ಕಾರ್ಕಳ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಸಿಡಿಲಿನ ಪರಿಣಾಮವಾಗಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.

ಎರ್ಲಪಾಡಿ ಗ್ರಾಮದ ಸುಶೀಲಾ ಶೆಟ್ಟಿ ಅವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು, ಸುಮಾರು ₹70,000 ನಷ್ಟ ಉಂಟಾಗಿದೆ. ಕಡ್ತಲ ಗ್ರಾಮದ ಸುಶೀಲಾ ಕೊ ಶೀನ ಅವರ ಮನೆ ಮಳೆಯಿಂದ ಹಾನಿಗೊಳಗಾಗಿ ₹15,000 ನಷ್ಟವಾಗಿದೆ. ಕೆರುವಾಶೆ ಗ್ರಾಮದ ಯುವರಾಜ್ ಭಂಡಾರಿ ಅವರ ಮನೆಗೆ ಸಿಡಿಲು ಬಡಿದು ಸುಮಾರು ₹20,000 ಹಾನಿ ಸಂಭವಿಸಿದೆ.

ಇನ್ನು ಹೆಬ್ರಿ ತಾಲೂಕಿನ ಅಂಡಾರು ಗ್ರಾಮದ ಸುರೇಶ್ ಸೇರ್ವೆಗಾರ್ (ಬಿನ್ ಶ್ರೀನಿವಾಸ ಸೇರ್ವೆಗಾರ್) ಅವರ ಮನೆಗೂ ಮಳೆಯಿಂದ ಹಾನಿಯಾಗಿದ್ದು, ₹80,000 ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಭಾರಿ ಮಳೆಯ ಹಿನ್ನೆಲೆ ಕಾರ್ಕಳ ತಾಲೂಕಿನಲ್ಲಿ 6.2 ಸೆ.ಮೀ. ಮಳೆಯಾಗಿದ್ದು, ಹೆಬ್ರಿ ತಾಲೂಕಿನಲ್ಲಿ 4.7 ಸೆ.ಮೀ. ಮಳೆಯಾಗಿದೆ. ಮಳೆಯ ತೀವ್ರತೆಯಿಂದಾಗಿ ಕೆಲವೆಡೆ ಮರಗಳು ಬಿದ್ದು, ಸಿಡಿಲು ಬಡಿದ ಪರಿಣಾಮ ಮನೆಗಳಿಗೆ ಹಾನಿ ಉಂಟಾಗಿದೆ.