ಸಾರಾಂಶ
ಬುಧವಾರ ಬೆಳಗಿಯಿಂದಲೂ ಸುರಿಯುತ್ತಿರುವ ಜಿಟಿಜಿಟಿ ಮಳೆಯನ್ನು ಲೆಕ್ಕಿಸದೆ ಭಕ್ತರು ಸಾಲುಗಟ್ಟಿ ನಿಂತು ಅಮ್ಮನ ದರ್ಶನ ಪಡೆದರು. ದೇವಸ್ಥಾನದ ಪರಿಕ್ರಮದಲ್ಲಿ ಶೆಲ್ಟರ್ ನಿರ್ಮಿಸಿದ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲವಾಯಿತು. ಮಂಗಳವಾರ ಸಹ 1.5 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದರು.
ಮುನಿರಾಬಾದ್:
ಕಾರ ಹುಣ್ಣಿಮೆ ಪ್ರಯುಕ್ತ ಬುಧವಾರ ಹುಲಿಗೆಮ್ಮ ದೇವಸ್ಥಾನಕ್ಕೆ 1.5 ಲಕ್ಷ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.ಬೆಳಗ್ಗೆಯಿಂದಲೂ ಸುರಿಯುತ್ತಿರುವ ಜಿಟಿಜಿಟಿ ಮಳೆಯನ್ನು ಲೆಕ್ಕಿಸದೆ ಭಕ್ತರು ಸಾಲುಗಟ್ಟಿ ನಿಂತು ಅಮ್ಮನ ದರ್ಶನ ಪಡೆದರು. ದೇವಸ್ಥಾನದ ಪರಿಕ್ರಮದಲ್ಲಿ ಶೆಲ್ಟರ್ ನಿರ್ಮಿಸಿದ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲವಾಯಿತು. ಮಂಗಳವಾರ ಸಹ 1.5 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದರು.
ಮೂಲಭೂತ ಸೌಕರ್ಯ ನೀಡುವ ನಿಟ್ಟಿನಲ್ಲಿ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ಹಾಗೂ ನೂತನವಾಗಿ ನೇಮಕಗೊಂಡ ಸದಸ್ಯರು ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಭಕ್ತರು ಆಗ್ರಹಿಸಿದ್ದಾರೆ.ಹಿಟ್ನಾಳ್ ಕಡೆಯಿಂದ ಹುಲಿಗಿಯ ಹೊಳೆಯ ದಂಡದ ವರೆಗೆ ರಸ್ತೆ ಅಗಲೀಕರಣಗೊಳಿಸಬೇಕು. ಇದರಿಂದ ರಾಯಚೂರ, ಗಂಗಾವತಿ, ಕೊಪ್ಪಳ, ಗದಗ, ಬಾಗಲಕೋಟೆ, ವಿಜಯಪುರ ಕಡೆಯಿಂದ ಬರುವ ಭಕ್ತರಿಗೆ ನೇರವಾಗಿ ದೇವಸ್ಥಾನದ ಹಿಂಭಾಗಕ್ಕೆ ಹೋಗುವ ದಾರಿ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಶೌಚಾಲಯ ನಿರ್ಮಿಸಿ:ನದಿ ದಡದಲ್ಲಿ ವಾಹನ ನಿಲುಗಡೆ ಕಡೆ ಹಾಗೂ ಕೋರಮಂಡಲ್ ಕಾರ್ಖಾನೆ ಮುಂಭಾಗದ ವಾಹನ ನಿಲುಗಡೆ ಸ್ಥಳದಲ್ಲಿ ಶೌಚಾಲಯ ನಿರ್ಮಿಸಬೇಕೆಂಬ ಮಾತುಗಳು ಬಹುದಿನಗಳಿಂದ ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ದೇವಸ್ಥಾನ ಆಡಳಿತ ಮಂಡಳಿ, ಸದಸ್ಯರು ಗಮನ ಹರಿಸಬೇಕಾಗಿದೆ.ಉತ್ತರ ಕರ್ನಾಟಕ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮತ್ತು ಹಳೆ ಮೈಸೂರು ಭಾಗದಿಂದ ಹುಲಿಗೆಮ್ಮ ದೇವಸ್ಥಾನಕ್ಕೆ ಸಾರಿಗೆ ಬಸ್ಗಳಲ್ಲಿ ಆಗಮಿಸುವ ಪ್ರಯಾಣಿಕರಿಗೆ ಹಲಿಗಿ ಕ್ರಾಸ್ನಲ್ಲಿ ನಿಲ್ಲಲು ಸುಸಜ್ಜಿತ ಬಸ್ ತಂಗುದಾಣ, ಶೌಚಾಲಯ ಮತ್ತು ಸ್ನಾನದ ಗೃಹ ನಿರ್ಮಿಸುವುದು ಅವಶ್ಯಕವಾಗಿದೆ. ಇದಲ್ಲದೆ ರಾತ್ರಿ ಬರುವ ಭಕ್ತರಿಗೆ ಸೂಕ್ತ ಭದ್ರತೆ ನೀಡುವ ನಿಟ್ಟಿನಲ್ಲಿ ಭದ್ರತಾ ವ್ಯವಸ್ಥೆ ಸಹ ಬಿಗಿಗೊಳಿಸುವ ಅಗತ್ಯವಿದೆ ಎಂಬ ಮಾತು ಭಕ್ತರಿಂದ ಕೇಳಿ ಬರುತ್ತಿವೆ.ಹುಲಿಗಿ ಕ್ರಾಸ್ನಿಂದ ನಂದಿ ವೃತ್ತದ ವರೆಗೆ ವಿದ್ಯುತ್ ದೀಪದ ಅಳವಡಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಭಕ್ತರು ಇದೇ ವೇಳೆ ಮನವಿ ಮಾಡಿದ್ದಾರೆ.