ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶಾಸಕ ಕಾಶಪ್ಪನವರ ಅಜೆಂಡಾ ಈಸ್ ಡಿಫರೆಂಟ್. ಹೇಗಾದ್ರೂ ಮಾಡಿ ಸಿಎಂಗೆ ಒಳ್ಳೆಯವನಾಗಬೇಕು. ಆ ಮೂಲಕ ಸಂಪುಟ ಪುನರ್ ರಚನೆಯಾದ್ರೆ ಸಚಿವನಾಗಬೇಕೆಂಬುದು ಕಾಶಪ್ಪನವರ ಅಜೆಂಡಾ ಆಗಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು.ಬಾಗಲಕೋಟೆ ಆಸ್ಪತ್ರೆಯಲ್ಲಿ ಭಾನುವಾರ ಕೂಡಲಸಂಗಮ ಸ್ವಾಮೀಜಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶಪ್ಪನವರ ಸಚಿವನಾದರೆ ಮೊದಲು ನಾವೇ ಸಂತೋಷ ಪಡುತ್ತೇವೆ. ನಮ್ಮ ಸಮಾಜದವರು ಮಂತ್ರಿಯಾದ್ರು ಎಂದು ಸಂತೋಷ ಪಡ್ತೇವೆ. ಆದ್ರೆ ಸಮಾಜ ತುಳಿದು ಮಂತ್ರಿಯಾಗುವ ಕೆಲಸ ಮಾಡಬಾರದು. ಅವರು ಮಂತ್ರಿಯಾಗುತ್ತಾರೆಂದರೆ ಸಮಾಜದವರೆಲ್ಲರೂ ಸಿಎಂಗೆ ಮನವಿ ಮಾಡುತ್ತೇವೆ. ಆದರೆ, ನನ್ನನ್ನು ಸೇರಿಸಿ ಯಾರೇ ಆಗಲಿ ಸೂರ್ಯಚಂದ್ರ ಇರೋವರೆಗೂ ನಾವೇ ಅಧಿಕಾರದಲ್ಲಿ ಇರ್ತೇವೆ ಎನ್ನೋ ಭ್ರಮೆಯಲ್ಲಿ ಇರಬಾರದು. ಜನ ಯಾರನ್ನ ಯಾವಾಗ ಎಲ್ಲಿ ಇಡಬೇಕೋ ಅಲ್ಲಿಡತಾರೆ. ಜನರು ಈಗಿನ ಬೆಳವಣಿಗೆಗಳನ್ನೆಲ್ಲ ಗಮನಿಸತ್ತಿದ್ದಾರೆ ಎಂದು ತೀಕ್ಷಣವಾಗಿ ಹೇಳಿದರು.ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಮನವಿ ಮಾಡ್ತೇವೆ. ಕೂಡಲಸಂಗಮದ ಮಠದಲ್ಲಿ ಬೇರೆ ಸಮಾಜದವರನ್ನು ನೇಮಿಸಿ, ಫೋಟೋ ತೆಗೆಯೋದು ಕಳಿಸೋದು ಇದು ಯಾವ ಜಗತ್ತಿನಲ್ಲಿದೆ. ಒಂದು ಪೀಠದಿಂದ ಸ್ವಾಮೀಜಿಯನ್ನು ಹೊರ ಹಾಕುವಾಗ, ಅವರ ಪಕ್ಷದ ಹೈಕಮಾಂಡ್ನಿಂದಲೂ ಯಾವುದೇ ನಿಯಂತ್ರಣವಿಲ್ಲ. ನಾವು ಎಲ್ಲರೂ ಕೂಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ, ಅದ್ರೆ ಕಾಶಪ್ಪನವರ ಯಾರ ಮಾತು ಕೇಳುವ ಸ್ಥಿತಿಯಲ್ಲಿಲ್ಲ. ಹೀಸ್ ಅಜೆಂಡಾ ಈಸ್ ಡಿಫರೆಂಟ್, ಮಂತ್ರಿಗಿರಿ ಆಗಿದೆ ಎಂದರು.
ಕಾಶಪ್ಪನವರ ಆಚಾರ, ವಿಚಾರ ಎಲ್ಲರಿಗೂ ಗೊತ್ತು:ಮಠದಲ್ಲಿ ಕುಳಿತು ಆಚಾರ ವಿಚಾರ ಹೇಳುವ ಸ್ವಾಮೀಜಿ ನೇಮಕ ಮಾಡ್ತೀವಿ ಎಂಬ ಕಾಶಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ ಸಿ.ಸಿ. ಪಾಟೀಲ, ಕಾಶಪ್ಪನವರ ಆಚಾರ, ವಿಚಾರ ಎಂತವು ಎನ್ನುವುದು ಮಾಧ್ಯಮಗಳಿಗೆ ಗೊತ್ತಿಲ್ಲವೇ? ವಿನಾಕಾರಣ ಅವರ ಬಗ್ಗೆ (ಕಾಶಪ್ಪನವರ) ಕೇಳಬೇಡಿ. ಹುಚ್ಚರ ರೀತಿ ವಾಪಸ್ ಮಾತಾಡ್ತಾರೆ. ನಾನು ಪೀಠ, ಗುರುಗಳ ಬಗ್ಗೆ ಮಾತನಾಡುತ್ತೇನೆ. ಮೀಸಲಾತಿ ಬೇಕಾದ ಜನರ ಹೃದಯದಲ್ಲಿ ಶ್ರೀಗಳಿದ್ದಾರೆ. ನಾನು ಅವರಿಗೆ ಮೂರು ಪ್ರಶ್ನೆ ಕೇಳ್ತೇನೆ, ಪೀಠ ಕಟ್ಟೋಕೆ ದುಡ್ಡು ಕೊಟ್ಟವರು ಮುರುಗೇಶ ನಿರಾಣಿ. ಅಭಿವೃದ್ಧಿಗೆ ದುಡ್ಡು ಕೊಟ್ಟವರು ಯಡಿಯೂರಪ್ಪ, ಸದಾನಂದಗೌಡರ ಸರ್ಕಾರಗಳು. ಇವರಿಂದ ಆ ಪೀಠಕ್ಕೆ ಏನಾದ್ರೂ ಸಹಾಯ ಆಗಿದೆಯಾ? ಕಿಂಚಿತ್ತಾದರೈ ಪೀಠಕ್ಕೆ ಇವರ ಕೊಡಗೆ ಇದೆಯಾ? ಅಖಿಲ ಭಾರತ ಅಧ್ಯಕ್ಷ-ಪದ್ಯಕ್ಷ ಅವೆಲ್ಲ ಸ್ವಯಂ ಘೋಷಿತ. ಯಾವ ಕಾರಣಕ್ಕೆ ಈ ನಡೆ? ಪಾದಯಾತ್ರೆ ಮಾಡಬೇಕಾದ್ರೆ ಶ್ರೀಗಳು ಬೇಕಾದ್ರು, ಪತ್ನಿ ವೀಣಾಗೆ ಎಂ.ಪಿ. ಟಿಕೆಟ್ ಬೇಕಾದಾಗ ಇದೇ ಶ್ರೀಗಳು ಬೇಕಾದ್ರು, ಎಲ್ಲವನ್ನೂ ಸಮಾಜ ನೋಡ್ತಿದೆ ಸ್ವಾಮಿ, ಅಧಿಕಾರ ಶಾಶ್ವತ ಅಲ್ಲ. ಅಧಿಕಾರದಲ್ಲಿ ಇದ್ದವರು ಏನೇನು ಆದ್ರು ಎಂಬುದನ್ನು ರಾಜ್ಯದ ಜನ, ದೇಶದ ಜನ ನೋಡಿದೆ. ಅಧಿಕಾರಕ್ಕಿಂತ ಧರ್ಮ, ಜಾತಿ ಮುಖ್ಯ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಮೇರೆಗೆ ಪಂಚಮಸಾಲಿ ಪೀಠ ಸ್ಥಾಪನೆ ಆಗಿದೆ. ಅದು ಕೂಡ ಕೂಡಲಸಂಗಮದಂತಹ ಪವಿತ್ರ ಸ್ಥಳದಲ್ಲಿದೆ. ಅಂತಹ ಸ್ಥಳದಲ್ಲಿದ್ದುಕೊಂಡು ಒತ್ತಡ, ಹಿಂಸೆ ಕೊಡೋದು ಸರಿಯಲ್ಲ, ಸನ್ಯಾಸಿ ಕಣ್ಣಲ್ಲಿ ನೀರು ತರಿಸಿದ ವ್ಯಕ್ತಿ ನೆಮ್ಮದಿಯಿಂದ ಬದುಕಿದ ಉದಾಹರಣೆ ಇಲ್ಲ. ನಾವು ಮನವಿ ಮಾಡಿದರೂ ಕೇಳಿಸಿಕೊಳ್ಳುವ ಮನಸ್ಥಿತಿಯಲ್ಲಿ ಕಾಶಪ್ಪನವರ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಈಗಲೂ ಕಾಶಪ್ಪನವರ ಅವರಿಗೆ ಮನವಿ ಮಾಡ್ತೇನೆ. ಅವ್ರ ಮಟ್ಟದ ಭಾಷೆ ಬಳಿಸಲು ನನ್ನಲ್ಲಿ ಆ ಸಂಸ್ಕೃತಿ ಇಲ್ಲ. ನೂನ್ಯತೆಗಳಿದ್ದರೆ ಸಮಾಜದ ಹಿರಿಯರು ಸೇರಿ ಬಗೆಹರಿಸಿಕೊಳ್ಳಲಿ ಎಂದು ಸಿಸಿ ಪಾಟೀಲ ಕಿವಿಮಾತು ಹೇಳಿದರು.ಕೂಡಲಸಂಗಮ ಪೀಠ ಯಾರಪ್ಪನ ಸ್ವತ್ತಲ್ಲ:ಪಂಚಮಸಾಲಿ ಸಮಾಜದ ವತಿಯಿಂದ ಸ್ವಾಮೀಜಿಗಳಿಗೆ ಭರವಸೆ ಕೊಡುತ್ತೇವೆ. ನೆಮ್ಮದಿಯಾಗಿ ಉತ್ಸುಕತೆಯಿಂದ ಕೆಲಸ ಮಾಡುವಂತಹ ವಾತಾವರಣ ನಿರ್ಮಾಣ ಮಾಡ್ತೇವೆ. ಅದಕ್ಕೆ ಬೇಕಾಗುವ ಎಲ್ಲಾ ಸಹಾಯ ಮಾಡಲು ಪಂಚಮಸಾಲಿ ಸಮಾಜ ಸಿದ್ಧವಾಗಿದೆ. ಪರ್ಯಾಯ ಪೀಠ ಮಾಡಲು ಕೂಡಲಸಂಗಮ ಪೀಠ ಯಾರಪ್ಪನ ಸ್ವತ್ತಲ್ಲ? ಇದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ವತ್ತು. ಇಲ್ಲಿ ಯಾರನ್ನೂ ಬರಲು ಬಿಡೋದಿಲ್ಲ ಎಂದು ಹೇಳಬಹುದು, ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ನಿರಪರಾಧಿಗಳ ಮೇಲೆ ಕೇಸ್ ಮಾಡ್ಸಿದ್ದಾರೆ. ಸಮಾಜ ಸಂಘಟನೆ ಮಾಡಲು ಸ್ವಾಮೀಜಿಯವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.
ದೀಪ ಆರುವಾಗ ಹೆಚ್ಚಿಗೆ ಉರಿಯುತ್ತೆ:ಶ್ರೀಗಳು ಸಂಪೂರ್ಣ ಗುಣಮುಖರಾಗಲಿ, ಬಳಿಕ ನಿಮ್ಮ ನಿರ್ಣಯ ತಿಳಿಸಿ ಅಂದಿದ್ದೇವೆ. ಶ್ರಾವಣ ಮಾಸದಲ್ಲಿ ಎಲ್ಲ ಹಿರಿಯರ ಸಭೆ ಮಾಡಿ ನಿರ್ಧಾರ ಮಾಡೋಣ. ಯಾವುದಕ್ಕೂ ಟೆನ್ಷನ್ ಮಾಡ್ಕೋಬೇಡಿ ಎಂದು ಶ್ರೀಗಳಿಗೆ ಸಾಂತ್ವನ ಹೇಳಿದ್ದೇವೆ. ಸ್ವಾಭಾವಿಕವಾಗಿ ಸ್ವಾಮೀಜಿ ಮನಸ್ಸಿಗೆ ನೋವಾಗಿದೆ. ಬೀಗ ಹಾಕೋದು ಮತ್ತೆ ಶುರುವಾಗಿದೆ. ಒಂದು ದೀಪ ಆರಬೇಕಾದರೆ ಹೆಚ್ಚಿಗೆ ಉರಿದು ಆರುತ್ತೆ ಎಂದು ಹರಿಹಾಯ್ದರು.