ಕಪ್ಪಗಲ್ ರಸ್ತೆ ಆರ್ಯನ್ ಅಪಾರ್ಟ್‌ಮೆಂಟ್ ಕಳ್ಳತನ ಪ್ರಕರಣ: ಆರೋಪಿ ಬಂಧನ

| Published : Jul 16 2024, 12:34 AM IST

ಕಪ್ಪಗಲ್ ರಸ್ತೆ ಆರ್ಯನ್ ಅಪಾರ್ಟ್‌ಮೆಂಟ್ ಕಳ್ಳತನ ಪ್ರಕರಣ: ಆರೋಪಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಕಪ್ಪಗಲ್ ರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಬಳಿಯ ಆರ್ಯನ್ ಅಪಾರ್ಟ್‌ಮೆಂಟ್‌ನ ಮನೆಸಂಖ್ಯೆ 203ರಲ್ಲಿ 2023ರ ಮಾ. 8ರಂದು ಕಳ್ಳತನವಾಗಿತ್ತು. ಕಳ್ಳತನ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ಕಪ್ಪಗಲ್ ರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಬಳಿಯ ಸಾಯಿ ಆರ್ಯನ್ ಅಪಾರ್ಟ್‌ಮೆಂಟ್ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ತಾಳೂರು ರಸ್ತೆ ರೇಣುಕಾನಗರದ 8ನೇ ಕ್ರಾಸ್‌ನ ಕಾರ್ತೀಕ್ ಅಲಿಯಾಸ್ ಕುರುಬರ ಕಾರ್ತೀಕ್ (31) ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ ₹8,26,500 ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ ತಿಳಿಸಿದರು.

ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರ ಕಾರ್ಯಾಚರಣೆ ಹಾಗೂ ಆರೋಪಿಗಳ ಬಂಧನ ಕುರಿತು ಎಸ್ಪಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು,

ಕಪ್ಪಗಲ್ ರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಬಳಿಯ ಆರ್ಯನ್ ಅಪಾರ್ಟ್‌ಮೆಂಟ್‌ನ ಮನೆಸಂಖ್ಯೆ 203ರಲ್ಲಿ 2023ರ ಮಾ. 8ರಂದು ಕಳ್ಳತನವಾಗಿತ್ತು. ಮನೆಯ ಬೀಗ ಮುರಿದು ಬೀರುದಲ್ಲಿದ್ದ ₹245 ಗ್ರಾಂ. ಬಂಗಾರದ ಆಭರಣಗಳು, 25 ಗ್ರಾಂನ ಒಂದು ಬೆಳ್ಳಿ ಲೋಟ ಹಾಗೂ ₹1.50 ಲಕ್ಷ ನಗದು ದೋಚಿ ಆರೋಪಿ ಪರಾರಿಯಾಗಿದ್ದ. ಈ ಕುರಿತು ಮನೆಯ ಮಾಲೀಕ ಧನಂಜಯರೆಡ್ಡಿ ಅವರು ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಲಾಗಿತ್ತು. ಗಾಂಧಿನಗರ ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ಧರಾಮೇಶ್ವರ ಗಡಾದ ಹಾಗೂ ತಂಡ ಆರೋಪಿಯನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದೆ. ಒಂದು ವರ್ಷ ನಾಲ್ಕು ತಿಂಗಳ ಬಳಿಕ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಅಲ್ಲಿಯೇ ನೆಲೆಸಿದ್ದ ಕಾರ್ತೀಕ್‌ನನ್ನು ಬಂಧಿಸಿ ಕರೆತರಲಾಗಿದೆ. ₹8.26 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತ ಆರೋಪಿ ಈ ಹಿಂದೆ ಕೌಲ್‌ಬಜಾರ್ ಠಾಣೆಯಲ್ಲಿ 5, ಗಾಂಧಿನಗರ ಠಾಣೆಯಲ್ಲಿ 14 ಹಾಗೂ ಸಿರುಗುಪ್ಪ ಠಾಣೆ ವ್ಯಾಪ್ತಿಯಲ್ಲಿ ಒಂದು ಮನೆಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದು ಗೊತ್ತಾಗಿದೆ. ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಆಂಧ್ರಪ್ರದೇಶದ ಕಲ್ಯಾಣದುರ್ಗಂ ನಿವಾಸಿ ವಡ್ಡೆ ಪಿಟೀಲ ಗಂಗಾಧರ ಎಂಬಾತನನ್ನು ಬಂಧಿಸಿರುವ ಬ್ರೂಸ್‌ಪೇಟೆ ಠಾಣೆ ಪೊಲೀಸರು, 2023ರ ಅಕ್ಟೋಬರ್‌ 24ರಂದು ಜರುಗಿದ ನಗರದ ವಡ್ಡರಬಂಡೆ ಪ್ರದೇಶದ ಮನೆಯೊಂದರ ಕಳ್ಳತನ ಹಾಗೂ 2023ರ ನವೆಂಬರ್ 15ರಂದು ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಬೇಧಿಸಿ, ಆರೋಪಿತನಿಂದ ₹4.30 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹10 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ನಗರದ ಹೊಸ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವಡ್ಡೆ ಪಿಟೀಲ ಗಂಗಾಧರನನ್ನು ಬ್ರೂಸ್‌ಪೇಟೆ ಇನ್‌ಸ್ಪೆಕ್ಟರ್ ಎಂ.ಎನ್. ಸಿಂಧೂರಿ ಹಾಗೂ ಶೆಹನಾಜ್ ಸುಲ್ತಾನ ಅವರು ವಿಚಾರಣೆಗೆ ಒಳಪಡಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ಪಿ ಡಾ. ಶೋಭಾರಾಣಿ ತಿಳಿಸಿದರು.

ಕುಡಿತಿನಿ ಠಾಣೆ ವ್ಯಾಪ್ತಿಯ ಜಿಂದಾಲ್ ಕಾರ್ಖಾನೆಯಲ್ಲಿ ಜೂ. 5ರಂದು ನಡೆದ ರಾಮ್‌ಶಂಕರ್ ವಿಶ್ವಕರ್ಮ ಅವರ ಕೊಲೆ ಪ್ರಕರಣದಲ್ಲಿ ಮಧ್ಯಪ್ರದೇಶದ ಸುರೇಂದ್ರ ಹಾಗೂ ಕಿಶೋರಿ ಲಾಲ್ ಕುಸುವಾ ಎಂಬುವರನ್ನು ಬಂಧಿಸಲಾಗಿದೆ. ಈ ಮೂವರು ಮಧ್ಯಪ್ರದೇಶದವರು. ಹಣಕಾಸಿನ ವಿಚಾರದಲ್ಲಿ ಕೊಲೆ ನಡೆದಿತ್ತು. ಶವವನ್ನು ಸೇಫ್ಟಿ ಟ್ಯಾಂಕ್‌ನಲ್ಲಿ ಎಸೆಯಲಾಗಿತ್ತು. ಡಿವೈಎಸ್ಪಿ ಪ್ರಸಾದ್ ಗೋಖಲೆ ಅವರ ನೇತೃತ್ವದ ತಂಡ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದೆ ಎಂದು ತಿಳಿಸಿದರು. ಹೆಚ್ಚುವರಿ ಎಸ್ಪಿ ರವಿಕುಮಾರ್ ಹಾಗೂ ನಟರಾಜ್ ಸುದ್ದಿಗೋಷ್ಠಿಯಲ್ಲಿದ್ದರು.