ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಜಿ. ನಾಗಲಾಪುರ ಗ್ರಾಮದ ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯು 2025-26ನೇ ಸಾಲಿನ ಪ್ರಶಸ್ತಿ ಒಲಿದಿದೆ. ರಂಗ ಕಲಾವಿದ, ನಿರ್ದೇಶಕರಾಗಿ ಕಳೆದ 40 ವರ್ಷಗಳಿಂದ ಸಲ್ಲಿಸಿದ ಸೇವೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಅರಸಿ ಬಂದಿದೆ.5ನೇ ವಯಸ್ಸಿನಿಂದ ವ್ಯಾಸಂಗದ ಜೊತೆಗೆ ರಂಗಭೂಮಿಯಲ್ಲಿ ಬಾಲಕಲಾವಿದರಾಗಿ, ಕೆರೆಗೆ ಹಾರ, ಪುಣ್ಯಕೋಟಿ ಇತರೆ ಹಲವು ಸಾಮಾಜಿಕ ಪೌರಾಣಿಕ ನಾಟಕಗಗಳಲ್ಲಿ ವೃತ್ತಿ ಆರಂಭಿಸಿದರು. ಬಿಟೆಕ್ ಹಾಗೂ ಎಂಬಿಎ ಪದವೀಧರರಾಗಿ ವೃತ್ತಿಯಲ್ಲಿ ಟೆಲಿಕಾಂ ಎಂಜಿನಿಯರ್ ಆಗಿ ಸದ್ಯ ಬೆಂಗಳೂರಿನ ಕ್ಯುಯುಇಎಸ್ಎಸ್ (ಅಮೇರಿಕ) ಕಂಪನಿಯಲ್ಲಿ ಸಹ ಉಪಾಧ್ಯಕ್ಷ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದೇಶಗಳಲ್ಲಿ ಕನ್ನಡ ಸಂಘಗಳ ಜೊತೆಗೆ, ಕನ್ನಡದ ಶ್ರೇಷ್ಠ ಬರಹಗಾರರ ನಾಟಕಗಳನ್ನು ಆಯ್ಕೆ ಮಾಡಿ, ನಟಿಸಿ, ನಿರ್ದೇಶಿಸಿ ಪ್ರದರ್ಶಿಸುತ್ತಾ ಬರುತ್ತಿರುವುದು ಇವರ ಪ್ರವೃತ್ತಿಯಾಗಿದೆ. ಬೆಂಗಳೂರಿನ ಪ್ರತಿಷ್ಠಿತ ರಂಗಭೂಮಿಯಾದ ಪ್ರಯೋಗ ರಂಗ, ರಂಗ ನಿರಂತರ ತಂಡದ ಸದಸ್ಯರಾಗಿ ಹತ್ತು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ನಟನೆ, ನಿರ್ದೇಶನ:ಮಂಟೇಸ್ವಾಮಿ ಕಥಾ ಪ್ರಸಂಗ, ಸಂತೆಯಲ್ಲಿ ನಿಂತ ಕಬೀರ, ಮೌನಿ, ಕಂಬಾರರು ರಚನೆಯ ಶಿವರಾತ್ರಿ, ಸಿಂಗಿರಾಜ, ಕೊಂದವರಾರು, ಮಹಿಪತಿ ಕ್ವಾಣನ ತಂಬ್ಗಿ, ಅಂಬೇಡ್ಕರ್, ಗಾಂಪರ ಗುಂಪು, ಕರ್ನಾಟಕ ರಮಾರಣ, ರಕ್ತರಾತ್ರಿ, ಶ್ರೀಕೃಷ್ಣದೇವರಾಯ, ಪರಿಹಾರ ಸೇರಿ ಹಲವು ನಾಟಕಗಳಲ್ಲಿ ಅಭಿಯಿಸಿ, ನಿರ್ದೇಶಿಸಿದ ಕೀರ್ತಿ ಹೊಂದಿದ್ದಾರೆ.
ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಪೀಠಾಧ್ಯಕ್ಷ ಡಾ. ಕೊಟ್ಟೂರು ಬಸವಲಿಂಗ ಮಹಾಸ್ವಾಮಿ, ಗರಗ ನಾಗಲಾಪುರ ಗುರು ಒಪ್ಪತ್ತೇಶ್ವರ ಸ್ವಾಮಿ ವಿರಕ್ತ ಮಠದ ನಿರಂಜನ ಪ್ರಭುಸ್ವಾಮಿಗಳು ಶುಭ ಹಾರೈಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂಜಮ್ಮ ಜೋಗತಿ, ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತೆ ಕೆ.ನಾಗರತ್ನಮ್ಮ, ಮ.ಬ . ಸೋಮಣ್ಣ ಮತ್ತಿತರರು ಅಭಿನಂದಿಸಿದ್ದಾರೆ.