ಮಡಿಕೇರಿ: ಕೊಡಗು-ಕೇರಳ ಗಡಿ ಗ್ರಾಮ ಕರಿಕೆ ಗ್ರಾಮ ಪಂಚಾಯಿತಿಗೂ ಕೂಡ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಹೊಸ ಕಟ್ಟಡ ನಿರ್ಮಾಣ, ಡಿಜಿಟಲ್ ಲೈಬ್ರರಿ, ಕಸ ವಿಲೇವಾರಿ ಘಟಕ, ಕರಿಕೆ ಬಸ್ ನಿಲ್ದಾಣ ಜಾಗ ಒತ್ತುವರಿ ತೆರವು ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ಮಾಡಲಾಗಿದೆ.
ಕರಿಕೆಯಲ್ಲಿ ಐದು ವರ್ಷದ ಹಿಂದೆ ಡೆಂಘ್ಯೂ ಪ್ರಕರಣ ಪತ್ತೆಯಾಗಿತ್ತು. ಇದರಿಂದ ಪಂಚಾಯಿತಿಯಿಂದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ಸಹಕಾರದೊಂದಿಗೆ ಹಲವು ಅರಿವು ಕಾರ್ಯಕ್ರಮ ನಡೆಸಲಾಗಿದೆ. ಪಂಚಾಯಿತಿ ಹಾಗೂ ಆರೋಗ್ಯ ಉಪ ಕೇಂದ್ರದ ಆವರಣದಲ್ಲಿ ಉದ್ಯಾನವನ ಮಾಡಲಾಗಿದೆ. ಪಂಚಾಯಿತಿ ಕಟ್ಟಡವನ್ನು ನವೀಕರಣ ಮಾಡಲಾಗಿದೆ. ಗಡಿ ಗ್ರಾಮ ಆಗಿರುವುದರಿಂದ ಹೆಚ್ಚಿನ ಆದ್ಯತೆ ನೀಡಿ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಹಲವು ಸೌಲಭ್ಯವನ್ನು ಕಲ್ಪಿಸಲಾಗಿದೆ.ಪಂಚಾಯಿತಿಯ ಅನುದಾನವನ್ನು ಸಮರ್ಪಕವಾಗಿ ಬಳಸಲಾಗಿದೆ. ಈ ಹಿಂದಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರ ಸಹಕಾರದಿಂದ ಹಲವು ಅಭಿವೃದ್ಧಿ ಕೆಲಸವನ್ನು ಮಾಡಲಾಗಿದೆ. -ಬಿಪಿನ್ ಕೆ.ಜಿ., ಪಿಡಿಓ ಕರಿಕೆ ಗ್ರಾಪಂ
