ಕಟೀಲು: ತುಳು ವರ್ಲ್ಡ್ ಫೌಂಡೇಶನ್‌ ಪ್ರಧಾನ ಕಚೇರಿ ಉದ್ಘಾಟನೆ

| Published : Dec 28 2024, 01:01 AM IST

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ತುಳುವರ್ಲ್ಡ್ ಫೌಂಡೇಶನ್‌ ಪ್ರಧಾನ ಕಚೇರಿ ಉದ್ಘಾಟನೆಗೊಂಡಿತು. ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಉದ್ಘಾಟನೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಜಾತಿ, ಮತ, ಭಾಷೆ ಭೇದವಿಲ್ಲದೆ ತುಳುನಾಡಿನಲ್ಲಿ ಸರ್ವರನ್ನು ಅನುಗ್ರಹಿಸುವ ಕಟೀಲು ದುರ್ಗೆ ಸನ್ನಿದಿಯಲ್ಲಿ ಪಂಗಡ ಬೇಧ, ಭಾವವಿಲ್ಲದೆ ಒಗ್ಗೂಡಿಸುವ ಮನೋಭಾವದಿಂದ ತುಳುವರ್ಲ್ಡ್ ಫೌಂಡೇಶನ್ ಕಾರ್ಯ ನಿರ್ವಹಿಸುತ್ತಿದೆ. ಕಟ್ಟುಕಥೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕು ಹಾಗೂ ಸತ್ಯ ಅಸತ್ಯಗಳ ಬಗ್ಗೆ ಮನವರಿಕೆ ಮಾಡುವ ಕೆಲಸ ಆಗಬೇಕು ಎಂದು ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ತುಳುವರ್ಲ್ಡ್ ಫೌಂಡೇಶನ್‌ ಪ್ರಧಾನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುವರಿಗೆ ಪ್ರತ್ಯೇಕ ರಾಜ್ಯ ಸ್ಥಾನಮಾನಗಳು ಯಾವುವೂ ಇಲ್ಲದಿದ್ದರೂ ತುಳು ಭಾಷೆ ಇಂದಿಗೂ ರಾಜ ಮರ್ಯಾದೆಯಲ್ಲಿ ಇದೆ. ಇದಕ್ಕೆ ಕಾರಣ ನಾವು ನಂಬಿಕೊಂಡು ಬಂದಿರುವ ದೈವ ದೇವರುಗಳು. ಮಹಾಸಭೆ ಹೆಸರಿನಲ್ಲಿ ತುಳುನಾಡು ಕೂಟಗಳನ್ನು ರಚಿಸಲಿದೆ. ತುಳುನಾಡಿನ ಎಲ್ಲಾ ಗ್ರಾಮಗಳಲ್ಲಿ ಈ ಕೂಟಗಳನ್ನು ರಚಿಸ ಬೇಕಾಗಿದ್ದು ಎಲ್ಲಾ ತುಳುವರು ಈ ಯೋಜನೆಯಲ್ಲಿ ಭಾಗಿಯಾಗಬೇಕು. ಇದಕ್ಕಾಗಿ ಕಟೀಲು ತಾಯಿಯ ಸನ್ನಿಧಿಯಲ್ಲಿ ತುಳುವ ಮಹಾಸಭೆಯ ಯೋಜನೆಗಳಿಗೆ ಚಾಲನೆ ನೀಡಲಾಗಿದೆ, ಇದೀಗ ತುಳುವ ಮಹಾಸಭೆಗೆ 96 ವರ್ಷಗಳು ಪೂರ್ತಿಯಾಗಿದ್ದು, 100ನೇ ವರ್ಷ 2028ರಲ್ಲಿ ವಿಶ್ವ ತುಳುವ ಮಹಾಸಭೆ ನಡೆಸಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ತುಳು ಅಕಾಡೆಮಿ ಮಾಜಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ವಜ್ರಾಕ್ಷಿ ಬಾಲಕೃಷ್ಣ ಶೆಟ್ಟಿ ಪೊಳಲಿ, ದಿವಾಕರ ಶೆಟ್ಟಿ ಸಾಂಗ್ಲಿ, ಕಟೀಲ್ ಕಾಲೇಜು ಪ್ರಾಂಶುಪಾಲ ಡಾ. ವಿಜಯ್. ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ, ಯೋಗೀಶ್ ಶೆಟ್ಟಿ ಜೆಪ್ಪು, ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಪುತ್ತೂರು ತುಳುಕೂಟ ಅಧ್ಯಕ್ಷ ಪಾಟ್ರಿಕ್ ಸಿಪ್ರಿಯನ್ಸ್ ಮಸ್ಕರೇನಸ್, ಸುಧಾಕರ ಶೆಟ್ಟಿ ಕಟೀಲು, ವಿಶ್ವನಾಥ ಶೆಟ್ಟಿ ಕಟೀಲು, ಶಂಕರ ಶೆಟ್ಟಿ ಕಟೀಲು, ಉಮೇಶ್ ಶೆಟ್ಟಿ ಕಟೀಲು, ಡಾ. ಮಂದಾರ ರಾಜೇಶ್ ಭಟ್, ಚಂದ್ರಹಾಸ ದೇವಾಡಿಗ ಮೂಡುಬಿದಿರೆ, ಮುರಳಿ ಭಟ್ ಉಪ್ಪಂಗಳ, ಸಂಜೀವ ಪಾಂಡೇಶ್ವರ, ಮಂಜುನಾಥ ಅಡಪ್ಪ, ಪ್ರಕಾಶ್ ಪಾವಂಜೆ ಐಲೇಸ, ಪದ್ಮಶ್ರೀ ಭಟ್ ನಿಡ್ಡೋಡಿ ಮತ್ತಿತರರು ಇದ್ದರು.

ತುಳುವರ್ಲ್ಡ್ ಫೌಂಡೇಶನ್‌ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬಲ್ಯಾಯ ನಿರೂಪಿಸಿದರು. ಪ್ರಧಾನ ಸಂಚಾಲಕ ಪ್ರಮೋದ್ ಸಪ್ರಿ ಸ್ವಾಗತಿಸಿದರು. ಡಾ. ರಾಜೇಶ್ ಆಳ್ವ ಬದಿಯಡ್ಕ ವಂದಿಸಿದರು.

ಬೊಲಿಕೆ ಜಾನಪದ ಕಲಾವಿದರಾದ ಶಂಕರ ಸ್ವಾಮಿಕೃಪಾ ಮತ್ತು ತಂಡದವರಿಂದ ಪಾಡ್ಡನ ಮೇಳ ನಡೆಯಿತು.