ಕೇಂದ್ರಕ್ಕೆ ಅತಿ ಹೆಚ್ಚು ವರಮಾನ ನೀಡುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಆದರೂ ಕೂಡ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಯಾವುದೇ ಯೋಜನೆ ಘೋಷಣೆ ಮಾಡದೆ ಕರ್ನಾಟಕಕ್ಕೆ ಮತ್ತೆ ಮಲತಾಯಿ ಧೋರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ಮಡಿಕೇರಿ

ಕೇಂದ್ರಕ್ಕೆ ಅತಿ ಹೆಚ್ಚು ವರಮಾನ ನೀಡುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಆದರೂ ಕೂಡ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಯಾವುದೇ ಯೋಜನೆ ಘೋಷಣೆ ಮಾಡದೆ ಕರ್ನಾಟಕಕ್ಕೆ ಮತ್ತೆ ಮಲತಾಯಿ ಧೋರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಅವರು, ನಾಲ್ಕು ರಾಜ್ಯಗಳ ಚುನಾವಣೆ ಕೇಂದ್ರೀಕರಿಸಿ ಬಜೆಟ್ ಮಂಡಿಸಲಾಗಿದೆ. ಅಲ್ಲದೆ ಎನ್‌ಡಿಎ ಮೈತ್ರಿಕೂಟ ಇರುವ ರಾಜ್ಯಗಳಿಗೆ ಬಜೆಟ್ ನಲ್ಲಿ ಹೆಚ್ಚು ಕೊಡುಗೆ ನೀಡಲಾಗಿದೆ. ಇದು ಹೊರತುಪಡಿಸಿದರೆ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ದೇಶದ ಮುಂದೆ ಭವಿಷ್ಯದಲ್ಲಿ ಹಲವು ಸವಾಲುಗಳಿವೆ. ಮುಖ್ಯವಾಗಿ ಪರಿಸರ ಮಾಲಿನ್ಯ, ಅರಣ್ಯ ಸಂರಕ್ಷಣೆ, ಮಾನವ-ಪ್ರಾಣಿ ಸಂಘರ್ಷ ತಡೆಗಟ್ಟುವುದು ಸೇರಿದಂತೆ ಹಲವು ಸವಾಲಿದೆ. ದೆಹಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಆದರೆ ಇದಕ್ಕೆ ಯಾವುದೇ ಯೋಜನೆ ಮಾಡಿಲ್ಲ. ಬದಲಾಗಿ ನಗರ ಪ್ರದೇಶ ವಿಸ್ತರಣೆ ಮಾಡುವುದೇ ಹೆಚ್ಚಿನ ಆದ್ಯತೆ ಇರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. 16ನೇ ಹಣಕಾಸು ಆಯೋಗ ನಮ್ಮ ಕೂಗು ಕೇಳುತ್ತದೆ. ಜಿಎಸ್‌ಟಿ ಹಂಚಿಕೆಯಲ್ಲಿ ಆದ ಅನ್ಯಾಯ ಸರಿಯಾಗುತ್ತದೆ ಎಂದು ಅಂದುಕೊಂಡಿದ್ದೆವು. ಆದರೆ ಇದ್ಯಾವುದೂ ಈ ಬಜೆಟ್ ನಲ್ಲಿ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದ್ಯಮಿಗಳ ಪರ ಆಯವ್ಯಯ: ಅಪಾರ ನಿರೀಕ್ಷೆ ಹೊಂದಿದ್ದ ಬಜೆಟ್ ದೇಶದ ಕೃಷಿಕರಿಗೆ ಹೆಚ್ಚು ಸೌಲಭ್ಯ ನೀಡುವಲ್ಲಿ ವಿಫಲವಾಗಿದ್ದು, ಇದು ಕೃಷಿಕರ ಪಾಲಿಗೆ ನಿರಾಶೆಯ ಬಜೆಟ್ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ.

ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಅವರು, ಉದ್ಯಮಿಗಳ ಪರವಾಗಿರುವ ಬಜೆಟ್ ಇದಾಗಿದೆ. ಕಾಫಿ ಕೃಷಿಕರು ಅನೇಕ ವರ್ಷಗಳಿಂದ ಹವಾಮಾನ ಆಧಾರಿತ ವಿಮೆ ಸೌಲಭ್ಯ ಕೇಳುತ್ತಾ ಬಂದಿದ್ದರು. ಈ ಬಾರಿ ಕೂಡ ವಿಮೆ ಅನುಕೂಲ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮಂತರ್ ಹೇಳಿದರು.ದೇಶದ ಆದಾಯಕ್ಕೆ ಅಧಿಕ ತೆರಿಗೆ ನೀಡುವ ಕಾಫಿ ಉದ್ಯಮದ ಬಹು ಕಾಲದ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ಬಜೆಟ್ ವಿಫಲ ಆಗಿದೆ. ಕಾಫಿ ಬೆಳೆಗಾರರು ಮತ್ತೊಮ್ಮೆ ನಿರಾಶೆ ಹೊಂದುವಂತೆ ಆಗಿದೆ. ಅನೇಕ ಉಪಕರಣಗಳ ಆಮದು ತೆರಿಗೆ ಹೆಚ್ಚಳ ಕೂಡ ಕಾಫಿ ಉದ್ಯಮಿಗಳಿಗೆ ಹೊರೆ ಆಗಲಿದೆ. ಬೆಳೆಗಾರ ವಲಯದ ಪರ ಇಲ್ಲದ ಉದ್ಯಮಿಗಳ ಓಲೈಕೆಗೆ ಇರುವ ಬಜೆಟ್ ಇದು ಎಂದು ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ವಿಕಸಿತ ಭಾರತಕ್ಕೆ ಪೂರಕ ಬಜೆಟ್ : ಅಪ್ಪಚ್ಚು ರಂಜನ್

ಮಡಿಕೇರಿ: ಇದು ವಿಕಸಿತ ಭಾರತಕ್ಕೆ ಪೂರಕವಾದ ಅಭಿವೃದ್ಧಿ ಆಧರಿತ ಬಜೆಟ್ ಆಗಿದೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ಸೌಕರ್ಯ ಹೆಚ್ಚಳಕ್ಕೆ ಇದರಿಂದ ಸಹಕಾರಿಯಾಗುತ್ತದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಇದಾಗಿದ್ದು ಎಸ್‌ಸಿ-ಎಸ್‌ಟಿ ಸಮುದಾಯದ ಅಭಿವೃದ್ಧಿ ಸೇರಿದಂತೆ ಸಮಾಜ ಕಲ್ಯಾಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಎಐ ತಂತ್ರಜ್ಞಾನಕ್ಕೆ ಒತ್ತು ಕೊಡಲು 40 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕೃಷಿ ವಲಯಕ್ಕೆ ಸಂಬಂಧಿಸಿದಂತೆ 1 ಲಕ್ಷದ 62 ಸಾವಿರ ಕೋಟಿ ರು. ಕೊಟ್ಟಿರುವುದರಿಂದ ಗೊಬ್ಬರ ಬೆಲೆ ಇಳಿಯಲಿದೆ. ವಿಮೆ ಮೇಲೆ ತೆರಿಗೆ ಕಡಿಮೆ ಮಾಡಿರುವುದು ಉತ್ತಮ ಬೆಳವಣಿಗೆ. ಹೈಸ್ಪೀಡ್ ರೈಲು ಯೋಜನೆಯಿಂದ ಹೆಚ್ಚಿನ ಅಭಿವೃದ್ಧಿ ನಿರೀಕ್ಷೆ ಮಾಡಬಹುದು. ಆರೋಗ್ಯ ಕ್ಷೇತ್ರಕ್ಕೂ ಒತ್ತು ಕೊಡಲಾಗಿದೆ. ಉದ್ಯೋಗವಕಾಶ ಹೆಚ್ಚಳದ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ.