ತಾಲೂಕು ಆಡಳಿತದಿಂದ ದಲಿತ ವಿರೋಧಿ ನೀತಿ, ಭ್ರಷ್ಟಾಚಾರ, ಆಡಳಿತ ವೈಫಲ್ಯ ಖಂಡನೆ । ಒತ್ತುವರಿಗಳ ತೆರವಿಗೆ ಆಗ್ರಹ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕು ಆಡಳಿತದಿಂದ ದಲಿತ ವಿರೋಧಿ ನೀತಿ, ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯ ಖಂಡಿಸಿ ನಗರದ ತಾಲೂಕು ಕಚೇರಿ ಮಂದೆ ಪ್ರೊ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಧರಣಿ ನಡೆಸಲಾಯಿತು.

ಈ ವೇಳೆ ತಾಲೂಕು ಸಂಚಾಲಕ ಮಾರಪ್ಪನಹಳ್ಳಿ ಮುನಿರಾಜು ಮಾತನಾಡಿ, ಸ್ವತಂತ್ರ ಬಂದು 80 ವರ್ಷಗಳಾದರೂ ಚಿಕ್ಕಬಳ್ಳಾಪುರ ತಾಲೂಕಿನ ದಲಿತರು ಮತ್ತು ಬಡವರಿಗೆ ಇದುವರೆಗೂ ನ್ಯಾಯ ದೊರೆತಿಲ್ಲ. ಸೊಪ್ಪಹಳ್ಳಿ ಸರ್ವೆ ನಂ.200 ಡಿಡಿಆರ್ 76/56-57 ಮಂಜೂರಿ ಆಗಿರುತ್ತದೆ. ಮೊದಲು ದಾಖಲೆ ತೆಗೆದುಕೊಂಡಾಗ ಯಾವುದೇ ರೀತಿ ತಿದ್ದುಪಡಿ ಆಗದೇ ನಕಲು ಕಾಫಿ ನೀಡಿರುತ್ತಾರೆ. ಆದರೆ 2025 ರಲ್ಲಿ ತೆಗೆದುಕೊಂಡರೆ ತಿದ್ದುಪಡಿ ಆಗಿರುತ್ತದೆ ಎಂಬುದಾಗಿ ಕಾಣಿಸಿರುತ್ತದೆ. ಇದನ್ನು ತನಿಖೆ ಮಾಡಿ, ಮಾರಪ್ಪನಹಳ್ಳಿ ಸರ್ವೆ ನಂ.108 ರಲ್ಲಿ 1.03 ಗುಂಟೆ ಇದ್ದು ಇದನ್ನು ಒತ್ತು ಮಾಡಿರುತ್ತಾರೆ. ಇದನ್ನು ತೆರವುಗೊಳಿಸಬೇಕು.

ಮಾರಪ್ಪನಹಳ್ಳಿ ಸರ್ವೆ 100ರಲ್ಲಿ ಅರಣ್ಯ ಇಲಾಖೆ ಸರ್ವೆ ಮಾಡಿ ಸಾಗುವಳಿ ಮಾಡುತ್ತಿರುವ ರೈತರಿಗೆ ಉಳಿಸಿಕೊಡಬೇಕು. ಗೊಲ್ಲದೊಡ್ಡಿ ಸರ್ವೆ ನಂ.40 ಒಟ್ಟು 198 ಎಕರೆ ಜಮೀನು ಇದ್ದು ಇದರಲ್ಲಿ ಈಗಾಗಲೇ ಸಾಗುವಳಿ ಮಾಡುತ್ತಿದ್ದ ರೈತರಿಗೆ ದುರಸ್ತಿ ಮಾಡಿಸಿಕೊಡಬೇಕು. ದೇವಸ್ಥಾನದ ಹೊಸಹಳ್ಳಿ 179 ರಲ್ಲಿ ಸ್ಮಶಾನ ಒತ್ತುವರಿ ಆಗಿದ್ದು ಅಳತೆ ಮಾಡಿಸಿ ಸ್ಮಶಾನಕ್ಕೆ ರಸ್ತೆ ಅಳತೆ ಮಾಡಿಕೊಡಬೇಕು.


ಅಡವಿಗೊಲ್ಲವಾರಹಳ್ಳಿ ಸರ್ವೆ ನಂ.169 & 29/1,2.3.4.5 ಈ ನಂಬರ್‌ಗಳಿಗೆ ನಕಾಶೆಯಲ್ಲಿ ರಸ್ತೆ ಇದ್ದು, ಈಗ ಒತ್ತುವರಿಯಾಗಿರುತ್ತದೆ. ಆದ್ದರಿಂದ ಸರ್ವೆ ಮಾಡಿ ದಾರಿ ಬಿಡಿಸಿಕೊಡಬೇಕು. ಕತ್ತರಿಗುಪ್ಪೆ ಸರ್ವೆ ನಂ.43 ರಲ್ಲಿ ಸರ್ಕಾರಿ ಬಂಜರು ಭೂಮಿ ಇದ್ದು ಇದರಲ್ಲಿ ದಲಿತರಿಗೆ ನಿವೇಶನಗಳಿಗಾಗಿ ಭೂಮಿ ಮಂಜೂರು ಮಾಡಿಕೊಡಬೇಕು. ಕಣಿತಹಳ್ಳಿ ಗ್ರಾಮದಲ್ಲಿ ಎಸ್.ಸಿ.ಕಾಲೋನಿಯಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಮಾಡಿಕೊಡಬೇಕು. ಮಂಚನಬಲೆ ಗ್ರಾಮದಲ್ಲಿ ಸ್ಮಶಾನ ಒತ್ತುವರಿ ಆಗಿದ್ದು ಇದನ್ನು ಅಳತೆ ಮಾಡಿಸಿಕೊಡಬೇಕು. ಕತ್ತರಿಗುಪ್ಪೆ ಸರ್ವೆ ನಂ.9 ರಲ್ಲಿ 3.37 ಗುಂಟೆ ಜಮೀನಿದ್ದು ಇದರಲ್ಲಿ ದಲೀತರಿಗೆ ಸ್ಮಶಾನ ಮಂಜೂರು ಮಾಡಿ ಕೊಡಬೇಕು.

ಪಿಟಿಸಿಎಲ್ ಪ್ರಕರಣಗಳು ನಡೆಯುತ್ತಿರುವ ಸರ್ವೆ ನಂಬರುಗಳು ನೈಜತೆ ಕೋರಿ ತಾಲ್ಲೂಕು ಕಛೇರಿಗೆ ಮನವಿ ಸಲ್ಲಿಸಿಕೊಂಡರೆ ಯಾವುದೇ ಮೂಲ ದಾಖಲೆಗಳು ನೀಡದೇ ಇರುವ ಕಾರಣ ಎಲ್ಲಾ ಪಿಟಿಸಿಎಲ್ ಪ್ರಕರಣಗಳು ವಜಾಗೊಳ್ಳುತ್ತವೆ. ಇದನ್ನು ಕೂಡಲೇ ಸರಿಪಡಿಸಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ನಗರದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿ ಅಂಗಡಿಗಳನ್ನು ನೀಡಿ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಕದಸಂಸ ದ ಎಂ.ಕೇಶವ, ಸೊಪ್ಪಹಳ್ಳಿ ಮೂರ್ತಿ, ಚಲಪತಿ, ಎಚ್.ಎಸ್.ನಂಜುಂಡಪ್ಪ, ಬಿ.ನರಸಿಂಹಪ್ಪ, ಕಂಗಾನಹಳ್ಳಿ ನಾರಾಯಣಸ್ವಾಮಿ, ಧಡಮಘಟ್ಟ ತಿರುಮಲೇಶ್, ಅಸ್ಲಾಂಪಾಶ, ಮತ್ತಿತರರು ಇದ್ದರು.

ಸಿಕೆಬಿ-1ತಾಲೂಕು ಆಡಳಿತದಿಂದ ದಲಿತ ವಿರೋಧಿ ನೀತಿ, ಭ್ರಷ್ಟಾಚಾರ ಹಾಗೂ ಆಡಳಿತ ವೈಪಲ್ಯ ಖಂಡಿಸಿ ತಾಲೂಕು ಕಚೇರಿ ಮಂದೆ ಕದಸಂಸದಿಂದ ಧರಣಿ ನಡೆಸಿದರು.