ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಶತಸಿದ್ದ

| Published : Dec 19 2024, 12:32 AM IST

ಸಾರಾಂಶ

ಆಲುರು ತಾಲೂಕಿನಲ್ಲಿ ಹೇಳಿಕೊಳ್ಳಲಾಗದಷ್ಟು ಸಮಸ್ಯೆಗಳ ಸರಮಾಲೆಗಳಿದ್ದು, ಅದರ ಹೋರಾಟಕ್ಕೆ ನಿಂತು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಈ ಸಂಘಟನೆ ಮಾಡುತ್ತಿದೆ, ಸ್ಥಳೀಯರಾದ ನಮಗೆ ತಾಲೂಕು ಕೇಂದ್ರದಲ್ಲಿ ಸಮಸ್ಯೆಗಳೇನೆಂದು ನಮಗೆ ಆಳವಾಗಿ ತಿಳಿದಿದೆ. ನಮ್ಮ ದುರಾದೃಷ್ಟಕರವೇನೆಂದರೆ ತಾಲೂಕು ಕೇಂದ್ರವನ್ನು ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಕಡೆಗಣಿಸಿದ್ದಾರೆ ಎಂದು ಕರವೇ ತಾಲೂಕು ಅಧ್ಯಕ್ಷ ರಾಘವೇಂದ್ರ ಎಚ್ ವಿ ಹೇಳಿದರು.

ಆಲೂರು: ಆಲೂರು ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು ಸಮಸ್ಯೆಗಳ ಪರಿಹರಿಸಲು ಹೋರಾಟಕ್ಕೆ ಹಗಲಿರುಳು ಶ್ರಮಿಸುವುದಾಗಿ ಕರವೇ ಪ್ರವೀಣ್ ಶೆಟ್ಟಿ ಬಣ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸೋಮವಾರ ನಡೆದ ರಾಷ್ಟ್ರೀಯ ಹೆದ್ದಾರಿ 75ರ ಸುಂಕ ವಸೂಲಾತಿ ವಿರುದ್ಧ ಮಾಡಿದ ಹೋರಾಟಕ್ಕೆ ಎಲ್ಲಾ ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಬಂದು ಸಹಕರಿಸಿ ಕೈ ಜೋಡಿಸಿದ್ದು, ನಮ್ಮ ಈ ಹೋರಾಟಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ. ಹೋರಾಟಕ್ಕೆ ಬಂದು ಸಹಕರಿಸಿದ ಎಲ್ಲಾ ಸಂಘಟನೆಗಳಿಗೂ, ಪತ್ರಕರ್ತರಿಗೂ, ಪೊಲೀಸ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸ್ಥಳೀಯರಿಗೂ ಧನ್ಯವಾದ ತಿಳಿಸಿದರು. ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲೆಯ ಸಸ್ಯಗಳಿಗೆ ಹೋರಾಟ ನಡೆಸಲು ಕರವೇ ಯಾವ ಸಮಯದಲ್ಲೂ ಸಿದ್ಧ ಎಂದು ತಿಳಿಸಿದರು.

ಕರವೇ ತಾಲೂಕು ಅಧ್ಯಕ್ಷ ರಾಘವೇಂದ್ರ ಎಚ್ ವಿ ಮಾತನಾಡಿ, ತಾಲೂಕಿನಲ್ಲಿ ಹೇಳಿಕೊಳ್ಳಲಾಗದಷ್ಟು ಸಮಸ್ಯೆಗಳ ಸರಮಾಲೆಗಳಿದ್ದು, ಅದರ ಹೋರಾಟಕ್ಕೆ ನಿಂತು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಈ ಸಂಘಟನೆ ಮಾಡುತ್ತಿದೆ, ಸ್ಥಳೀಯರಾದ ನಮಗೆ ತಾಲೂಕು ಕೇಂದ್ರದಲ್ಲಿ ಸಮಸ್ಯೆಗಳೇನೆಂದು ನಮಗೆ ಆಳವಾಗಿ ತಿಳಿದಿದೆ. ನಮ್ಮ ದುರಾದೃಷ್ಟಕರವೇನೆಂದರೆ ತಾಲೂಕು ಕೇಂದ್ರವನ್ನು ಎಲ್ಲಾ ಪಕ್ಷದ ಜನಪ್ರತಿನಿಧಿನಗಳು ಕಡೆಗಣಿಸಿದ್ದಾರೆ, ಯಾರೂ ಕೂಡ ಸಮಸ್ಯೆ ಬಗೆಹರಿಸುವಂತಹ ಕೆಲಸ ಮಾಡುತ್ತಿಲ್ಲ. ಹೇಳಿಕೊಳ್ಳಲು ಮಾತ್ರ ತಾಲೂಕು ಕೇಂದ್ರವಷ್ಟೇ, ಇಲ್ಲಿಯ ಸಮಸ್ಯೆಗಳು ನೂರಾರು. ಪಟ್ಟಣದಲ್ಲಿ ಓಡಾಡಲು ಸರಿಯಾದ ರಸ್ತೆ ಇಲ್ಲ, ಮುಖ್ಯ ರಸ್ತೆಗಳೆಲ್ಲ ಗುಂಡಿ ಬಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ, ದಿನನಿತ್ಯ ಸಂಚಾರ ಮಾಡಲು ತೊಂದರೆಯಾಗುತ್ತಿದೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ, ಆದರೆ ಈ ರಸ್ತೆಯನ್ನು ನೋಡಿದರೆ ಗ್ರಾಮೀಣ ಭಾಗಕ್ಕೆ ಹೋಗುತ್ತಿರುವ ಹಾಗೆ ಭಾಸವಾಗುತ್ತದೆ, ಎಷ್ಟೋ ಜನ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ, ಅಪಘಾತಗಳು ಆಗಿವೆ. ಇಷ್ಟೆಲ್ಲಾ ಆದರೂ ಕೂಡ ಕನಿಷ್ಠ ಪಕ್ಷ ಮಣ್ಣು ಮುಚ್ಚಿ ಸರಿಪಡಿಸುವಂತ ಕೆಲಸಕ್ಕೂ ಮುಂದಾಗಿಲ್ಲ. ಮಳೆ ಬಂತೇದರೆ ಮಳೆಯ ನೀರು ಗುಂಡಿ ತುಂಬಾ ತುಂಬಿ ಅಪಘಾತಗಳು ಹೆಚ್ಚುವ ಆತಂಕ ಹೆಚ್ಚಾಗಿದೆ. ಇದರ ಬಗ್ಗೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಎಚ್ಚೆತ್ತು ಕೊಳ್ಳುತ್ತಿಲ್ಲವೆಂದರು.

ವಾಹನಗಳು ನಿಲ್ಲಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲ, ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ, ಎಲ್ಲಾ ಇದ್ದರೂ ಕೂಡ ಏಕೆ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಪಂಚಾಯಿತಿಗೆ ಹೊಸ ಯಂತ್ರಗಳನ್ನು ತಂದಿದ್ದು, ಅದನ್ನು ಇವರು ಸದ್ಭಳಕೆ ಮಾಡಿಕೊಳ್ಳುತ್ತಿಲ್ಲ ಹೊಸ ಯಂತ್ರಗಳು ನಿಂತಲ್ಲೇ ನಿಂತು ತುಕ್ಕು ಹಿಡಿದು ನಿಂತಿದೆ ಎಂದು ಆಕ್ರೋಶ ಹೊರಹಾಕಿದರು.

ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಇದರ ಬಗ್ಗೆ ಯಾರೂ ಕೇಳುತ್ತಿಲ್ಲ ಆನೆ ಸಮಸ್ಯೆಯಂತೂ ಹೇಳತೀರದಾಗಿದೆ. ಇಂತಹ ಸಮಸ್ಯೆಗಳು ತುಂಬಾ ಇದ್ದು, ಹಂತ ಹಂತವಾಗಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಬೇಕಿದೆ. ಏನೇ ಸಮಸ್ಯೆಗಳು ಇದ್ದರೂ ಕರವೇ ಹಗಲಿರುಳು ಹೋರಾಟ ಮಾಡುವುದಕ್ಕೆ ಶತಸಿದ್ಧವಾಗಿದೆ. ಹಾಗಾಗಿ ನಮ್ಮ ಈ ಹೋರಾಟಕ್ಕೆ ನಿಮ್ಮೆಲ್ಲರ ಸಹಕಾರ ನಮಗೆ ಅತ್ಯವಶ್ಯಕವಾಗಿದೆ. ನಮ್ಮ ಈ ಸಮಸ್ಯೆಗಳ ಹೋರಾಟಕ್ಕೆ ಸ್ಪಂದಿಸದಿದ್ದರೆ ಕರವೇ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಈ ನಮ್ಮ ಹೋರಾಟಕ್ಕೆ ತಾಲೂಕಿನ ಜನತೆ ಅವರಿವರೆನ್ನದೆ ಬಂದು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಪ್ರಧಾನ ಕಾರ್ಯದರ್ಶಿ ಮಧು, ಕಣಗಾಲ್ ಮೂರ್ತಿ, ಕಬೀರ್ ಅಹಮದ್ ಉಪಸ್ಥಿತರಿದ್ದರು.

==============================

ಫೋಟೋ:

ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಕರವೇ ಪ್ರವೀಣ್ ಶೆಟ್ಟಿ ಬಣ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್,ಇತರರು ಮಾತನಾಡಿದರು.