ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇತ್ತೀಚಿಗೆ ತನ್ನ ಥಗ್ ಲೈಫ್ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಸಂದರ್ಭದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅವಮಾನವಾಗುವಂತೆ ಮಾತನಾಡಿದ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು.ಈ ಸಂದರ್ಭ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷ ಅನ್ಸಾರ್ ಅಹಮ್ಮದ್, ಈ ಹಿಂದೆ ಬಾಹುಬಲಿ ಚಿತ್ರದಲ್ಲಿ ನಟಿಸಿರುವ ಸತ್ಯರಾಜ್, ಕನ್ನಡ ವಿರೋಧಿ ಹೇಳಿಕೆಯನ್ನು ನೀಡಿದ್ದರಿಂದ ಬಾಹುಬಲಿ ಚಿತ್ರವನ್ನು ಪ್ರದರ್ಶಿಸಲು ವಿರೋಧಿಸಿದ್ದನ್ನು ನೆನಪಿಸಿಕೊಂಡರು. ನಂತರ ಚಲನಚಿತ್ರ ಆರಂಭವಾಗುವ ದಿನ ಸಿನಿಮಾ ಥಿಯೇಟರ್ಗೆ ಮುತ್ತಿಗೆ ಹಾಕಿದ ವಿಚಾರವನ್ನು ಪ್ರಸ್ತಾವಿಸಿ ಒಂದು ವೇಳೆ ಕಮಲಹಾಸನ್ ಕನ್ನಡಿಗರ ಕ್ಷಮೆಯಾಚನೆ ಮಾಡದೆ ಇದ್ದಲ್ಲಿ ಅವರ ಥಗ್ ಲೈಫ್ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಉಗ್ರವಾದ ಹೋರಾಟವನ್ನು ಎದುರಿಸಬೇಕಾದಿತು ಎಂಬ ಎಚ್ಚರಿಕೆಯನ್ನು ನೀಡಿದರು.ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಉಪಾಧ್ಯಕ್ಷ ಅಲ್ಫೋನ್ಸ್, ಎಂ.ಎಸ್.ಸೈಯ್ಯದ್ ನಿಝಾಮುದ್ದೀನ್, ಮಹಿಳಾ ಜಿಲ್ಲಾಧ್ಯಕ್ಷ ಜ್ಯೋತಿ ಶೇರಿಗಾರ್, ಕಾಪು ತಾಲೂಕು ಅಧ್ಯಕ್ಷ ಚೇತನ್ ಪಡುಬಿದ್ರಿ, ಪದಾಧಿಕಾರಿಗಳಾದ ದೇವಕಿ ಬಾರ್ಕೂರು, ಖಾದರ್ ಮಂಚಕಲ್ಲು, ಶಾಹಿಲ್ ರಹಮತುಲ್ಲಾ, ನಾಗರಾಜ್, ವಿಜಯ ಪೂಜಾರಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.