ಸಾರಾಂಶ
ಬೆಂಗಳೂರು : ಡಾ। ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿರುವ ಮಾಲೀಕರು ಹಾಗೂ ಅರ್ಹ ರೆವಿನ್ಯೂ ನಿವೇಶನದಾರರಿಂದ ಪರಿಹಾರಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತೊಮ್ಮೆ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಹರು ನಿಗದಿತ ನಮೂನೆಯಲ್ಲಿ ಸೆ.6ರೊಳಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಬಿಡಿಎ ಕೇಂದ್ರ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಡಾ। ಕೆ.ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನಪಡಿಸಿಕೊಳ್ಳಲು ಹೊರಡಿಸಿರುವ ಅಂತಿಮ ಅಧಿಸೂಚನೆ ಅನ್ವಯ ಅರ್ಜಿಗಳನ್ನು ಕರೆಯಲಾಗಿದೆ.
ಕಾರಂತ ಬಡಾವಣೆಯ ಅಧಿಸೂಚಿತ ಜಮೀನಿನಲ್ಲಿ 2018 ಅಕ್ಟೋಬರ್ 30ರ ಮೊದಲು ಕಂದಾಯ ನಿವೇಶನಗಳನ್ನು ಖರೀದಿಸಿದವರು ಪರ್ಯಾಯ ನಿವೇಶನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ವಿಭಜಿತ ಭೂಮಿಯ ವಿಸ್ತೀರ್ಣವನ್ನು ಲೆಕ್ಕಿಸದೆ, ಎಲ್ಲಾ ಕಂದಾಯ ನಿವೇಶನ ಹೊಂದಿರುವವರು ಗರಿಷ್ಠ 30/40 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನಕ್ಕೆ ಅರ್ಹರಾಗಿರುತ್ತಾರೆ ಎಂದು ಬಿಡಿಎ ಮೂಲಗಳು ತಿಳಿಸಿದೆ.
ಬಿಡಿಎ ಕಂದಾಯ ನಿವೇಶನ ಹೊಂದಿರುವವರಿಂದ ಪರ್ಯಾಯ ನಿವೇಶನಗಳಿಗೆ 2021 ಜುಲೈ 14ರಿಂದ ಡಿಸೆಂಬರ್ 21ರವರೆಗೆ ಮತ್ತು 2022 ಜನವರಿಗೆ 11ರಿಂದ ಫೆಬ್ರವರಿ 28ರವರೆಗೆ ಹಾಗೂ 2022 ನವೆಂಬರ್ 2ರಿಂದ ಡಿಸೆಂಬರ್ 14ರವರೆಗೆ ಮತ್ತು 2022 ಡಿಸೆಂಬರ್ 6ರಿಂದ 2023 ಫೆಬ್ರವರಿ 28ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.
ಆದರೆ, ಕೆಲವರು ವಿವಿಧ ಕಾರಣಗಳಿಂದ ನಿಗದಿತ ಅವಧಿಯಲ್ಲಿ ಪರ್ಯಾಯ ನಿವೇಶನಗಳಿಗೆ ಅರ್ಜಿ ಸಲ್ಲಿಸಿರಲಿಲ್ಲ. ಅವಧಿ ಮುಗಿದ ನಂತರ ಅರ್ಜಿ ಸಲ್ಲಿಸಲು ಬಂದವರಿಂದ ಅರ್ಜಿಗಳನ್ನು ಪಡೆಯಲು ಬಿಡಿಎ ನಿರಾಕರಿಸಿತ್ತು. ಹಾಗಾಗಿ ನಿವೇಶನ ವಂಚಿತರು ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಂದಾಯ ನಿವೇಶನದಾರರಿಗೆ ಪರ್ಯಾಯ ನಿವೇಶನಗಳಿಗೆ (ಪರಿಹಾರ) ಅರ್ಜಿ ಸಲ್ಲಿಸಲು ಬಿಡಿಎ ಮತ್ತೊಂದು ಅವಕಾಶ ನೀಡಿದೆ. ಈ ಹಿಂದೆ ಅರ್ಜಿ ಹಾಕಿದವರು ಈಗ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಬಿಡಿಎ ತಿಳಿಸಿದೆ.