ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಅಶಾಂತಿಯ ತೋಟವಾಗಿ ಪರಿವರ್ತಿತವಾಗಿದೆ ಎಂದಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯಸಭಾ ಸದ್ಯ ನಾಸೀರ್ ಹುಸೇನ್ ಸದಸ್ಯ ರದ್ದತಿಗೆ ಆಗ್ರಹಿಸಿದ್ದಾರೆ.ಈಗಾಗಲೇ ಪೊಲೀಸರು ಬಂಧಿಸಿರುವ ಮೂವರು ಆರೋಪಿಗಳು ಕಾಂಗ್ರೆಸ್ ಸದಸ್ಯರೇ ಆಗಿದ್ದಾರೆ, ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚರಣೆಯಲ್ಲೇ ಪಾಕ್ ಪರ ಘೋಷಣೆ ಕೂಗಿದ್ದಾರೆ. ಇದೆಲ್ಲವು ಕಂಗ್ರೆಸ್ ಪಕ್ಷದಲ್ಲಿಯೇ ಉಗ್ರ ಮನೋಧೋರಣೆಯವರು ತುಂಬಿರೋದು ಸ್ಪಷ್ಟಪಡಿಸುತ್ತದೆ ಎಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಳಿ ನಡೆಸಿದ್ದಾರೆ.
ನಾಸೀರ್ ಹುಸೇನ್ ಪತ್ರದ ಮೇಲೆಯೇ ಬಂಧಿತ ಮೂವರು ಸೇರಿದಂತೆ 25 ಜನ ಬಂದು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಮೂವರು ಪಾಕ್ ಪರ ಘೋಷಣೆ ಕೂಗಿರೋದು ಧೃಢವಾಗಿದೆ. ಇನ್ನು ಇವರನ್ನು ಪತ್ರ ನೀಡಿ ಕರೆತಂದಿರುವ ನಾಸೀರ್ ಹುಸೇನ್ ಕೂಡಾ ದೇಶದ್ರೋಹದ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಆರೋಪಿಯಾಗುತ್ತಾರೆ. ಇವರ ಮೇಲೆ ಅದೇನ್ ಕ್ರಮ ತಗೋತೀರಾ ಹೇಳಿ? ನಾಸೀರ್ ಇವರ ರಾಜ್ಯಸಭಾ ಸದಸ್ಯತ್ವ ರದ್ದು ಮಾಡಬೇಕು, ರಾಜ್ಯಸಭಾ ಸದಸ್ಯತ್ವದಿಂದ ಅವರನ್ನ ಅನರ್ಹಗೊಳಿಸಬೇಕೆಂದು ಅಶೋಕ್ ಆಗ್ರಹಿಸಿದರು.ಕಾಂಗ್ರೆಸ್ಸಿಗರು ಆರಂಭದಲ್ಲಿ ಈ ಪ್ರಕರಣವನ್ನು ತಳ್ಳಿ ಹಾಕುವ ಯತ್ನ ಮಾಡಿದ್ದಾರೆ, ಪ್ರಿಯಾಂಕ್, ಡಾ. ಶರಣಪ್ರಕಾಶ, ಪರಮೇಶ್ವರ, ಚೇಲುವರಾಯಸ್ವಾಮಿ ಸೇರಿದಂತೆ ಅನೇಕ ಸಚಿವರು ಕೇವಲವಾಗಿ ಮಾತನಾಡಿದ್ದಾರೆ, ಬಿಜೆಪಿಯವರೇ ಮಾಡಿಸಿದ್ದಾರೆಂದೂ ನಮ್ಮ ಮೇಲೆಯೇ ಗೂಬೆ ಕೂರಿಸಲು ಮುಂದಾಗಿದ್ದರು. ಇಂಥವರು ಈಗ ಏನು ಹೇಳುತ್ತಾರೆ?
ವಿಧಿ ವಿಜ್ಞಾನ ವರದಿಯಲ್ಲಿ ಆರೋಪಿಗಳ ತುಟಿ ಚಲನ ವಲನ ಆಧರಿಸಿ ಪರೀಕ್ಷೆ ಮಾಡಲಾಗಿದ್ದರೂ ಕಾಂಗ್ರೆಸ್ಸಿಗರು ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆಂದು. ಅಲ್ಪಸಂಖ್ಯಾತರ ತುಷ್ಟೀಕರಣದ ಪರಮಾವಧಿ ಎಂದು ಅಶೋಕ್ ಬಣ್ಣಿಸಿದರು.ಹಿಂದೂ ದ್ವಷಿ ಸಿದ್ದು ಸರ್ಕಾರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರಕಾರ ಹಿಂದೂ ದ್ವೇಷಿಯಾಗಿದೆ ಎಂಬುದಕ್ಕೆ ಇವೆಲ್ಲವೂ ಉದಾಹರಣೆಗಳೇ ಆಗಿವೆ. ಇವರ 9 ತಿಂಗಳ ಆಡಳಿತದಲ್ಲೇ ರಾಜ್ಯ ಉಗ್ರರ ಸ್ಪೀಪಿಂಗ್ ಸೆಲ್ ಆಗುತ್ತಿದೆ. ಪಾಕ್ ಪ್ರೇರಿತ ಸಂಘಟನೆಗಳವರು ಇಲ್ಲೀಗ ಚುರುಕಾಗುತ್ತಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ನ ಅಲ್ಪಸಂಖ್ಯಾತರ ತುಷ್ಟೀಕತರ ಕಾರಣವೆಂದರು.
ಮತದ ಆಸೆಗಾಗಿ ಅಲ್ಪಸಂಖ್ಯಾತರನ್ನು ವಿಪರೀತ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ರಾಜ್ಯವನ್ನು ತೊಂದರೆಗೆ ತಳ್ಳುತ್ತಿದೆ. ಅದಕ್ಕಾಗಿಯೇ ನಾವು ನೋವಿನಿಂದಲೇ ಬಾಂಬ್ ಬೆಂಗಳೂರು ಎಂದು ಬಣ್ಣಿಸಿರೋದು. ನಮಗೇ ಬುದ್ದಿವಾದ ಹೇಳಲು ಬರುತ್ತಿದ್ದಾರೆ, ರಾಜ್ಯ ಇವರ ಆಡಳಿತದಲ್ಲಿ ಭಯೋತ್ಪಾದಕರ ಪ್ರಯೋಗ ಶಾಲೆಯಾಗುತ್ತಿದೆ ಅಶೋಕ್ ಕಾಂಗ್ರೆಸ್ಸಿಗರ ವಿರುದ್ಧ ಗುಡುಗಿದರು.ಕುವೆಂಪು ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟವೆಂದು ಕರುನಾಡನ್ನು ಬಣ್ಣಿಸಿದ್ದರು. ಸಿದ್ದು ಆಡಳಿತದಲ್ಲಿ ಅದು ಅಶಾಂತಯ ತೋಟವಾಗಿದೆ. ಮಂಡ್ಯದ ಕೆರೆಗೋಡು ಹನುಮಧ್ವಜ ಪ್ರಕರಣ, ಪಾಕಿಸ್ತಾನ್ ಜಿಂದಾಬಾದ್ ಪ್ರಸಂಗ, ರಾಮೇಶ್ವರ ಕೆಫೆ ಬಾಂಬ್ ಸ್ಫೋಟದ ಪ್ರಕರಣ, ಕಲಬುರಗಿ ಜಿಲ್ಲೆಯಲ್ಲಿನ ಕಳೆದ 9 ತಿಂಗಳಲ್ಲಿ ನಡೆದಂತಹ ರಜಕೀಯ ಪ್ರೇರಿತ 15ಕ್ಕೂ ಹೆಚ್ಚು ಕೊಲೆ ಪ್ರಕರಣ ಇನ್ನೆಲ್ಲ ಕೂಲಂಕುಷವಾಗಿ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ, ಅಶಾಂತಿ ತಾಂಡವವಾಡತ್ತಿದೆ ಎಂಬುದು ಸ್ಪಷ್ಟ ಎಂದರು.
ಹಾಸನದಲ್ಲಿ ಪಿಎಫ್ಐ ಸೇರಿದಂತೆ ಹಲವು ಸಂಘಟನೆ ಕಾರ್ಯಕರ್ತರ ಮೇಲೆ ಇದ್ದ ಕೇಸ್ ವಾಪಸ್ ಪಡೆದಿದ್ದಾರೆ. ಕೆಜೆಹಳ್ಳಿ, ಡಿಜೆ ಹಳ್ಳಿ ಪ್ರಕರಣದ ಕೇಸ್ ವಾಪಸ್ ಪಡೆಯುವ ಹುನ್ನಾರ ಸಾಗಿದೆ. ಕಾಂಗ್ರೆಸ್ಸಿಗರ ಈ ಮುಸ್ಲಿಂ ಓಲೈಕೆಯೇ ರಾಜ್ಯ ಬೆಲೆ ತೆರುವಂತೆ ಮಾಡುತ್ತಿದೆ. ಬೆಂಗಳೂರು ಭಯೋತ್ಪಾದನೆಯ ಹಬ್ ಆಗೋ ಆತಂಕ ಮೂಡಿದೆ. ಇಂತಹ ಬೆಳವಣಿಗಗೆ ಅವಕಾಶ ನೀಡದೆ ಮುಲಾಜಿಲ್ಲದೆ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದರು.