ಸಾರಾಂಶ
ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕಿನ ಸಭೆ ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುವಾರ ಕಾರ್ಕಳದ ಹೋಟೆಲ್ ಪ್ರಕಾಶದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕಿನ ಸಭೆ ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುವಾರ ಕಾರ್ಕಳದ ಹೋಟೆಲ್ ಪ್ರಕಾಶದಲ್ಲಿ ನಡೆಯಿತು.ಸಭೆಯಲ್ಲಿ ಡಿ.6ರಂದು ಶಿರ್ಲಾಲಿನಲ್ಲಿ ಕೊಳಕೆ ಇರ್ವತ್ತೂರು ಗುಣಪಾಲ ಕಡಂಬ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಕಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಉಡುಪಿ ಜಿಲ್ಲಾಮಟ್ಟದಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿ ಕವಿ/ಕವಿಯತ್ರಿ ಪ್ರಶಸ್ತಿ ಯನ್ನು ದಿ.ಪ್ರೊ. ಎಂ.ರಾಮಚಂದ್ರ ಅವರ ಹೆಸರಿನಲ್ಲಿ ನೀಡುವುದು, ಅಂತೆಯೇ ಕನ್ನಡ ನಾಡು ನುಡಿಯ ಸೇವೆ ಮಾಡುತ್ತಿರುವ ಉಡುಪಿ ಜಿಲ್ಲೆಯ ಉತ್ತಮ ಸಂಘ ಸಂಸ್ಥೆಗಳನ್ನು ಗುರುತಿಸಿ ಮಾಜಿ ಶಾಸಕ ದಿ.ಗೋಪಾಲ ಭಂಡಾರಿ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ, ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡ ತಾಲೂಕಿನ ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆಯನ್ನು ಗುರುತಿಸಿ ಕರುನಾಡ ಸಿರಿ ಪ್ರಶಸ್ತಿಗೆ ಆಯ್ಕೆ ಮಾಡುವ ಬಗ್ಗೆ ಚರ್ಚಿಸಲಾಯಿತು.ಅಲ್ಲದೇ ಸಮ್ಮೇಳನಕ್ಕೆ ಪೂರಕವಾಗಿ ಅಕ್ಟೋಬರ್ನಲ್ಲಿ ತಾಲೂಕುಮಟ್ಟದ ಯುವ ಬರಹಗಾರರ ಸಮಾವೇಶವನ್ನು ಆಯೋಜಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಗೌರವ ಕಾರ್ಯದರ್ಶಿ ದೇವದಾಸ ಕೆರೆಮನೆ, ಸಂಘಟನಾ ಕಾರ್ಯದರ್ಶಿ ಗಿರೀಶ್ ರಾವ್, ಗಣೇಶ್ ಜಾಲ್ಸೂರು, ಸದಸ್ಯರಾದ ದೇವುದಾಸ್ ನಾಯಕ್, ಶಿವಸುಬ್ರಹ್ಮಣ್ಯ ಭಟ್, ನಾಗೇಶ್ ನಲ್ಲೂರು, ಆಶಿಷ್ ಶೆಟ್ಟಿ, ವಸಂತ ಎ., ರಮೇಶ್ ಪ್ರಭು, ತಿಪ್ಪೆಸ್ವಾಮಿ, ಶೈಲಜಾ ಹೆಗ್ಡೆ, ಮಾಲತಿ ಜಿ. ಪೈ, ಡಾ.ಸುಮತಿ, ಸುಲೋಚನಾ ಉಪಸ್ಥಿತರಿದ್ದರು.ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ದೇವದಾಸ ಕೆರೆಮನೆ ವಂದಿಸಿದರು.