ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ನಗರದ ಅರ್ ಇಎಸ್ ಸಂಸ್ಥೆಯಲ್ಲಿ ಗಾಂಧಿವಾದಿ ಹಾಗೂ ಸಂಸ್ಥೆಯ ಸಂಸ್ಥಾಪಕ ಎಸ್. ಕರಿಯಪ್ಪನವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಕನಕಪುರದ ಗಾಂಧಿ ಎಂದೇ ಹೆಸರಾಗಿದ್ದ ಆರ್ಇಎಸ್ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳು ಸಂಸ್ಥೆಯ ಸಂಸ್ಥಾಪಕ ಎಸ್. ಕರಿಯಪ್ಪನವರ ಹುಟ್ಟುಹಬ್ಬ ಹಾಗೂ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಕರಿಯಪ್ಪನವರ ಭಾವಚಿತ್ರವನ್ನು ಬೆಳ್ಳಿಯ ರಥದಲ್ಲಿರಿಸಿ ಜಾನಪದ ಕಲಾ ತಂಡಗಳು ಹಾಗೂ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಬಳಿಕ ಕಾಲೇಜು ಮುಂಭಾಗದಲ್ಲಿ ಕರಿಯಪ್ಪನವರ ಹುಟ್ಟುಹಬ್ಬ ಹಾಗೂ ಶ್ರೀ ರಾಮನವಮಿ ಪ್ರಯುಕ್ತ ಸಂಸ್ಥೆಯ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.
ಬಳಿಕ ವೇದಿಕೆ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಎಚ್.ಕೆ. ಶ್ರೀಕಂಠು ಉದ್ಘಾಟಿಸಿ ಮಾತನಾಡಿ, ತಾಲೂಕಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಬೇಕೆಂಬ ಉದ್ದೇಶ ಮಹಾನ್ ಚೇತನ ಪೂಜ್ಯ ಕರಿಯಪ್ಪನವರದ್ದಾಗಿತ್ತು. ತಮ್ಮ ಸರ್ವಸ್ವವನ್ನೂ ಮಕ್ಕಳ ಶಿಕ್ಷಣಕ್ಕೆ ಧಾರೆ ಎರೆದು ನಗರದಲ್ಲಿ ಶಿಕ್ಷಣಸಂಸ್ಥೆಯನ್ನು ತೆರೆಯುವ ಮೂಲಕ ಸಾವಿರಾರು ಜನರ ಬಾಳಿಗೆ ಬೆಳಕಾಗಿದರು. ರಾಮನವಮಿಯಂದು ಜನಿಸಿ 80 ವರ್ಷಗಳ ಕಾಲ ಸಮಾಜಕ್ಕಾಗಿ ಸಾರ್ಥಕ ಜೀವನ ನಡೆಸಿ ಶ್ರೀ ರಾಮನವಮಿಯಂದೇ ಹುಟ್ಟು, ರಾಮನವಮಿಯಂದೇ ಇಹಲೋಕ ತ್ಯಜಿಸಿರುವುದು ಅವರ ದೈವತ್ವದ ಗುಣವನ್ನು ತೋರಿಸುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿ ಕಾನೂನು ತಜ್ಞ ಎಂ.ಪುಟ್ಟೇಗೌಡ ಮಾತನಾಡಿ, ಪೂಜ್ಯ ಎಸ್. ಕರಿಯಪ್ಪನವರು ಅಂದು ಈ ಸಂಸ್ಥೆಯನ್ನು ಆರಂಭಿಸದಿದ್ದರೆ ನನ್ನಂತಹ ಸಾವಿರಾರು ಜನರು ಅನಕ್ಷರಸ್ಥರಾಗಿ ಜೀವನ ಸಾಗಿಸಬೇಕಾಗಿತ್ತು, ಶಿಕ್ಷಣದಿಂದ ಸಮಾಜದ ಸುಧಾರಣೆ ಹಾಗೂ ಉತ್ತಮ ಬದುಕು ಕಾಣಲು ಸಾಧ್ಯ ಎಂಬುದನ್ನು ಕರಿಯಪ್ಪನವರು ಮನಗಂಡಿದ್ದರು, ಅವರ ಸಂಸ್ಥೆಯಲ್ಲಿ ನಾವು ಶಿಕ್ಷಣ ಪಡೆದಿರುವುದೇ ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಎಂ.ಎಲ್. ಶಿವಕುಮಾರ್, ನಾಗರಾಜು ಸೇರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು, ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.