ಸಾರಾಂಶ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿಯು ಈಗಾಗಲೇ ಆರಂಭಗೊಂಡಿದ್ದು, ನ.15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ವಿ.ಶರಣಪ್ಪ ಹಲಸೆ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿಯು ಈಗಾಗಲೇ ಆರಂಭಗೊಂಡಿದ್ದು, ನ.15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ವಿ.ಶರಣಪ್ಪ ಹಲಸೆ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆವೃತ್ತಿಯಲ್ಲಿ ಯುಜಿಸಿ ಅನುಮೋದಿತ ಸ್ನಾತಕ/ಸ್ನಾತಕೋತ್ತರ ಕೋರ್ಸ್ಗಳಾದ ಬಿ.ಎ., ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಡಬ್ಲ್ಯೂ, ಬಿಎಲ್ಐಎಸ್ಸಿ, ಬಿಎಡ್ (ಸಿಇಟಿ ಮೂಲಕ), ಬಿಎಸ್ಸಿ, ಎಂಎ, ಎಂಸಿಜೆ, ಎಂಕಾಂ, ಎಂಎಲ್ಐಎಸ್ಸಿ, ಎಂಸಿಎ, ಎಂಎಸ್ಡಬ್ಲ್ಯೂ, ಎಂಎಎಸ್ಸಿ, ಎಂಬಿಎ ಪಿಜಿ ಡಿಪ್ಲೊಮಾ ಪ್ರೋಗ್ರಾಮ್ಸ್, ಡಿಪ್ಲೋಮಾ ಪ್ರೋಗ್ರಾಮ್ಸ್, ಸರ್ಟಿಫಿಕೇಟ್ ಕೋರ್ಸ್ಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ. ಅದೇ ರೀತಿ 10 ಆನ್ಲೈನ್ ಕೋರ್ಸ್ಗಳಾದ ಬಿಎ- ಸಾಮಾನ್ಯ (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ), ಬಿಕಾಂ. ಎಂಎ- ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ, ಎಂಕಾಂ, ಎಂಬಿಎ, ಎಂಎಸ್ಸಿ-ಗಣಿತಶಾಸ್ತ್ರ, ಸಂಪೂರ್ಣ ಆನ್ಲೈನ್ ಕೋರ್ಸ್ಗಳು ಇರುತ್ತವೆ ಎಂದರು.
ಮಂಗಳೂರಿನ ಲೇಡಿಹಿಲ್ ಬಳಿಯ ಒಕ್ಕಲಿಗರ ಯಾನೆ ಗೌಡರ ಸಂಘದ ಮೂರನೇ ಮಹಡಿಯಲ್ಲಿರುವ ಮಂಗಳೂರು ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಕರಾಮುವಿಯ ಅಧಿಕೃತ ವೆಸ್ಸೈಟ್ www.ksoumvsuru.ac.in ನಲ್ಲಿ ಕೆಎಸ್ಒಯು ಎಡ್ಮಿಶನ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಂತರ ಆನ್ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಸಿದ್ಧಪಾಠಗಳನ್ನು ಪಡೆಯಬಹುದು. ಕರಾಮುವಿಯಲ್ಲಿ ಪ್ರವೇಶಾತಿ ಪಡೆಯುವ ಎಸ್ಸಿ/ಎಸ್ಟಿ/ಒಬಿಸಿ ವಿದ್ಯಾರ್ಥಿಗಳು ಅಗತ್ಯ ದಾಖಲೆ ಒದಗಿಸಿದರೆ ಎಸ್ಎಸ್ಪಿ ಮೂಲಕ ವಿದ್ಯಾರ್ಥಿ ವೇತನ ಇರುತ್ತದೆ ಅಥವಾ ಪೂರ್ಣಶುಲ್ಕ ಮರುಭರಿಕೆಯಾಗುತ್ತದೆ ಎಂದು ತಿಳಿಸಿದರು.ಪ್ರಾದೇಶಿಕ ಕೇಂದ್ರಗಳ ಡೀನ್ ಡಾ. ರಾಮನಾಥ್ ನಾಯ್ಡು, ಡಾ. ಬಿ. ಬಸವರಾಜು, ಡಾ.ಕೆ.ಪಿ. ಮಹಾಲಿಂಗಯ್ಯ, ಸ್ಮಿತಾ ಸುಬ್ಬಯ್ಯ, ಗುರುದತ್ತ ಇದ್ದರು.