ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಾಡಿನ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಖಾಸಗಿ ಮತ್ತು ಸರ್ಕಾರಿ ಹಾಗೂ ಎಲ್ಲಾ ಅನುದಾನಿತ ಶಾಲೆಗಳಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಬೇಕು. ಇದರಿಂದ ನಾಡಿನ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡರ ಬಣ) ರಾಜ್ಯ ವಕ್ತಾರ ಬಿ.ಎಂ. ಪಾಟೀಲ ಹಾಗೂ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.ಕರವೇ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಪ್ರತಿಭಟನೆ ಮಾಡುವ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಬಿ.ಎಂ. ಪಾಟೀಲ ಅವರು, ಜಾಗತಿಕವಾಗಿ ವಿದ್ಯೆ,ಉದ್ಯೋಗ ಪಡೆಯಲು ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ. ಜೊತೆಗೆ ಕೌಶಲ್ಯ ಮತ್ತು ಇತರ ವೃತ್ತಿಪರ ತರಬೇತಿಗಳನ್ನು ಪಡೆಯಲು ಆಂಗ್ಲಭಾಷೆ ಬೇಕೇ ಬೇಕಾಗುತ್ತದೆ. ಆಂಗ್ಲ ಭಾಷೆಯನ್ನು ಕೇವಲ ವ್ಯವಹಾರಿಕವಾಗಿ ಮಾತ್ರ ಬಳಸಲು ಕಲಿಯಬೇಕಾಗಿದೆ. ಕನ್ನಡವನ್ನು ಅನ್ನದ ಭಾಷೆ ಯಾಗಿ ತಪ್ಪದೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಳಸುವಂತೆ ರಾಜ್ಯ ಸರ್ಕಾರ ದ್ವಿಭಾಷಾ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಈ ನಾಡಿನ ಪ್ರತಿಯೊಬ್ಬ ವಿದ್ಯಾವಂತ ಮಕ್ಕಳಿಗೆ ಉದ್ಯೋಗದ ಅವಶ್ಯಕತೆ ಇದ್ದು, ಕನ್ನಡ ಭಾಷೆಯಲ್ಲಿ ಉದ್ಯೋಗ ಪಡೆಯುವುದು ಕಷ್ಟದ ಕೆಲಸವಲ್ಲ. ಅನ್ಯಭಾಷೆಯ ಮೋಹಕ್ಕೆ ಬಲಿಯಾಗುವ ಅವಶ್ಯಕತೆ ನಮ್ಮ ನಾಡಿನ ಮಕ್ಕಳಿಗೆ ಬೇಕಾಗಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಬರಬೇಕು ಎಂದು ಹೇಳುವ ಮೂಲಕ ಅನ್ಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಹೋರಾಟಗಾರರ ಒತ್ತಾಯಕ್ಕೆ ಮಣಿದು ಅಲ್ಲಿನ ಸರ್ಕಾರಗಳು ದ್ವಿಭಾಷಾ ನೀತಿ ಅನುಸರಿಸಲು ಮುಂದಾಗಿದ್ದು ನಮ್ಮನ್ನಾಳುವ ಕರ್ನಾಟಕ ಸರ್ಕಾರ ಈ ಕಾರ್ಯಕ್ಕೆ ಮುಂದಾಗಬೇಕೆಂದರು.ಪ್ರತಿಭಟನೆಯಲ್ಲಿ ಪ್ರಶಾಂತ ಬಾವಿಕಟ್ಟಿ, ಶರೀಫ್ ಕೋಲ್ಹಾರ, ಸಂತೋಷ ಚಿನಿವಾಲ, ಶರಣು ಗಾಣಿಗೇರ ಗಣೇಶ ನಾಯಕ, ಸಂಜು ಗೌಡರ, ವಿಷ್ಣು ಬಾರಕೇರ ಸಾದಿಕ್ ತಾಳಿಕೋಟಿ, ಮಂಜುಳಾ ಅಂಗಡಿ, ಕಸ್ತೂರಿ ಮೆಹರವಾಡೆ, ಶಬಾನಾ ಲಿಂಗಸೂರ, ಶ್ರೀನಿವಾಸ ಮಾರಾ, ಸೋಹೈಲ್ ಸುತಾರ, ಶಂಕರ ಕುರಿ, ನಿಂಬಯ್ಯ ಕುಲಕರ್ಣಿ, ಗುರುನಾಥ ಜಾವಡಗಿ, ಪವನ್ ಶಿವಯೋಗಿ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.