ಕಾಸರಗೋಡು- ದ.ಕ. ಉನ್ನತಾಧಿಕಾರಿಗಳ ಜತೆ ಜಂಟಿ ಸಭೆ

| Published : Jun 05 2025, 02:13 AM IST

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉನ್ನತ ಅಧಿಕಾರಿಗಳ ಮಹತ್ವದ ಜಂಟಿ ಸಭೆ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸೋಮವಾರ ನಡೆಯಿತು.

ಕೋಮು ಪ್ರಕರಣಗಳ ಆರೋಪಿಗಳ ಪತ್ತೆಗೆ ಜಂಟಿ ಕಾರ್ಯಾಚರಣೆ ಸೇರಿ ಹಲವು ಮಹತ್ವದ ನಿರ್ಣಯ

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉನ್ನತ ಅಧಿಕಾರಿಗಳ ಮಹತ್ವದ ಜಂಟಿ ಸಭೆ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸೋಮವಾರ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (ಪ್ರಭಾರ) ಡಾ. ಆನಂದ್‌ ಕೆ., ನಗರ ಪೊಲೀಸ್‌ ಆಯುಕ್ತ ಸುಧೀರ್‌ ರೆಡ್ಡಿ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ. ಅರುಣ್‌ ಕುಮಾರ್‌, ಡಿಸಿಪಿ ಸಿದ್ದಾರ್ಥ್‌ ಗೋಯಲ್‌ ನೇತೃತ್ವದಲ್ಲಿ ಸಭೆ ನಡೆಯಿತು.

ಪ್ರಮುಖ ನಿರ್ಣಯಗಳು: ಕ್ರಿಮಿನಲ್‌ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಆರೋಪಿಗಳು ಪಕ್ಕದ ಜಿಲ್ಲೆಗೆ ಪರಾರಿಯಾಗಿ ತಪ್ಪಿಸಿಕೊಳ್ಳುತ್ತಾರೆ. ಕೋಮು ಪ್ರಕರಣಗಳಲ್ಲಿ ಬೇಕಾಗಿರುವ ಶಂಕಿತರು ಮತ್ತು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಜಂಟಿ ಕಾರ್ಯಾಚರಣೆ ನಡೆಸುವುದು. ಕರಾವಳಿ ಜಿಲ್ಲೆಗಳಲ್ಲಿ ಕೋಮು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪರಸ್ಪರ ಸಹಕಾರ ನೀಡುವುದು. ಅಂತಾರಾಜ್ಯ ಅಪರಾಧಗಳ ನಿಯಂತ್ರಣ, ಗಡಿ ಜಿಲ್ಲೆಯ ನಡೆಯುವ ಅಕ್ರಮ ದನಗಳ ಸಾಗಾಟ, ಮರಳು ಸಾಗಾಟ ತಪ್ಪಿಸಲು ಜಂಟಿ ಮೇಲ್ವಿಚಾರಣೆ ಮತ್ತು ದಾಳಿ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಗಡಿ ಜಿಲ್ಲೆಯ ಎರಡೂ ಕಡೆಗಳಲ್ಲಿ ಕೋಮು ಗಲಭೆಕೋರರ ಬಗ್ಗೆ ಮಾಹಿತಿ ಹಂಚಿಕೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಯಿತು. ಮಂಗಳೂರು ನಗರದಲ್ಲಿ ಓದುತ್ತಿರುವ ಕೇರಳ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತೂ ಚರ್ಚೆ ನಡೆಯಿತು.