ಕಾಡುಪ್ರಾಣಿಗಳ ಹಾವಳಿಯಿಂದ ತಡೆಯಲು ಆಗ್ರಹ

| Published : Nov 14 2025, 01:00 AM IST

ಸಾರಾಂಶ

ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಗೆ ಮೂವರು ಜೀವ ಕಳೆದುಕೊಂಡು, ಓರ್ವ ರೈತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವದಿಂದ ಪ್ರತಿಭಟನೆ ನಡೆಸಿ ಆಗ್ರಹ

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಹಾವಳಿಯಿಂದ ಮಾನವ ಪ್ರಾಣಕ್ಕೆ ಹಾನಿ ಆಗುತ್ತಿರುವುದನ್ನು ತಡೆಗಟ್ಟಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವದವರು ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.

ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಗೆ ಮೂವರು ಜೀವ ಕಳೆದುಕೊಂಡು, ಓರ್ವ ರೈತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದನ್ನು ತಡೆಯುವಲ್ಲಿ ವಿಫಲವಾದ ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ನೂರಾರು ರೈತರು ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಈ ವೇಳೆ ಪೊಲೀಸರು ಗೇಟನ್ನು ಮುಚ್ಚಿ, ಬ್ಯಾರಿಕೇಡ್‌ ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆದರು. ಇದರಿಂದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ಉಂಟಾಯಿತು. ಒಳ ಬಿಡುವಂತೆ ಒತ್ತಾಯಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ಗೇಟಿನ ಮುಂಭಾಗವೇ ಪ್ರತಿಭಟಿಸಿದರು.

ಕಳೆದ ಒಂದು ತಿಂಗಳ ಅಂತರದಲ್ಲಿ ವಿವಿಧ ಸ್ಥಳಗಳಲ್ಲಿ ಕಾಡು ಪ್ರಾಣಿಗಳಾದ ಆನೆ, ಹುಲಿ, ಕಾಡಂದಿಗಳು ರೈತರ ಮೇಲೆ ದಾಳಿ ಮಾಡಿವೆ. ಸರಗೂರು, ಎಚ್.ಡಿ. ಕೋಟೆ ತಾಲೂಕಿನಾದ್ಯಂತ ಮೂವರು ರೈತರು ಹುಲಿ ದಾಳಿಯಿಂದ ಮೃತಪಟ್ಟಿದ್ದು, ಕಾಡಂಜಿನ ರೈತರು ಭಯದ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ. ರೈತರು ಮಾತ್ರವಲ್ಲದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಾನುವಾರುಗಳ ಮೇಲೂ ಹುಲಿ ಮಾಡಿದ್ದು, ಅರಣ್ಯ ಇಲಾಖೆಯ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹುಲಿ ದಾಳಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಒಂದೆಡೆ ಅಕ್ರಮ ರೆಸಾರ್ಟ್‌ ಗಳು, ಹೋಮ್ ಸ್ಟೇಗಳು ತಲೆ ಎತ್ತಿರುವುದರಿಂದ ರಾತ್ರಿ ವೇಳೆ ಮೋಜು ಮಸ್ತಿ ನಡೆಸಲು ಫೈರ್ ಕ್ಯಾಂಪ್, ಕರ್ಕಶ ಧ್ವನಿವರ್ದಕ ಅಳವಡಿಸುವ ಮೂಲಕ ಕಾಡುಪ್ರಾಣಿಗಳಿಗೆ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಪ್ರಾಣಿಗಳು ಭಯಪಟ್ಟು ನಾಡಿನ ಕಡೆಗೆ ಮುಖ ಮಾಡಿವೆ ಎಂದು ಅವರು ದೂರಿದರು.

ಸ್ಥಳೀಯ ರೈತರು ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗೆ ತೆರಳಲು, ಜಾನುವಾರು ಮೇಯಿಸಲು ಹೋಗಲು ಭಯ ಪಡುತ್ತಿದ್ದಾರೆ. ಹೀಗಾಗಿ ಇಂತಹ ಘಟನೆಗಳು ಮರುಕಳಿಸದಂತೆ, ರೈತರಿಗೆ ಧೈರ್ಯ ನೀಡುವ ಸಲುವಾಗಿ ಅಕ್ರಮವಾಗಿ ತಲೆ ಎತ್ತಿರುವ ಹೋಮ್ ಸ್ಟೇ, ರೆಸಾರ್ಟ್‌ ಗಳನ್ನು ಕೂಡಲೇ ಬಂದ್ ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾಡುಪ್ರಾಣಿಗಳಿಂದ ಜನರನ್ನು ರಕ್ಷಿಸಲು ಕ್ರಮ ವಹಿಸುವ ಜೊತೆಗೆ ನಾಡಿನೆಡೆಗೆ ಬಾರದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ರೈತರ ಹಿತಾಸಕ್ತಿ ಹಾಗೂ ವನ್ಯಜೀವಿಗಳನ್ನು ರಕ್ಷಿಸುವ ಸಲುವಾಗಿ ಹೋಮ್ ಸ್ಟೇ, ರೆಸಾರ್ಟ್ ಮುಕ್ತ ವಲಯ ಎಂದು ಘೋಷಿಸುವಂತೆ ಅವರು ಆಗ್ರಹಿಸಿದರು.

ಸಂಸ್ಥಾಪಕ ಅಧ್ಯಕ್ಷ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಉಮಾಪತಿ, ಪದಾಧಿಕಾರಿಗಳಾದ ಕುಮಾರ, ಚಾಮರಾಜು, ವೈ.ಎನ್. ನವೀನಕುಮಾರ್, ಭರತ್ ಕಡಕೊಳ, ನಾಗೇಶ್ ಬಂಡಿಪಾಳ್ಯ, ವಿಜಯ್ ಗೌಡ, ಅಬ್ದುಲ್ ಶುಕೂರ್, ಜಯರಾಮೇಗೌಡ, ಸೋಮಣ್ಣ, ಭಾಗ್ಯಮ್ಮ, ಚಾಂದಿನಿ, ಕೃಷ್ಣನಾಯಕ್, ಸಿದ್ದಲಿಂಗೇಗೌಡ ಮೊದಲಾದವರು ಇದ್ದರು.