಿಕರಿಗೆ ತಿಳಿಸುವುದು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುವ ಸಂಗತಿಗಳ ಬಗ್ಗೆ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಮೂರು ಹಂತಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ಕರ್ನಲ್ ಡಾ.ಎ.ಎಸ್. ರಘುನಾಥ್, ಅವರಿಂದ ರಾಷ್ಟ್ರಧ್ವಜಾರೋಹಣ ನಡೆಯಲಿದ್ದು, ಶಿವಮೊಗ್ಗದ ಸಂಗೀತ ಶಾಲೆಗಳ 150 ಪ್ರತಿಭೆಗಳಿಂದ ವಂದೇ ಮಾತರಂ ಸಮೂಹ ಗಾಯನ ನಡೆಯಲಿದೆ. ಬಳಿಕ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವಾಸುದೇವ್ ಬಲವಂತ್ ಫಡ್ಕೆ ಅವರ ‘ಅದಮ್ಯ ಭಾರತ’ ಕುರಿತು ವಿಶೇಷ ಪ್ರದರ್ಶನ ನಡೆಯಲಿದೆ. ಇದರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹಾಗೂ ಭಾರತದ ಪರಂಪರೆ, ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ತಿಳಿಸಿದರು.

ಮೂರನೇ ಹಂತದಲ್ಲಿ ಸಂಜೆ 5.30ಕ್ಕೆ ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಸಂಗೀತ ದಿಗ್ಗಜಗಳಾದ ಪ್ರಹ್ಲಾದ್ ದೀಕ್ಷಿತ್, ವಿದ್ವಾನ್ ಎಚ್.ಎಸ್. ನಾಗರಾಜ್, ಗಾಯಕ ಅರುಣ್ ಅವರಿಂದ ದೇಶಭಕ್ತಿ ಗೀತಗಾಯನ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವ ರಸಪ್ರಶ್ನೆ ಕಾರ್ಯಕ್ರಮವು ಏರ್ಪಾಟಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ್, ಜ್ಞಾನೇಶ್ವರ, ಮೋಹನ, ಸಂಸ್ಕಾರ ಭಾರತೀಯ ಸವಿತಾ ಮಾಧವ್, ರಂಜನಿ ಬಿದರಳ್ಳಿ, ಚೈತ್ರಾ ಸಜ್ಜನ್, ವಸುಂಧರಾ, ಮಂಜುನಾಥ್, ಸಹನಾ ಚೇತನಾ ಮೊದಲಾದವರು ಇದ್ದರು.