ಅಧಿಕಾರಿಗ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ

ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ನೆಸ್ಲೆ ಕಾರ್ಖಾನೆ ನೌಕರನೋರ್ವ ತನ್ನ ಸಾವಿಗೆ ಸಿಬ್ಬಂದಿ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಲೂಕಿನ ಕಪ್ಪಸೋಗೆ ಗ್ರಾಮದ ನಿವಾಸಿ ಕುಮಾರಸ್ವಾಮಿ (44) ಆತ್ಮಹತ್ಯೆ ಮಾಡಿಕೊಂಡವರು. ಈತ ನೆಸ್ಲೆ ಕಾರ್ಖಾನೆಯಲ್ಲಿ ಸುಮಾರು 23 ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು, ಬುಧವಾರ ಮನೆಯಿಂದ ಎಂದಿನಂತೆ ಕೆಲಸಕ್ಕೆ ತೆರಳಿದ್ದ ಕುಮಾರಸ್ವಾಮಿ ಮಧ್ಯಾಹ್ನ 3ರ ಸಮಯದಲ್ಲಿ ಕಾರ್ಖಾನೆಯ ಒಳಾವರಣದಲ್ಲಿರುವ ಲ್ಯಾಬ್‌ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ವಲ್ಪ ಸಮಯದ ನಂತರ ಸಹೋದ್ಯೋಗಿಗಳು ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ, ಬಳಿಕ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.ಆ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ದೇಹವನ್ನು ವಶಕ್ಕೆ ಪಡೆದಿದ್ದು, ಈ ವೇಳೆ ಡೆತ್ ನೋಟ್ ಲಭ್ಯವಾಗಿದೆ.ಇನ್ನು ಮೃತ ವ್ಯಕ್ತಿ ಕುಮಾರಸ್ವಾಮಿ ಡೆತ್‌ ನೋಟ್‌ ನಲ್ಲಿ ತನ್ನ ಸಾವಿಗೆ ಸಂಸ್ಥೆಯ ಅಧಿಕಾರಿಗಳಾದ ವಿದ್ಯಾಶ್ರೀ, ರಾಘವೇಂದ್ರ ಹಾಗೂ ದಿನೇಶ್ ನೀಡುತ್ತಿದ್ದ ಕಿರುಕುಳವೇ ಕಾರಣ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.ಇನ್ನು ಸ್ಥಳಕ್ಕಾಗಮಿಸಿದ ಮೃತನ ಕುಟುಂಬದವರು ಪತಿಯ ಸಾವಿಗೆ ಕಾರಣವಾಗಿರುವ ಮೂವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಸೂಕ್ತ ಪರಿಹಾರವನ್ನು ನೀಡಬೇಕು, ಮೃತರ ಪುತ್ರನಿಗೆ ಕಾರ್ಖಾನೆಯಲ್ಲಿ ಕಾಯಂ ಉದ್ಯೋಗ ನೀಡಬೇಕು, ಅಲ್ಲಿವರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.ಮೃತ ಕುಮಾರಸ್ವಾಮಿಗೆ ಒರ್ವ ಪುತ್ರ, ಪುತ್ರಿ ಇದ್ದಾರೆ. ಕಾರ್ಮಿಕ ಅಧಿಕಾರಿ ಅಂಬಿಕಾ ಹಾಗೂ ನಂಜನಗೂಡು ಪಟ್ಟಣ ಠಾಣೆ ಸಿಪಿಐ ರವೀಂದ್ರ ಸ್ಥಳದಲ್ಲಿ ಇದ್ದರು.