ಸಾರಾಂಶ
ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯ 3ನೇ ವಾರ್ಡ್ ಬಿ.ಬಿ. ಬಣ್ಣದ ನಗರದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸೋಮವಾರ ಗಾಂಧಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ಮೆರವಣಿಗೆ ಮೂಲಕ ನಗರಸಭೆಗೆ ತೆರಳಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಗದಗ: ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯ 3ನೇ ವಾರ್ಡ್ ಬಿ.ಬಿ. ಬಣ್ಣದ ನಗರದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸೋಮವಾರ ಗಾಂಧಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ಮೆರವಣಿಗೆ ಮೂಲಕ ನಗರಸಭೆಗೆ ತೆರಳಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ಬಣ್ಣದ ನಗರದಲ್ಲಿ ರಸ್ತೆಗಳು ಸಂಪೂರ್ಣ ತೆಗ್ಗುಗಳಿಂದ ತುಂಬಿವೆ, ಜರ್ಮನಿ ಆಸ್ಪತ್ರೆಯಿಂದ ಸಂಪರ್ಕಿಸುವ ಮುಖ್ಯ ರಸ್ತೆ ಹದಗೆಟ್ಟಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ ಎಂದು ಆರೋಪಿಸಿದರು.ಬೀದಿ ದೀಪಗಳು ಕಾರ್ಯನಿರತವಿಲ್ಲದ ಕಾರಣ ರಾತ್ರಿ ವೇಳೆ ಹಾವು, ಚೇಳುಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಮಹಿಳೆಯರು ರಾತ್ರಿ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಅಲ್ಲದೆ, ಗಟಾರ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಸರಿಯಾದ ವಿದ್ಯುತ್ ವ್ಯವಸ್ಥೆಯಿಲ್ಲ, ಸೌಲಭ್ಯಗಳನ್ನು ಶೀಘ್ರದಲ್ಲಿ ಒದಗಿಸದಿದ್ದರೆ, ನಗರಸಭೆಗೆ ಬೀಗ ಹಾಕಿ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಿಂಗನಗೌಡ ಮಾಲೀಪಾಟೀಲ, ವಿನಾಯಕ ಬದಿ, ಆಶಾ ಜುಳಗುಡ್ಡ, ರತ್ನಮ್ಮ ಯಲಬುರ್ಗಾ, ಶರಣಪ್ಪ ಪುರಟಗೇರಿ, ತೌಸೀಪ ಢಾಲಾಯತ್, ಹನುಮಪ್ಪ ಪೂಜಾರಿ, ರೆಹಮಾನ ದರ್ಗಾದ, ಯಲ್ಲಪ್ಪ ಗೋಕಾಕ, ಲಕ್ಷ್ಮಣ ಕಮ್ಮಾರ, ಜ್ಯೋತಿ, ಸರೋಜಮ್ಮ, ಮಾಲವ್ವ, ಬಸಮ್ಮ ಸೇರಿದಂತೆ ಹಲವಾರು ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.