- ಫಳಾರ, ಖಾರದ ಚೀಲಗಳ ಅರ್ಪಣೆ । ಭದ್ರತೆಗೆ 100 ಸಿಬ್ಬಂದಿ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಗೆ ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಬೆಳ್ಳಿ ರಥೋತ್ಸವವು ಸಾವಿರಾರು ಭಕ್ತರ ಮಧ್ಯೆ ಸೋಮವಾರ ಬೆಳಗ್ಗೆ ಸಂಭ್ರಮದಿಂದ ಜರುಗಿತು.ನಂದಿಗುಡಿ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ ಸ್ವಾಮಿಗೆ ಮಹಾಪೂಜೆ ನೆರವೇರಿಸಿದರು. ಬಳಿಕ ಗರ್ಭಗುಡಿಯಲ್ಲಿನ ಉತ್ಸವ ಮೂರ್ತಿಯನ್ನು ಬೆಳ್ಳಿರಥದವರೆಗೆ ತಂದು, ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ೩೦೦ ಅಡಿವರೆಗೆ ಮಾತ್ರ ಬೆಳ್ಳಿ ರಥೋತ್ಸವ ಜರುಗಿತು. ಮಂಗಳವಾರ ಫಳಾರ ಹಂಚಿಕೆ ನಡೆಯಲಿದ್ದು, ಹರಕೆ ಹೊತ್ತ ಭಕ್ತರು ದೂರದ ಗ್ರಾಮ, ಪಟ್ಟಣದಿಂದ ಆಗಮಿಸಿ ಫಳಾರ ಹಾಗೂ ಖಾರದ ಚೀಲವನ್ನು ದೇಗುಲಕ್ಕೆ ನೀಡಿ ಭಕ್ತಿ ಮೆರೆದರು.
ಈ ಉತ್ಸವದಲ್ಲಿ ನಾಸಿಕ್ ಡೋಲು, ಜಾಂಜ್ಮೆಳ, ವೀರಗಾಸೆ ಬಹು ಪಾತ್ರ ವಹಿಸಿತ್ತು. ಅಜ್ಜಯ್ಯನ ನಂಬಿ ಆಗಮಿಸಿದ ಕೆಲವು ಭಕ್ತರು ಕಲಾ ತಂಡಗಳ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಎಸ್ ಸುರೇಶ್ ಹಾಗೂ ನಿರ್ದೇಶಕರು ಭಕ್ತರಿಗೆ ಅಗತ್ಯ ಸೌಲಭ್ಯಗಳ ಬಗ್ಗೆ ಉಸ್ತುವಾರಿ ವಹಿಸಿದ್ದರು. ಈ ಸಂದರ್ಭ ಆಡಳಿತ ಮಂಡಳಿ ನಿರ್ದೇಶಕರು ಇದ್ದರು.
ಭದ್ರತೆಗೆ 100 ಸಿಬ್ಬಂದಿ ನಿಯೋಜನೆ:
ಪೋಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಬಂದೋಬಸ್ತ್ ನಿಯೋಜಿಸಲಾಗಿದೆ. ಡಿವೈಎಸ್ಪಿ, ಸಿಪಿಐ, ಮೂವರು ಪಿಎಸ್ಐ, 60 ಪೊಲೀಸರು ಹಾಗೂ 20 ಗೃಹ ರಕ್ಷಕ ದಳ ಸೇರಿದಂತೆ ಒಟ್ಟು 100 ಭದ್ರತಾ ಸಿಬ್ಬಂದಿಯನ್ನು ಕಾನೂನು ಸುವ್ಯವಸ್ಥೆ ರಕ್ಷಣೆಗೆ ನಿಯೋಜಿಸಲಾಗಿದೆ.ಮಂಗಳವಾರ ಭಕ್ತರಿಗೆ ಫಳಾರ ಹಂಚಿಕೆ ನಡೆಯಲಿದ್ದು, ಅಪಾರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ರಥೋತ್ಸವಕ್ಕೆ ಬರಲಾಗದವರು, ಫಳಾರ ಪಡೆದುಕೊಳ್ಳಲು ಬಂದೇ ಬರುವುದು ಈ ಕ್ಷೇತ್ರದ ಧಾರ್ಮಿಕ ವೈಶಿಷ್ಟ್ಯ.
- - --ಚಿತ್ರ-೩:
ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿ ಕ್ಷೇತ್ರದಲ್ಲಿ ಸೋಮವಾರ ಬೆಳಗ್ಗೆ ಶ್ರೀ ಕರಿಬಸವೇಶ್ವರ ಸ್ವಾಮಿ ಬೆಳ್ಳಿ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಶ್ರದ್ಧಾಭಕ್ತಿಯಿಂದ ನೆರವೇರಿತು.